"ಭಾರತದಲ್ಲಿ ಹೂಡಿಕೆಗೆ ಇದು ಸಕಾಲ": ದಾವೋಸ್ನಲ್ಲಿ ಮೋದಿ ಭಾಷಣ
ನವದೆಹಲಿ, ಜನವರಿ 17: ಭಾರತದಲ್ಲಿ ಹೂಡಿಕೆಗೆ ಇದು ಅತ್ಯುತ್ತಮ ಕಾಲ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ವಿಶ್ವದ ನಾಯಕರನ್ನು ಉದ್ದೇಶಿಸಿ ವಿಶೇಷ ಭಾಷಣ ಮಾಡಿದ್ದಾರೆ. ಈ ವೇಳೆ ದೇಶವನ್ನು ವಿಶ್ವದ "ಅತ್ಯಂತ ಆಕರ್ಷಕ" ಹೂಡಿಕೆ ತಾಣವನ್ನಾಗಿ ಮಾಡಲು ಕೈಗೊಂಡಿರುವ ವಿವಿಧ ಕ್ರಮಗಳ ಬಗ್ಗೆ ವಿವರಿಸಿ ಹೇಳಿದ್ದಾರೆ.
ವಿಶ್ವ ಆರ್ಥಿಕ ವೇದಿಕೆಯ (WEF) ಐದು ದಿನಗಳ ಆನ್ಲೈನ್ 'ದಾವೋಸ್ ಅಜೆಂಡಾದಲ್ಲಿ ಮಾತನಾಡಿದ ಅವರು, ಭಾರತೀಯ ಯುವಕರು ಉದ್ಯಮಶೀಲ ಮನೋಭಾವವನ್ನು ಹೊಂದಿದ್ದಾರೆ. ಹೊಸ ತಂತ್ರಜ್ಞಾನವನ್ನು ಆವಿಷ್ಕರಿಸಲು ಮತ್ತು ಅಳವಡಿಸಿಕೊಳ್ಳಲು ತೀವ್ರವಾಗಿ ಉತ್ಸುಕರಾಗಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.
ಎಚ್ಚರಿಕೆ: ಕರ್ನಾಟಕದಲ್ಲಿ ತುರ್ತು ಅಗತ್ಯವಿಲ್ಲದೇ ಆಸ್ಪತ್ರೆಗೆ ಹೋಗಬೇಡಿ
"ಭಾರತೀಯ ಯುವಕರು ನಿಮ್ಮ ವ್ಯವಹಾರಗಳು ಮತ್ತು ಆಲೋಚನೆಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಸಿದ್ಧರಾಗಿದ್ದಾರೆ. ನಮ್ಮ ಜಾಗತಿಕ ಕೌಶಲಗಳೊಂದಿಗೆ ಭಾರತವು 2021ರಲ್ಲಿ 60,000ಕ್ಕೂ ಹೆಚ್ಚು ಸ್ಟಾರ್ಟ್ ಅಪ್ಗಳನ್ನು ನೋಂದಾಯಿಸಿದೆ," ಎಂದರು. ಸೋಮವಾರ ಬೆಳಗ್ಗೆ ಮಾತನಾಡಿದ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಜೊತೆ, ಪ್ರಧಾನಿ ನರೇಂದ್ರ ಮೋದಿಯವರ ವಿಶೇಷ ಭಾಷಣವು ಮೊದಲ ದಿನದ ಹೈಲೈಟ್ ಆಗಿದೆ.
