Haryana: ನಾಳೆ ಮತ ಎಣಿಕೆ, ಇತ್ತ ಸಿಎಂ ಕುರ್ಚಿಗೆ ಕರ್ಚೀಫ್ ಹಾಕಿದ ಕಾಂಗ್ರೆಸ್ ನಾಯಕರು
ಹರಿಯಾಣ ವಿಧಾನಸಭಾ ಚುನಾವಣೆ ಮುಗಿದಿದ್ದು, ನಾಳೆ ಮತ ಎಣಿಕೆ ನಡೆಯಲಿದೆ. ಈಗಾಗಲೇ ಚುನಾವಣೋತ್ತರ ಸಮೀಕ್ಷೆಗಳು ಕಾಂಗ್ರೆಸ್ಗೆ ಹರಿಯಾಣದಲ್ಲಿ ಬಹುಮತ ನೀಡಿವೆ. ಮತ್ತೊಂದೆಡೆ ಬಿಜೆಪಿ ಕೂಡ ಇದಕ್ಕೆ ಕ್ಯಾರೇ ಎನ್ನದೆ ತಮ್ಮ ಹ್ಯಾಟ್ರಿಕ್ ಸರ್ಕಾರ ರಚಿಸುವ ವಿಶ್ವಾಸದಲ್ಲಿದೆ. ಇತ್ತ ಕಾಂಗ್ರೆಸ್ನಲ್ಲಿ ಕುರ್ಚಿ ಕಿತ್ತಾಟವೂ ಜೋರಾಗಿದೆ ಎನ್ನಲಾಗಿದೆ.
ನಿನ್ನೆ ಬಿಡುಗಡೆಯಾದ ಬಹುತೇಕ ಎಕ್ಸಿಟ್ ಪೋಲ್ ವರದಿಗಳು ಈ ಬಾರಿ ಹರಿಯಾಣದಲ್ಲಿ ಕಾಂಗ್ರೆಸ್ ಗದ್ದುಗೆ ಏರುವುದು ಖಚಿತ ಎಂದು ಹೇಳಿವೆ. ಇದೇ ವಿಶ್ವಾಸದಲ್ಲಿರುವ ಕಾಂಗ್ರೆಸ್ನಲ್ಲಿ ಆಗಲೇ ಸಿಎಂ ಕುರ್ಚಿಯ ಜಗಳ ಶುರುವಾಗಿದೆಯಂತೆ. ಕರ್ನಾಟಕದಂತೆ ಅಲ್ಲಿಯೂ ನಾನೇ ಮುಂದಿನ ಸಿಎಂ ಎನ್ನುವವರ ಸಂಖ್ಯೆ ಹೆಚ್ಚಾಗಿದೆ. ಶನಿವಾರ ಸಂಜೆ ಬಿಡುಗಡೆಯಾದ ಎಕ್ಸಿಟ್ ಪೋಲ್ನಲ್ಲಿ ಕಾಂಗ್ರೆಸ್ಗೆ ಅವಿರೋಧವಾಗಿ ಗೆಲುವು ಸಾಧಿಸುವ ಮುನ್ಸೂಚನೆ ನೀಡಿದೆ.

