ಎಬಿವಿಪಿಯಿಂದ ಸಿಎಂ ಗಾದಿಗೆ, ಹಿಮಾಚಲದ ನೂತನ ಸಾರಥಿ ಜೈರಾಮ್
ಶಿಮ್ಲಾ, ಡಿಸೆಂಬರ್ 24: ಹಿಮಾಚಲ ಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಐದು ಬಾರಿಯ ಶಾಸಕ ಜೈರಾಮ್ ಠಾಕೂರ್ ಆಯ್ಕೆಯಾಗಿದ್ದಾರೆ.
ಹಿಮಾಚಲಪ್ರದೇಶ ಮುಖ್ಯಮಂತ್ರಿಯಾಗಿ ಜೈರಾಮ್ ಠಾಕೂರ್
ಸಾಮಾನ್ಯ ರಜಪೂತ ಕೃಷಿ ಕುಟುಂಬದಲ್ಲಿ 6 ಜನವರಿ 1965ರಲ್ಲಿ ಹುಟ್ಟಿದ ಜೈರಾಮ್ ಠಾಕೂರ್ ಓದಿದ್ದು ಎಂ.ಎ. ಪದವಿ. ಕಾಲೇಜು ದಿನಗಳಲ್ಲೇ ರಾಜಕೀಯದತ್ತ ಆಕರ್ಷಿತರಾದ ಜೈರಾಮ್ ಮೊದಲು ಸೇರಿದ್ದು ಬಿಜೆಪಿಯ ವಿದ್ಯಾರ್ಥಿ ಸಂಘಟನೆ ಎಬಿವಿಪಿ.
ಇಂದು ಹಿಮಾಚಲ ಸಿಎಂ ಆಯ್ಕೆ, ರೇಸ್ ನಲ್ಲಿ ಜೈರಾಮ್, ಜೆಪಿ ನಡ್ಡಾ
ಪದವಿ ಓದುತ್ತಿದ್ದಾಗಲೇ ಎಬಿವಿಪಿ ಸೇರಿದ ಜೈರಾಮ್ ಮಂಡಿ ಕಾಲೇಜಿನಲ್ಲಿ ಎಬಿವಿಪಿಯಿಂದ ಸ್ಪರ್ಧಿಸಿ ಚುನಾವಣೆ ಗೆದ್ದಿದ್ದರು. ಮುಂದೆ 1986ರಲ್ಲಿ ರಾಜ್ಯ ಎಬಿವಿಪಿಯ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಹೀಗೆ ಸಕ್ರಿಯ ರಾಜಕಾರಣಕ್ಕೆ ಧುಮುಕಿದ ಜೈರಾಮ್ ನಂತರ ಹಿಂತುರುಗಿ ನೋಡಿದವರಲ್ಲ.
ಒಲಿದು ಬಂದ ರಾಜ್ಯಾಧ್ಯಕ್ಷ ಹುದ್ದೆ
1993-95ರ ಅವಧಿಗೆ ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದರು. ಮುಂದೆ 1998ರಲ್ಲಿ ಜೈರಾಮ್ ಪಾಲಿಗೆ ರಾಜ್ಯ ವಿಧಾನಸಭೆಯ ಬಾಗಿಲು ತೆರೆಯಿತು. ಚಚಿಯೋಟ್ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸಿದ ಜೈರಾಮ್ ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬಂದರು. 2000-03ರ ಅವಧಿಗೆ ಮಂಡಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಠಾಕೂರ್ ಗೆ, 2006-09ರ ಅವಧಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ಹುದ್ದೆಯೂ ಒಲಿದು ಬಂತು.
5 ಬಾರಿಯ ಶಾಸಕ
ನಂತರ 2003, 2007ರಲ್ಲಿ ಮತ್ತೆ ವಿಧಾನಸಭೆಗೆ ಆಯ್ಕೆಯಾದರು. ನಂತರ ಸೆರಾಜ್ ಕ್ಷೇತ್ರದಿಂದ ಎರಡು ಬಾರಿ ಗೆಲ್ಲುವ ಮೂಲಕ ಸತತ 5 ಬಾರಿ ವಿಧಾನಸಭೆಗೆ ಆಯ್ಕೆಯಾದ ಸಾಧನೆ ಜೈರಾಮ್ ರದ್ದು. ಈ ಅವಧಿಯಲ್ಲಿ ಮಂಡಿ ಭಾಗದಲ್ಲಿ ಪ್ರಭಾವಿ ನಾಯಕರಾಗಿ ಜೈರಾಮ್ ಬೆಳೆದು ಬಿಟ್ಟಿದ್ದರು.
ಮಾಜಿ ಕ್ಯಾಬಿನೆಟ್ ಸಚಿವ
ಪರಿಣಾಮ ಮೊನ್ನೆ ನಡೆದ ಚುನಾವಣೆಯಲ್ಲಿ ಮಂಡಿ ಭಾಗದ 10 ಕ್ಷೇತ್ರಗಳಲ್ಲಿ 9ರಲ್ಲಿ ಬಿಜೆಪಿ ಜಯಶಾಲಿಯಾಗಿತ್ತು. ಇದರ ಹಿಂದಿದ್ದವರು ಮತ್ತದೇ ಜೈರಾಂ ಎಂದು ಬಿಡಿಸಿ ಹೇಳಬೇಕಿಲ್ಲ.
ಈ ರೀತಿ ರಾಜಕೀಯ ಅನುಭವ ಪಡೆದುಕೊಂಡ ಜೈರಾಮ್ ಠಾಕೂರ್ ಆಡಳಿತದ ಅನುಭವವನ್ನೂ ಪಡೆದುಕೊಂಡರು. 2007-12ರ ಬಿಜೆಪಿ ಸರಕಾರದಲ್ಲಿ ಜೈರಾಮ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸಿದ್ದರು.
ಒಲಿದು ಬಂದ ಮುಖ್ಯಮಂತ್ರಿ ಹುದ್ದೆ
ಹೀಗಾಗಿ ಆಡಳಿತದ ಅನುಭವ, ಜತೆಗೆ ಪಕ್ಷದಲ್ಲೂ ಹುದ್ದೆಗಳನ್ನು ನಿಭಾಯಿಸಿ ಬಿಜೆಪಿ ನಾಯಕರ ಮನಗೆಲ್ಲುವಲ್ಲಿ ಅವರು ಯಶಸ್ವಿಯಾಗಿದ್ದರು. ಜತೆಗೆ ಕೇಂದ್ರ ಸಚಿವ, ಬಿಜೆಪಿ ಪ್ರಭಾವಿ ಮುಖಂಡ ಜೆಪಿ ನಡ್ಡಾರಿಗೆ ಜೈರಾಮ್ ಠಾಕೂರ್ ಆಪ್ತರೂ ಆಗಿದ್ದು ಪರಿಣಾಮ ಮುಖ್ಯಮಂತ್ರಿ ಹುದ್ದೆ ಒಲಿದು ಬಂದಿದೆ.
ಇನ್ನೊಂದು ವಿಶೇಷವೆಂದರೆ ಜೈರಾಮ್ ಠಾಕೂರ್ ಪತ್ನಿ ಡಾ. ಸಾಧನಾ ಠಾಕೂರ್ ನಮ್ಮದೇ ಶಿವಮೊಗ್ಗ ಜಿಲ್ಲೆಯವರು.