"ಗಾಂಧಿ ಕುಟುಂಬಕ್ಕೆ ನಾನ್ ಬೇರೆ ಅಲ್ಲ, ಖರ್ಗೆ ಬೇರೆ ಅಲ್ಲ": ತರೂರ್ ಮಾತಿನ ಸೀಕ್ರೆಟ್ ಏನು!?
ಮುಂಬೈ, ಅಕ್ಟೋಬರ್ 10: "ಅಖಿಲ ಭಾರತ ಕಾಂಗ್ರೆಸ್ ಕಮಿಟಿ(ಎಐಸಿಸಿ) ಪಕ್ಷದ ನೂತನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ತಾವು ಹಾಗೂ ತಮ್ಮ ಪ್ರತಿಸ್ಪರ್ಧಿ ಮಲ್ಲಿಕಾರ್ಜುನ್ ಖರ್ಗೆ ಇಬ್ಬರನ್ನೂ ಗಾಂಧಿ ಕುಟುಂಬವು ಆಶೀರ್ವದಿಸಲಿದೆ," ಎಂದು ಎಐಸಿಸಿ ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿ ಶಶಿ ತರೂರ್ ಹೇಳಿದ್ದಾರೆ.
ಮುಂಬೈನಲ್ಲಿರುವ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಕಮಿಟಿ ಕಚೇರಿಯಲ್ಲಿ ಮಾತನಾಡಿದ ಅವರು, 2024ರ ಲೋಕಸಭೆ ಚುನಾವಣೆಗೂ ಪೂರ್ವದಲ್ಲೇ ಕಾಂಗ್ರೆಸ್ ಅನ್ನು ಬಲಿಷ್ಠಗೊಳಿಸುವುದು ತಮ್ಮ ಗುರಿ ಎಂದು ಹೇಳಿದರು.
ತೆಂಗು ಬೆಳೆಗಾರರೊಂದಿಗೆ ಸಂವಾದ ನಡೆಸಲಿರುವ ರಾಹುಲ್ ಗಾಂಧಿ
ಗಾಂಧಿ ಕುಟುಂಬವು ತಮ್ಮನ್ನು ಹಾಗೂ ಮಲ್ಲಿಕಾರ್ಜುನ್ ಖರ್ಗೆ ಜೀ ಅನ್ನು ಆಶೀರ್ವದಿಸುತ್ತದೆ. ಇಲ್ಲಿ ಯಾವುದೇ ರೀತಿ ಪಕ್ಷಪಾತವಿಲ್ಲ. ಏಕೆಂದರೆ ನಾವು ಪಕ್ಷವನ್ನು ಸದೃಢಗೊಳಿಸುವುದಕ್ಕಾಗಿ ಸ್ಪರ್ಧೆಗೆ ಇಳಿದಿದ್ದೇವೆ ಎಂದು ಶಶಿ ತರೂರ್ ಹೇಳಿದ್ದಾರೆ. ಕೆಲವು ನಾಯಕರು ಹೇಳಿಕೊಂಡಂತೆ ಮಲ್ಲಿಕಾರ್ಜುನ್ ಖರ್ಗೆಯು ಚುನಾವಣೆಯ ಅಧಿಕೃತ ಅಭ್ಯರ್ಥಿಯಾಗಿದ್ದು, ತಮ್ಮನ್ನು ಅನಧಿಕೃತ ಅಭ್ಯರ್ಥಿಯಂತೆ ಬಿಂಬಿಸುತ್ತಿರುವ ಊಹಾಪೋಹಗಳನ್ನು ಶಶಿ ತರೂರ್ ತಳ್ಳಿ ಹಾಕಿದ್ದಾರೆ.
ಯಾವುದೇ ಪಕ್ಷಪಾತವಿಲ್ಲ ಎಂದು ಮನವರಿಕೆ:
"ಗಾಂಧಿ ಕುಟುಂಬದೊಂದಿಗಿನ ನಾನು ನಡೆಸಿದ ಚರ್ಚೆಯಲ್ಲಿ ನನ್ನ ಅಥವಾ ಖರ್ಗೆ ಬಗ್ಗೆ ಯಾವುದೇ ಪಕ್ಷಪಾತವಿಲ್ಲ ಎಂಬುದು ನನಗೆ ಮನವರಿಕೆ ಆಗಿದೆ. 2024 ರ ಚುನಾವಣೆಯ ನಂತರ ಬಿಜೆಪಿಯು ವಿರೋಧ ಪಕ್ಷದ ಭಾಗವಾಗಲು ತಯಾರಿ ನಡೆಸಬೇಕು. ನಮ್ಮ ಪಕ್ಷಕ್ಕೆ ಬದಲಾವಣೆಯ ಅಗತ್ಯವಿದೆ ಮತ್ತು ಬದಲಾವಣೆಯ ವೇಗವರ್ಧಕ ನಾನೇ ಎಂದು ಭಾವಿಸುತ್ತೇನೆ," ಅಂತಾ ತರೂರ್ ಹೇಳಿದರು. ಕಾಂಗ್ರೆಸ್ ದೇಶವನ್ನು ಅಚ್ಚುಕಟ್ಟಾಗಿ ನಡೆಸಿದೆ ಮತ್ತು ಪಕ್ಷದಲ್ಲಿ ಅನುಭವಿಗಳನ್ನು ಹೊಂದಿದೆ ಎಂದರು.