ಕಾಂಗ್ರೆಸ್ ಬರೋಬ್ಬರಿ 50ರಿಂದ 55 ಸ್ಥಾನಗಳು ಬರುವುದು ಖಚಿತ ಎಂದು ಹೇಳಿದೆ. ಹ್ಯಾಟ್ರಿಕ್ ಹೊಡೆಯಲು ಮುಂದಾಗಿರುವ ಬಿಜೆಪಿಗೆ 20ರಿಂದ 25 ಸ್ಥಾನಗಳು ಬರಬಹುದು ಎಂದು ಹೇಳಲಾಗಿದೆ. 90 ಸ್ಥಾನಗಳನ್ನು ಹೊಂದಿರುವ ಹರಿಯಾಣ ವಿಧಾನಸಭೆಗೆ ಸದ್ಯ 46 ಮ್ಯಾಜಿಕ್ ನಂಬರ್ ಆಗಲಿದೆ.
ಒಂದು ವೇಳೆ ಎಕ್ಸಿಟ್ ಪೋಲ್ ಭವಿಷ್ಯವಾಣಿ ನಿಜವಾದರೆ, ಇದು ಬಿಜೆಪಿಗೆ ಕಾಂಗ್ರೆಸ್ ದೊಡ್ಡ ಹೊಡೆತ ನೀಡಲಿದ್ದು, ಕಾಂಗ್ರೆಸ್ಗೆ ಅಡಿಪಾಯ ಹಾಕುವಲ್ಲಿ ಹರಿಯಾಣ ಮಹತ್ವದ ಪಾತ್ರ ವಹಿಸಲಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷಿತ ಮಟ್ಟಕ್ಕಿಂತ ಉತ್ತಮ ಫಲಿತಾಂಶ ಪಡೆದಿರುವ ಕಾಂಗ್ರೆಸ್ ಬಿಜೆಪಿ ಜೊತೆ ಫೈಟ್ ಮಾಡಲು ಇದು ಸಕಾಲ ಎನ್ನಲಾಗಿದೆ. ಪ್ರಮುಖ ಹಿಂದಿ ರಾಜ್ಯಗಳಲ್ಲಿ ಒಂದಾದ ಹರಿಯಾಣ ಕಾಂಗ್ರೆಸ್ ತೆಕ್ಕೆಗೆ ಬರಲಿದ್ದು, ಬಿಜೆಪಿಗೆ ಇದೊಂದು ದೊಡ್ಡ ಹಿನ್ನಡೆ ಎನ್ನಲಾಗುತ್ತಿದೆ.
ಒಂದೆಡೆ ಕಾಂಗ್ರೆಸ್ಗೆ ಗೆಲುವು ಸಿಗುವುದು ಬಹುತೇಕ ಖಚಿತ ಎನ್ನಲಾದರೂ ಮತ್ತೊಂದೆಡೆ ಸರ್ಕಾರ ರಚನೆಯ ವಿಚಾರದಲ್ಲಿ ಇಕ್ಕಟ್ಟಿಗೆ ಸಿಲುಕುವ ಸಾಧ್ಯತೆ ಇದೆ ಎಂದು ಅಲ್ಲಿನ ರಾಜಕೀಯ ವಲಯದಲ್ಲಿ ವಿಚಾರ ದೊಡ್ಡದಾಗಿ ಎದ್ದಿದೆ. ಕಾಂಗ್ರೆಸ್ನಲ್ಲಿ ಈಗಾಗಲೇ ಹಲವು ಬಣಗಳು ಹುಟ್ಟಿಕೊಂಡಿದ್ದು, ಪರಸ್ಪರವಾಗಿ ಒಳಜಗಳಗಳಿಗೂ ಕಾರಣವಾಗಿದೆ. ಒಂದು ವೇಳೆ ಬಹುಮತ ಬಂದರೂ ಸಿಎಂ ಯಾರಾಗಬಹುದು ಎಂಬುದರ ಬಗ್ಗೆ ಸ್ಪಷ್ಟ ನಿರ್ಣಯ ಇನ್ನೂ ಇಲ್ಲ.

ಈ ಹಿಂದೆ 2005ರಿಂದ 2014ರವರೆಗೆ ಹರಿಯಾಣ ಸಿಎಂ ಆಗಿ ಮುನ್ನಡೆಸಿದ ಭೂಪಿಂದರ್ ಸಿಂಗ್ ಹೂಡಾ, ಹರಿಯಾಣ ಕಾಂಗ್ರೆಸ್ ಅಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸಿರುವ ಲೋಕಸಭೆ ಸಂಸದೆ ಮತ್ತು ದಲಿತ ನಾಯಕಿ ಕುಮಾರಿ ಸೆಲ್ಜಾ, ರಾಷ್ಟ್ರೀಯ ವಕ್ತಾರ ಮತ್ತು ಹರಿಯಾಣ ಕಾಂಗ್ರೆಸ್ನ ಪ್ರಮುಖ ನಾಯಕ ರಣದೀಪ್ ಸುರ್ಜೇವಾಲಾ ಕೂಡ ಮುಖ್ಯಮಂತ್ರಿ ಹುದ್ದೆಯ ಪ್ರಮುಖ ಆಕಾಂಕ್ಷಿ ಎನ್ನಲಾಗಿದೆ.
ಈಗಾಗಲೇ ಹೂಡಾ ಅವರು ದೆಹಲಿಗೆ ತೆರಳಿದ್ದು, ಚುನಾವಣಾ ಫಲಿತಾಂಶ ಪ್ರಕಟವಾಗುವವರೆಗೂ ಅಲ್ಲಿಯೇ ಇರಲಿದ್ದಾರೆ ಎನ್ನಲಾಗಿದೆ. ಈ ಹಿಂದೆಯೂ ಸಿಎಂ ಸ್ಥಾನದ ಬಗ್ಗೆ ಮಾತನಾಡಿದ್ದ ಹೂಡಾ, ನಾನಿನ್ನೂ ನಿವೃತ್ತನಾಗಿಲ್ಲ ಎಂದು ಸುಳಿವು ನೀಡಿದ್ದರು. ಆದರೂ ಮುಖ್ಯಮಂತ್ರಿ ಯಾರಾಗಬೇಕೆಂದು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ. ಈ ಎಲ್ಲ ಗೊಂದಲಗಳಿಗೂ ನಾಳೆ ತೆರೆ ಬೀಳಲಿದೆ.












Click it and Unblock the Notifications