ಭಾರತದ ಬದ್ಧತೆ ಬಗ್ಗೆ ಪ್ರಧಾನಿ ಮೋದಿ ಉಲ್ಲೇಖ:
ದೇಶದಲ್ಲಿ ಆರ್ಥಿಕ ಬೆಳವಣಿಗೆಯು ನಿತ್ಯ ಹಸಿರು, ಸ್ವಚ್ಛ, ಸುಸ್ಥಿರ ಹಾಗೂ ವಿಶ್ವಾಸಾರ್ಹವಾಗಿರುತ್ತದೆ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು. ಹವಾಮಾನ ಬದಲಾವಣೆ ಮತ್ತು ಹಸಿರು ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ಸರ್ಕಾರ ತೆಗೆದುಕೊಳ್ಳುತ್ತಿರುವ ವಿವಿಧ ಉಪಕ್ರಮಗಳ ಬಗ್ಗೆ ಭಾರತದ ಬದ್ಧತೆಯನ್ನು ಎತ್ತಿ ತೋರಿಸಿದರು. ಹೆಚ್ಚು ಹವಾಮಾನ ಪ್ರಜ್ಞೆಯನ್ನು ಹೊಂದಲು ಜೀವನಶೈಲಿಯಲ್ಲಿ ಬದಲಾವಣೆಯ ಬಗ್ಗೆ ಪಿಎಂ ಮೋದಿ ಸುದೀರ್ಘವಾಗಿ ಮಾತನಾಡಿದರು.
ಜಗತ್ತಿಗೆ ಭಾರತದಿಂದ ಭರವಸೆ ಪುಷ್ಪಗುಚ್ಛ:
"ಭಾರತವು ಜಗತ್ತಿಗೆ 'ಭರವಸೆಯ ಪುಷ್ಪಗುಚ್ಛ' ನೀಡುತ್ತದೆ. ಇದು ಪ್ರಜಾಪ್ರಭುತ್ವದಲ್ಲಿ ನಮ್ಮ ನಂಬಿಕೆಯನ್ನು ಒಳಗೊಂಡಿದೆ; ಇದು ನಮ್ಮ ತಂತ್ರಜ್ಞಾನ, ನಮ್ಮ ಮನೋಧರ್ಮ ಮತ್ತು ಪ್ರತಿಭೆಯನ್ನು ಒಳಗೊಂಡಿದೆ," ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು. ಭಾರತದಲ್ಲಿ ತಂತ್ರಜ್ಞಾನ ಮತ್ತು ಡಿಜಿಟಲ್ ಮೂಲಸೌಕರ್ಯದಲ್ಲಿನ ಆವಿಷ್ಕಾರಗಳು, ತಂತ್ರಜ್ಞಾನಗಳ ಕ್ಷಿಪ್ರ ಅಳವಡಿಕೆ, ಆರೋಗ್ಯ ಸೇತು ಮತ್ತು ಕೋವಿನ್ನಂತಹ ತಾಂತ್ರಿಕ ಪರಿಹಾರಗಳು ಮತ್ತು ದೇಶದಲ್ಲಿ ಏಕೀಕೃತ ಪಾವತಿಗಳ ಇಂಟರ್ಫೇಸ್ನಂತಹ 'ವ್ಯವಹಾರ'ವನ್ನು ಬಲಪಡಿಸಲು ತೆರಿಗೆ ಸುಧಾರಣೆಗಳ ಬಗ್ಗೆ ಪ್ರಧಾನಿ ಮೋದಿ ವಿವರಿಸಿದರು.