ಮತದಾರರ ನಂಬಿಕೆಯನ್ನು ಗೆಲ್ಲಬೇಕಾಗಿದೆ:
ಮುಂಬೈನ ಕಾಂಗ್ರೆಸ್ ರಾಜ್ಯ ಪ್ರಧಾನ ಕಚೇರಿಯಲ್ಲಿ ಪ್ರತಿನಿಧಿ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಶಶಿ ತರೂರ್, ನಾವು ಮತದಾರರ ನಂಬಿಕೆಯನ್ನು ಗೆಲ್ಲಬೇಕಾಗಿದೆ, "ಎಂದು ಹೇಳಿದರು. ಕಾಂಗ್ರೆಸ್ ರಾಜ್ಯ ಘಟಕದ ಮುಖಂಡ ನಾನಾ ಪಟೋಲೆ ಹಾಜರಿರಲಿಲ್ಲ. ಪಟೋಲೆ ಅನುಪಸ್ಥಿತಿಯ ಬಗ್ಗೆ ಕೇಳಿದಾಗ "ನಾನು ಪಟೋಲೆ ಜೀ ಅವರೊಂದಿಗೆ ಒಂದು ಮಾತನ್ನು ಕೇಳುತ್ತೇನೆ, ಅವರು ತಮ್ಮ ಪೂರ್ವ ಬದ್ಧತೆಯ ಬಗ್ಗೆ ನನಗೆ ತಿಳಿಸಿದರು. ನಾನು ಯಾವುದೇ ದೂರು ನೀಡುತ್ತಿಲ್ಲ," ಎಂದು ತರೂರ್ ಹೇಳಿದರು.
ಅಖಿಲ ಭಾರತ ವೃತ್ತಿಪರ ಕಾಂಗ್ರೆಸ್ ಸದಸ್ಯರು ತರೂರ್ ಅನ್ನು ತಿಲಕ್ ಭವನದಲ್ಲಿ ಅಭಿನಂದಿಸಿದರು. ಲೋಕಸಭೆಯ ಮಾಜಿ ಸಂಸದೆ ಪ್ರಿಯಾ ದತ್ ಮತ್ತು ರಾಜ್ಯಸಭಾ ಮಾಜಿ ಸಂಸದ ಭಾಲಚಂದ್ರ ಮುಂಗೇಕರ್ ಕೂಡ ಉಪಸ್ಥಿತರಿದ್ದರು.
ತಿಲಕ್ ಭವನಕ್ಕೆ ತೆರಳುವ ಮುನ್ನ:
ರಾಜ್ಯ ಕಾಂಗ್ರೆಸ್ ಪ್ರಧಾನ ಕಚೇರಿ ತಿಲಕ್ ಭವನವನ್ನು ತಲುಪುವ ಮೊದಲು ಶಶಿ ತರೂರ್, ಬಿಆರ್ ಅಂಬೇಡ್ಕರ್ ಚಿತಾಭಸ್ಮದ ಸ್ಥಳವಾದ ಚೈತ್ಯಭೂಮಿ, ಶಿವಾಜಿ ಪಾರ್ಕ್ನಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ ಸ್ಮಾರಕ ಮತ್ತು ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದರು.
"ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನಲ್ಲಿ ನಾವು ದೊಡ್ಡ ಸವಾಲನ್ನು ಎದುರಿಸುತ್ತಿದ್ದೇವೆ. ನಮ್ಮ ಪಕ್ಷಕ್ಕೆ ಮರುಚೈತನ್ಯ ನೀಡುವ ಮತ್ತು 2024ರ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಡುವ ಉದ್ದೇಶಕ್ಕಾಗಿ ಅದನ್ನು ಸರಿಹೊಂದಿಸುವ ಸವಾಲಿದೆ," ಎಂದು ಶಶಿ ತರೂರ್ ತಿಳಿಸಿದ್ದಾರೆ. ಯಾವುದೇ ಪಕ್ಷಕ್ಕೂ ಸಾಧ್ಯವಾಗದಂತಹ ಆಂತರಿಕ ಪ್ರಜಾಪ್ರಭುತ್ವದ ಉದಾಹರಣೆಯನ್ನು ನಮ್ಮ ಪಕ್ಷವು ದೇಶಕ್ಕೆ ನೀಡುತ್ತಿದೆ ಎಂಬ ಅಂಶದಿಂದ ಈ ಸವಾಲು ಹೆಚ್ಚು ಮಹತ್ವದ್ದಾಗಿದೆ ಎಂದರು.
