ಬ್ಯಾಂಕಿಂಗ್ ವಿಜಿಲೆನ್ಸ್ ಗಾಗಿ ಪ್ರಶಸ್ತಿ ಪಡೆದಿದ್ದ ಪಿಎನ್ಬಿಗೆ 11,400 ಕೋಟಿ ಪಂಗನಾಮ!
ನವದೆಹಲಿ, ಫೆಬ್ರವರಿ 19: ವೈಚಿತ್ರ್ಯ ಎಂದರೆ ಇದೆ. ಬ್ಯಾಂಕಿಂಗ್ ವಿಜಿಲೆನ್ಸ್ (ಉತ್ತಮ ಕಣ್ಗಾವಲು ವ್ಯವಸ್ಥೆ) ಗಾಗಿ ಮೂರು ಪ್ರಶಸ್ತಿ ಪಡೆದಿದ್ದ ಬ್ಯಾಂಕ್ ಪಂಜಾಬ್ ನ್ಯಾಷನಲ್ ಬ್ಯಾಂಕ್. ಅದೇ ಬ್ಯಾಂಕಿಗೆ ಜುವೆಲ್ಲರಿ ಉದ್ಯಮಿ ನೀರವ್ ಮೋದಿ 11,400 ಕೋಟಿ ಪಂಗನಾಮ ಹಾಕಿದ್ದಾರೆ. ಅದೂ ಅದೇ ಬ್ಯಾಂಕಿನ ಅಧಿಕಾರಿಗಳು ಮತ್ತು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ನ್ಯೂನ್ಯತೆಗಳನ್ನು ಬಳಸಿಕೊಂಡು ಈ ವಂಚನೆ ನಡೆಸಲಾಗಿದೆ.
7 ವರ್ಷಗಳ ಅವಧಿಯಲ್ಲಿ ಬ್ಯಾಂಕಿಗೆ 11,400 ಕೋಟಿ ವಂಚಿಸಲಾಗಿದೆ. ಇದರಲ್ಲಿ 2017ನೇ ಇಸವಿಯಲ್ಲಿ ಹೆಚ್ಚಿನ ವಂಚನೆ ನಡೆದಿದ್ದರೆ ಅದೇ ವರ್ಷ ಬ್ಯಾಂಕ್ ವಿಜಿಲೆನ್ಸ್ ಗಾಗಿ 2 ಪ್ರಶಸ್ತಿಗಳನ್ನು ಪಡೆದುಕೊಂಡಿತ್ತು ಎಂಬುದು ಗಮನಾರ್ಹ. ಕೇಂದ್ರ ವಿಚಕ್ಷಣ ಆಯುಕ್ತ (ಸಿವಿಸಿ) ಕೆವಿ ಚೌಧರಿ ಈ ಪ್ರಶಸ್ತಿಗಳನ್ನು ಬ್ಯಾಂಕಿಗೆ ನೀಡಿದ್ದರು.
ಅದು 2017ರ ಮಾರ್ಚ್ ತಿಂಗಳು. ಹೈದರಾಬಾದ್ ನ ಒಸ್ಮಾನಿಯಾ ವಿವಿಯಲ್ಲಿ ಸಾರ್ವಜನಿಕ ಉದ್ಯಮ ಸಂಸ್ಥೆ (IPE) 'ವಿಜಿಲೆನ್ಸ್ ಕಾನ್ಕ್ಲೇವ್' ಕಾರ್ಯಕ್ರಮ ಆಯೋಜಿಸಿತ್ತು. ಇದರಲ್ಲಿ ಭಾಗವಹಿಸಿದ್ದ ಪಿಎನ್ಬಿ ಮುಖ್ಯ ವಿಚಕ್ಷಣ ಅಧಿಕಾರಿ ಎಸ್.ಕೆ ನಾಗ್ಪಾಲ್ 'ಕಾರ್ಪೊರೇಟ್ ವಿಜಿಲೆನ್ಸ್ ಎಕ್ಸಲೆನ್ಸ್ ಅವಾರ್ಡ್' ಪ್ರಶಸ್ತಿಯನ್ನು ಚೌಧರಿ ಕೈಯಿಂದ ಸ್ವೀಕರಿಸಿದ್ದರು.

ಒಂದು ಕಡೆ ಬ್ಯಾಂಕ್ ಪ್ರಶಸ್ತಿ ಪಡೆಯುತ್ತಿದ್ದರೆ ಇತ್ತ ನೀರವ್ ಮೋದಿ ಬ್ಯಾಂಕ್ ವ್ಯವಸ್ಥೆಗೇ ಕನ್ನ ಕೊರೆದು 11,400 ಕೋಟಿ ರೂಪಾಯಿ ಹಣ ದೋಚಿದ್ದರು.
ಇದಾದ ಬಳಿಕ ಅಕ್ಟೋಬರ್ 2017ರಲ್ಲಿ ಕೇಂದ್ರ ವಿಚಕ್ಷಣ ಆಯೋಗ ಸಾರ್ವಜನಿಕ ರಂಗದ ಬ್ಯಾಂಕ್ ಗಳಿಗಾಗಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿಯೂ ಪಿಎನ್ಬಿಗೆ ಪ್ರಶಸ್ತಿ ಬಂದಿತ್ತು. "ಶಿಸ್ತು ಕ್ರಮಗಳ ಸಮಯೋಚಿತ ಪೂರ್ಣಗೊಳಿಸುವಿಕೆ "ಗೆ ಪ್ರಶಸ್ತಿ ನೀಡಲಾಗಿತ್ತು.
ದುರಾದೃಷ್ಟವೆಂದರೆ ಅದೇ ಬ್ಯಾಂಕಿಂಗ್ ವ್ಯವಸ್ಥೆಗೆ ನೀರವ್ ಮೋದಿ ಮಣ್ಣೆರೆಚಿದ್ದರು.












Click it and Unblock the Notifications