ಜಗತ್ತಿನ ಆಕಾಂಕ್ಷೆಗಳನ್ನು ಪೂರೈಸುವ ಭರವಸೆ:
"ನಾವು ಸುಧಾರಣೆಯ ದಿಕ್ಕಿನಲ್ಲಿ ಸರಿಯಾಗಿ ಸಾಗುತ್ತಿದ್ದೇವೆ. ಜಾಗತಿಕ ಆರ್ಥಿಕ ತಜ್ಞರು ಈಗಾಗಲೇ ಭಾರತದ ನಿರ್ಧಾರಗಳನ್ನು ಶ್ಲಾಘಿಸಿದ್ದಾರೆ. ನಾವು ಭಾರತದಲ್ಲಿ ಇದ್ದುಕೊಂಡು ವಿಶ್ವದ ಹಲವು ಆಕಾಂಕ್ಷೆಗಳನ್ನು ಪೂರೈಸುತ್ತೇವೆ ಎಂಬುದರ ಬಗ್ಗೆ ನನಗೆ ಖಚಿತವಾಗಿದೆ," ಎಂದು ಮೋದಿ ಹೇಳಿದ್ದಾರೆ. ಇಂದು ಭಾರತವು ವಿಶ್ವದ 3ನೇ ಅತಿ ದೊಡ್ಡ ಫಾರ್ಮಾ ಉತ್ಪಾದಕ ರಾಷ್ಟ್ರವಾಗಿದೆ. ಕೊವಿಡ್ ಸಮಯದಲ್ಲಿ, ಭಾರತವು 'ಒಂದು ಭೂಮಿ, ಒಂದು ಆರೋಗ್ಯ' ಎಂಬ ದೃಷ್ಟಿಯನ್ನು ಅನುಸರಿಸಿ ಅನೇಕ ದೇಶಗಳಿಗೆ ಅಗತ್ಯ ಔಷಧಗಳು ಮತ್ತು ಲಸಿಕೆಗಳನ್ನು ನೀಡುವ ಮೂಲಕ ಕೋಟಿಗಟ್ಟಲೆ ಜೀವಗಳನ್ನು ಹೇಗೆ ಉಳಿಸುತ್ತಿದೆ ಎಂಬುದನ್ನು ನಾವು ನೋಡಿದ್ದೇವೆ ಎಂದು ಹೇಳಿದರು.
50 ವರ್ಷಗಳಿಂದ ನಡೆಯುತ್ತಿರುವ ದಾವೋಸ್ ಸಮ್ಮೇಳನ:
ಕಳೆದ 50 ವರ್ಷಗಳಿಂದ ದಾವೋಸ್ ಸಮ್ಮೇಳನ ನಡೆಯುತ್ತಿದ್ದು, ರಾಜಕೀಯ ಮತ್ತು ಕಾರ್ಪೊರೇಟ್ ಉದ್ದೇಶಗಳ ಕುರಿತು ನೇರಾನೇರ ಚರ್ಚೆಗೆ ವೇದಿಕೆಯಾಗುತ್ತಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ ಆನ್ಲೈನ್ ಮೂಲಕ ಪ್ರಮುಖ ರಾಷ್ಟ್ರಗಳು ಈ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.
ಜನವರಿ 18ರ ಮಂಗಳವಾರ ಇಸ್ರೇಲಿ ಪ್ರಧಾನಿ ನಫ್ತಾಲಿ ಬೆನೆಟ್ ಮತ್ತು ಜಪಾನ್ನ ಪ್ರಧಾನಿ ಕಿಶಿದಾ ಫ್ಯೂಮಿಯೊ ವಿಶೇಷ ಭಾಷಣ ಮಾಡಲಿದ್ದಾರೆ. ಈ ನಡುವೆ ಜಾಗತಿಕ ಸಾಮಾಜಿಕ ಒಪ್ಪಂದ ಮತ್ತು ಲಸಿಕೆ ಇಕ್ವಿಟಿಯ ಸವಾಲುಗಳ ಕುರಿತು ವಿಶೇಷ ಅಧಿವೇಶನಗಳು ನಡೆಯಲಿದ್ದು, ಇದರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಗೆಬ್ರೆಯೆಸಸ್ ಭಾಗವಹಿಸಲಿದ್ದಾರೆ. ಇದರ ಜೊತೆಗೆ ಕೊವಿಶೀಲ್ಡ್ ಲಸಿಕೆಯನ್ನು ಉತ್ಪಾದಿಸುತ್ತಿರುವ ಪುಣೆಯ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯಸ್ಥ ಅದಾರ್ ಪೂನಾವಾಲ ಸೇರಿದಂತೆ ಹಲವು ಹಾಜರಾಗಲಿದ್ದಾರೆ.