ತಮ್ಮ ಪ್ರಣಾಳಿಕೆಯ ಅಂಶ ಉಲ್ಲೇಖಿಸಿದ ತರೂರ್:
ಕಾಂಗ್ರೆಸ್ ಅನ್ನು ಬಲಿಷ್ಠಗೊಳಿಸುವ ಸಾಧನವಾಗಿ ಚುನಾವಣೆಯನ್ನು ಸ್ವಾಗತಿಸುವುದಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಒತ್ತಿ ಹೇಳಿದರು. ಇದು ಸಾರ್ವಜನಿಕರನ್ನು ಪಕ್ಷದತ್ತ ಆಕರ್ಷಿಸುತ್ತದೆ ಎಂಬುದನ್ನು ಅವರು ನಂಬುತ್ತಾರೆ ಎಂದು ತರೂರ್ ಹೇಳಿದರು. ಅಧಿಕಾರ ವಿಕೇಂದ್ರೀಕರಣ, ಕಾರ್ಯಕರ್ತರಿಗೆ ಅಧಿಕಾರ ನೀಡುವುದು, ಎಲ್ಲಾ ಹಂತದ ನಿರ್ಧಾರ ಕೈಗೊಳ್ಳಲು ಅವಕಾಶ ಕಲ್ಪಿಸುವುದು, ಪಕ್ಷದಲ್ಲಿ ಭಾಗವಹಿಸುವಿಕೆಯನ್ನು ವಿಸ್ತರಿಸುವುದು ಮತ್ತು ಎಲ್ಲ ಕಾರ್ಯಕರ್ತರನ್ನು ಸಬಲೀಕರಣಗೊಳಿಸುವುದು ಸೇರಿದಂತೆ ಪಕ್ಷ ಬಲಪಡಿಸಲು ತಮ್ಮ ಪ್ರಣಾಳಿಕೆಯಲ್ಲಿ ಹಲವಾರು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ.
ಅಕ್ಟೋಬರ್ 17ರಂದು ಎಐಸಿಸಿ ಚುನಾವಣೆ:
ಭಾರತದಲ್ಲಿ ಬರೋಬ್ಬರಿ 26 ವರ್ಷಗಳ ನಂತರದಲ್ಲಿ ಮೊದಲ ಬಾರಿಗೆ ದಕ್ಷಿಣ ಭಾರತದ ನಾಯಕರಿಗೆ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷರ ಸ್ಥಾನ ಒಲಿದು ಬರುತ್ತಿದೆ. ಕರ್ನಾಟಕದ ಮಲ್ಲಿಕಾರ್ಜುನ್ ಖರ್ಗೆ ಅಥವಾ ಕೇರಳದ ಶಶಿ ತರೂರ್ ನಡುವೆೆ ಪೈಪೋಟಿ ನಡೆಯುತ್ತಿದೆ. ಎಐಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ನಡೆಯಲಿರುವ ಚುನಾವಣೆಗೆ ಹೈಕಮಾಂಡ್ ಬೆಂಬಲಿತ ಅಭ್ಯರ್ಥಿ ಆಗಿ ಮಲ್ಲಿಕಾರ್ಜುನ್ ಖರ್ಗೆ ಸ್ಪರ್ಧಿಸಿದರೆ, ಕೇರಳದ ಶಶಿ ತರೂರ್ ಪ್ರತಿಸ್ಪರ್ಧಿ ಆಗಿ ಕಣಕ್ಕೆ ಇಳಿದಿದ್ದಾರೆ. ಇಬ್ಬರು ಅಭ್ಯರ್ಥಿಗಳು ಸೆಪ್ಟೆಂಬರ್ 30ರಂದು ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆಯು ಅಕ್ಟೋಬರ್ 17ರಂದು ನಡೆಯಲಿದ್ದು, ಫಲಿತಾಂಶವು ಅಕ್ಟೋಬರ್ 19ರಂದು ಹೊರ ಬೀಳಲಿದೆ. ಒಟ್ಟು 9100 ಕಾಂಗ್ರೆಸ್ ನಾಯಕರು ಈ ಚುನಾವಣೆಯಲ್ಲಿ ಮತದಾನ ಮಾಡಲಿದ್ದು, ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ.