ಭಟ್ಕಳನ ಬಾಯಿಂದ ಬಂದ ಭಯಾನಕ ಸತ್ಯಗಳು
ಬೆಂಗಳೂರು, ಸೆ.17: ಮುಂಬೈ, ಹೈದ್ರಾಬಾದ್, ಬೆಂಗಳೂರು, ಪುಣೆ, ಅಹಮದಾಬಾದ್ ಸೇರಿದಂತೆ 10 ಸ್ಫೋಟ ನಡೆಸಿದ್ದು ನಾವೇ ಮುಂದಿನ ದಿನಗಳಲ್ಲಿ ಇನ್ನಷ್ಟು ಸರಣಿ ಸ್ಫೋಟದ ಮೂಲಕ ಭೀತಿ ಹುಟ್ಟಿಸುವ ಯೋಜನೆ ಇದೆ. ಹಬ್ಬಗಳ ಸಂದರ್ಭದಲ್ಲಿ ಸ್ಫೋಟ ನಡೆಸಲು 10-12 ಮಹಿಳಾ ಬಾಂಬರ್ ಗಳನ್ನು ಸಿದ್ಧಪಡಿಸಿದ್ದೇವೆ ಎಂದು ಇಂಡಿಯನ್ ಮುಜಾಹಿದೀನ್ ಉಗ್ರ ಯಾಸಿನ್ ಭಟ್ಕಳ ಬಾಯ್ಬಿಟ್ಟಿದ್ದಾನೆ.
ಮುಂಬೈನಲ್ಲಿ 2006 ಜು.11 ರಂದು ಸಂಭವಿಸಿದ ರೈಲು ಸ್ಫೋಟಕ್ಕೆ ತಾನೇ ಹೊಣೆ ಎಂದು ಬಂಧಿತ ಇಂಡಿಯನ್ ಮುಜಾಹಿದೀನ್ ಉಗ್ರ ಯಾಸಿನ್ ಭಟ್ಕಳ್ ತಪ್ಪೊಪ್ಪಿಕೊಂಡಿದ್ದಾನೆ.
ರಾಷ್ಟ್ರೀಯ ತನಿಖಾ ದಳ (ಎನ್ ಐಎ)ದ ವಶದಲ್ಲಿರುವ ಯಾಸಿನ್ ಭಟ್ಕಳ್ 2006 ಜು.11ರಂದು ಮುಂಬೈನಲ್ಲಿ ಸಂಭವಿಸಿದ ಬಾಂಬ್ ಸ್ಫೋಟಕ್ಕೆ ಕರಾಚಿ ಮೂಲದ ಇಂಡಿಯನ್ ಮುಜಾಹಿದೀನ್ ಸಂಘಟನೆ ಸೂಚನೆ ಮೇರೆಗೆ ತಾನೇ ಸ್ಫೋಟಿಸಿದೆ ಎಂದಿದ್ದಾನೆ. ಈ ಘಟನೆಯಲ್ಲಿ 209 ಜನ ಮೃತಪಟ್ಟು 714 ಜನ ತೀವ್ರವಾಗಿ ಗಾಯಗೊಂಡಿದ್ದರು.
ಮುಂಬೈ ರೈಲು ಸ್ಫೋಟ: ಸ್ಥಳೀಯ ರೈಲಿನಲ್ಲಿ ಬಾಂಬ್ ಗಳನ್ನಿಟ್ಟು ಒಟ್ಟು 11 ನಿಮಿಷ ಸ್ಫೋಟಿಸಲಾಯಿತು. ಇದಕ್ಕೆ ನಾನೇ ಹೊಣೆಗಾರ ಎಂದು ಎನ್ ಐಎ ಮುಂದೆ ಸಾಕ್ಷಿ ತಪ್ಪೊಪ್ಪಿಕೊಂಡಿದ್ದಾನೆ. ಮುಂಬೈನಲ್ಲಿ ಬಾಂಬ್ ಸ್ಫೋಟಿಸಲು ನನಗೆ ಅಜಾಂಗಢದ ಸಾದಿದ್ ಇಸ್ರಾತ್ ಶೇಖ್ ಕೈ ಜೋಡಿಸಿದ್ದ ಈತನ ನೆರವಿನಿಂದಲೇ ಈ ದುಷ್ಕೃತ್ಯ ನಡೆಸಿದ್ದೇ ಎಂದು ಬಾಯಿ ಬಿಟ್ಟಿದ್ದಾನೆ.
2008 ಸೆಪ್ಟೆಂಬರ್ 11ರಂದು ದೆಹಲಿಯಲ್ಲಿ ಬಾಟ್ಲ ಹೌಸ್ ಎನ್ ಕೌಂಟರ್ ನಲ್ಲಿ ಅತೀಫ್ ಅಮಿನ್ ಎಂಬ ಉಗ್ರ ಈ ದುಷ್ಕೃತ್ಯ ನಡೆಸಿದ್ದ. ಇಂಡಿಯನ್ ಮುಜಾಹಿದೀನ್ ಮತ್ತು ಲಷ್ಕರ್-ಇ-ತೊಯ್ಬಾ ಸಂಘಟನೆಗಳೇ ದಾಳಿಯ ನೇತೃತ್ವ ವಹಿಸಿದ್ದವು ಎಂದು ತಿಳಿಸಿದ್ದಾನೆ. ಯಾಸಿನ್ ಭಟ್ಕಳ ಈವರೆಗೂ ನೀಡಿರುವ ಹೇಳಿಕೆಗಳ ಅಸಮಗ್ರ ಸಾರ ಸಂಗ್ರಹ ಇಲ್ಲಿದೆ ಓದಿ...

ಆಘಾತಕಾರಿ ವಿಷಯ
* ಹೈದ್ರಾಬಾದ್ ಸ್ಫೋಟದ ರೂವಾರಿ ನಾನೇ ಇದಕ್ಕಾಗಿ ಕರ್ನಾಟಕದ ಚಿಕ್ಕಮಗಳೂರು ಬಳಿಯ ತೋಟದ ಮನೆಯೊಂದರಲ್ಲಿ ತರಬೇತಿ ನೀಡಿದ್ದೆ.
* ಭಾರತದಲ್ಲಿ ನಮ್ಮ ಕಾರ್ಯಾಚರಣೆಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ ಐ ಹಣಕಾಸಿನ ನೆರವು ನೀಡುತ್ತಿದೆ.
* ಪ್ರತಿ ಸ್ಫೋಟದ ಬಗ್ಗೆ ಇಕ್ಬಾಲ್ ಭಟ್ಕಳನಿಗೆ ಐಎಸ್ ಐ ಸೂಚನೆ ನೀಡುತ್ತದೆ ಅದನ್ನು ಆತ ನನಗೆ ಹೇಳುತ್ತಾನೆ.
* ಮಂಗಳೂರಿನ ಅತ್ತಾವರದ ಬಾಡಿಗೆ ಅಪಾರ್ಟ್ ಮೆಂಟ್ ಅನ್ನು ಬಾಂಬ್ ತಯಾರಿಕೆಯ ಕೇಂದ್ರವಾಗಿ ರೂಪಿಸಲಾಗಿತ್ತು.

ಮಂಗಳೂರು ನೆಲೆ ಬಗ್ಗೆ
ಮಂಗಳೂರು ನೆಲೆ ಬಗ್ಗೆ ರಾಷ್ಟ್ರೀಯ ತನಿಖಾ ದಳದ (ಎನ್ ಐಎ) ಸಿಬ್ಬಂದಿ ಖಚಿತಪಡಿಸಿದ್ದಾರೆ. ಯಾಸಿನ್ ನ ನೆಲೆ ಮೇಲೆ ದಾಳಿ ನಡೆಸಿ ಐಇಡಿ (ಸುಧಾರಿತ ಸ್ಫೋಟಕ ಉಪಕರಣ), ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
* ವಿಚಾರಣೆಗೆ ಗುರಿಪಡಿಸಿದ ವೇಳೆ ಯಾಸಿನ್ ಹಾಗೂ ಆತನ ಜತೆಗೆ ಬಂಧಿತನಾದ ಅಸಾದುಲ್ಲಾ ಅಖ್ತರ್ ಅಲಿಯಾಸ್ ಹಡ್ಡಿ ಮಂಗಳೂರು ನೆಲೆ ಬಗ್ಗೆ ಎನ್ ಐಎ ಎದುರು ಬಹಿರಂಗಪಡಿಸಿದ್ದಾರೆ
* ದಾಳಿ ವೇಳೆ ಸಜೀವ ಬಾಂಬ್ ಗಳು ಪತ್ತೆಯಾಗಿದ್ದು, ದಾಳಿಗೂ ಕೆಲ ಕ್ಷಣ ಮುನ್ನ ಒಂದಿಬ್ಬರು ಕಟ್ಟಡದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಸುಧಾರಿತ ಸ್ಫೋಟಕಗಳು
* ರಾಷ್ಟ್ರೀಯ ತನಿಖಾ ದಳದ ಸಿಬ್ಬಂದಿ ವಿಶೇಷ ವಿಮಾನದಲ್ಲಿ ಯಾಸಿನ್ ಮತ್ತು ಹಡ್ಡಿಯನ್ನು ಮಂಗಳೂರಿಗೆ ಕರೆತಂದು ಲ್ಯಾಬ್ ಬಗ್ಗೆ ವಿಚಾರಿಸಿದರು.
* ಅತ್ತಾವರದ ಜಫಿರ್ ಹೈಟ್ಸ್ ಕಟ್ಟಡದ 3ನೇ ಅಂತಸ್ತಿನ ಬಾಡಿಗೆ ಅಪಾರ್ಟ್ ಮೆಂಟ್ ನಲ್ಲೇ ಬಾಂಬ್ ಲ್ಯಾಬ್ ಇತ್ತು.
* ಸೆರೆ ಸಿಕ್ಕಿದ್ದು: 50 ಡಿಜಿಟಲ್ ವಾಚ್, ಬಾಂಬುಗಳಿಗೆ ಜೋಡಿಸುವ ವೈರ್, ಮೊಬೈಲ್ ಸ್ಮಾರ್ಟ್ ಫೋನ್ , 3 ಎಲೆಕ್ಟ್ರಿಕಲ್ ಡಿಟೋನೇಟರ್, 125 ಗ್ರಾಂ ಅಮೋನಿಯಂ ನೈಟ್ರೇಟ್ ಜೆಲ್, ಇಂಧನ, ಬಾಂಬ್ ಸರ್ಕ್ಯುಟ್ ತಯಾರಿಸುವ ವಿವರವುಳ್ಳ ಪುಸ್ತಕ

ಹೈದರಾಬಾದ್ ಸ್ಫೋಟದ ಬಗ್ಗೆ
* ನಾನು ಮಂಗಳೂರಿನ ಮನೆಯಲ್ಲಿ ಕಳೆದ ಮಾರ್ಚ್ ತನಕ ಸುಮಾರು ಆರು ತಿಂಗಳ ಕಾಲ ತಂಗಿದ್ದೆ. ಫೆ.21ರಂದು ಹೈದರಾಬಾದಲ್ಲಿ ಬಾಂಬ್ ಸ್ಫೋಟಿಸಲು ಇಲ್ಲಿಂದಲೇ ಹೋದೆ.
* ಸ್ಫೋಟ ಸಂಭವಿಸಿದ ಬಳಿಕ ಮಂಗಳೂರಿಗೆ ಮರಳಿದ್ದೆ. ನಾವು ಮಂಗಳೂರನ್ನು ಮೂಲ ನೆಲೆಯಾಗಿ ಮಾಡಿಕೊಂಡು ಓಡಾಟ ನಡೆಸಲಾಗುತ್ತಿತ್ತು ಎಂದು ಯಾಸಿನ್ ಸಹಚರ ಹಡ್ಡಿ ಬಾಯ್ಬಿಟ್ಟಿದ್ದಾನೆ
* ಈ ಫ್ಲ್ಯಾಟಿನಲ್ಲಿ ಬಿಹಾರದ ತಹ್ಸಿನ್ ಅಖ್ತರ್ (23 ವರ್ಷ) ಮತ್ತು ಪಾಕಿಸ್ತಾನದ ವಖಸ್ ಅಲಿಯಾಸ್ ಅಹ್ಮದ್ (28 ವರ್ಷ) ಎಂಬ ಇಬ್ಬರು ಬಾಂಬ್ ಸರ್ಕ್ಯೂಟ್ ನಿಪುಣರಿದ್ದರು.
* ಮುಂಬೈನಲ್ಲಿ 2011ರಲ್ಲಿ ನಡೆದ ತ್ರಿವಳಿ ಸ್ಫೋಟದ ರೂವಾರಿಗಳು ಇವರಿಬ್ಬರು ಹಾಗೂ ಭಟ್ಕಳ ಬ್ರದರ್ಸ್

ಚಿಕ್ಕಮಗಳೂರಿನಲ್ಲಿ ತರಬೇತಿ
ಹೈದರಾಬಾದಿನ ಗೋಕುಲ್ ಚಾಟ್ ಮತ್ತು ಲುಂಬಿನಿ ಪಾರ್ಕಿನಲ್ಲಿ ಬಾಂಬ್ ಇಟ್ಟ ಅಖ್ತರ್ ಇಸ್ಮಾಯಿಲ್ ಚೌಧುರಿ ಹಾಗೂ ಇತರ ಉಗ್ರರಿಗೆ ಚಿಕ್ಕಮಗಳೂರಿನ ತೋಟದ ಮನೆಯಲ್ಲಿ ತರಬೇತಿ ನೀಡಲಾಗಿತ್ತು ಎಂದು ಯಾಸಿನ್ ಹೇಳಿದ್ದಾನೆ.
ಹೊಸಬರಿಗೆ ಪ್ರೇರಣೆ ನೀಡಲು ಆಫ್ಘಾನಿಸ್ತಾನ್ ಯುದ್ಧ ಮತ್ತು ಒಸಾಮಾ ಬಿನ್ ಲಾಡೆನ್ ತರಬೇತಿ ನೀಡುವ ಸಿಡಿಗಳನ್ನು ತೋರಿಸಲಾಗಿದೆ.
ಚಿಕ್ಕಮಗಳೂರಿನಲ್ಲಿದ್ದಾಗ ನನ್ನ ಹೆಸರು ವಾಸಿಮ್ ಆಗಿತ್ತು ಎಂದಿರುವ ಯಾಸಿನ್. ದಕ್ಷಿಣ ಭಾರತ ವಿಭಾಗದ ಕೆಲವು ಉಗ್ರರ ಹೆಸರುಗಳನ್ನು ಯಾಸಿನ್ ಬಹಿರಂಗಪಡಿಸಿದ್ದಾನೆ. ಕರಾವಳಿಯ ಕೆಲವು ವ್ಯಕ್ತಿಗಳೂ ಇದ್ದಾರೆ ಎನ್ನಲಾಗಿದೆ. ವಿಚಾರಣೆ ಜಾರಿಯಲ್ಲಿರುವುದರಿಂದ ಹೆಸರು ಇನ್ನೂ ಬಹಿರಂಗಪಡಿಸಿಲ್ಲ

ಉಡುಪಿಯಿಂದ ಸ್ಫೋಟಕ
ಉಡುಪಿ ಮತ್ತು ಆಸುಪಾಸಿನ ಊರುಗಳಿಂದ ಸ್ಫೋಟಕಗಳನ್ನು ಸಂಗ್ರಹಿಸಿ 2005ರಿಂದ 2008ರ ತನಕ ದೇಶದ ವಿವಿಧೆಡೆಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲಾಗಿದೆ. ಆಯ್ದ ಸ್ಫೋಟಕಗಳ ಗುಣಮಟ್ಟವನ್ನು ಭಟ್ಕಳ ಬ್ರದರ್ಸ್ ಆಯ್ಕೆ ಮಾಡುತ್ತಿದ್ದರು. ಪಾಕ್ ಮೂಲದ ಸರ್ಕ್ಯೂಟ್ ಮೇಕರ್ ಗಳು ಬಾಂಬ್ ತಯಾರಿಸುತ್ತಿದ್ದರು.
ಜಿಲ್ಲೆಯಲ್ಲಿರುವ ಕಲ್ಲು ಗಣಿಗಳಿಂದ ಕಚ್ಚಾವಸ್ತು ಸಿಗುತ್ತದೆ. ಅಫ್ತಾಬ್ ಆಲಾಮ್ ಅಲಿಯಾಸ್ ಫಾರೂಕ್ ಎನ್ನುವ ಉಗ್ರ ಯಾಸಿನ್ ಹೇಗೆ ಸ್ಫೋಟಕ ಸಂಗ್ರಹಿಸುತ್ತಿದ್ದ ಎನ್ನುವ ವಿಷಯವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಮುಂದೆ ಹೇಳಿದ್ದಾನೆ.

ಪುಣೆ ಸ್ಫೋಟ
ಪುಣೆಯ ಜರ್ಮನ್ ಬೇಕರಿ ಬಳಿ ನಡೆಸಿದ ಸ್ಫೋಟದಲ್ಲಿ ಸ್ಫೋಟಕ ಪದಾರ್ಥಗಳನ್ನು ಇಟ್ಟಿದ್ದು ನಾನೇ ಎಂದು ಯಾಸಿನ್ ಒಪ್ಪಿಕೊಂಡಿದ್ದಾನೆ.
ಪುಣೆ ಸ್ಫೋಟ ನಡೆದ ದಿನವೇ ಪುಣೆಯಲ್ಲಿನ ಗಣೇಶ ಮಂದಿರದ ಬಳಿಯ ಸ್ಫೋಟಕ್ಕೆ ಉದ್ದೇಶಿಸಲಾಗಿತ್ತು. ಆದರೆ ಬಾಂಬ್ ಇಡಬೇಕಿದ್ದ ಖಾತಿಲ್ ಸಿದ್ಧಿಕಿ ಕಡೇ ಗಳಿಗೆಯಲ್ಲಿ ವಿಚಲಿತನಾಗಿದ್ದರಿಂದ ಅಲ್ಲಿ ಸ್ಫೋಟ ನಡೆಯದೇ ಹೋಯಿತು ಎಂದೂ ಬಾಯಿಬಿಟ್ಟಿದ್ದಾನೆ.

ಮಹಿಳಾ ಬಾಂಬರ್
ದೇಶದಲ್ಲಿ ಮುಂಬರುವ ಹಬ್ಬದ ದಿನಗಳಂದು ಆತ್ಮಾಹುತಿ ದಾಳಿ ನಡೆಸಲು ಮಹಿಳಾ ಬಾಂಬರ್ ಗಳು ಸಜ್ಜಾಗಿದ್ದು ಆದೇಶಕ್ಕಾಗಿ ಕಾಯುತ್ತಿದ್ದಾರೆ ಎಂದು ಯಾಸಿನ್ ಭಟ್ಕಳ್ ಬಹಿರಂಗ ಮಾಡಿದ್ದಾನೆ.
ನಾವು ಭಾರತದಲ್ಲಿ 10 ರಿಂದ 12 ಆತ್ಮಾಹುತಿ ಬಾಂಬರ್ ಗಳನ್ನು ತಯಾರು ಮಾಡಿದ್ದೇವೆ. ಅದರಲ್ಲಿ ಮೂರರಿಂದ ನಾಲ್ವರು ಮಹಿಳಾ ಬಾಂಬರ್ ಗಳು. ಪಾಕಿಸ್ತಾನದ ಐಎಸ್ ಐನಿಂದ ಇವರಿಗೆ ತರಬೇತಿ ಸಿಕ್ಕಿದೆ. ಮುಂಬರುವ ಹಬ್ಬಗಳಂದು ದಾಳಿ ನಡೆಸಲು ಸಿದ್ಧರಾಗಿದ್ದಾರೆ. ಆದರೆ ಸಂಘಟನೆ ನೀಡುವ ಸೂಚನೆಗಾಗಿ ಕಾಯುತ್ತಿದ್ದಾರೆ.
ಯಾಸಿನ್ ಬಂಧನದ ಬಳಿಕವೂ ಭಾರತದಲ್ಲಿನ ಕಾರ್ಯಾಚರಣೆಯನ್ನು ಸುಗಮವಾಗಿ ನಡೆಸಿಕೊಂಡು ಹೋಗುವ ನಿಟ್ಟಿನಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಹೊಸ ವ್ಯಕ್ತಿಯೊಬ್ಬನಿಗೆ ಈ ಹೊಣೆ ವಹಿಸಿದೆ ಎಂದು ಮೂಲಗಳು ತಿಳಿಸಿವೆ.
ಕೆಎಸ್ ಸಿಎ ಸ್ಫೋಟ ರುವಾರಿ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ 2010ರಲ್ಲಿ ನಡೆದ ಸ್ಫೋಟಗಳ ಹಿಂದಿನ ರುವಾರಿ ನಾನೇ ಎಂದು ಬಂಧಿತ ಉಗ್ರ ಯಾಸೀನ್ ಭಟ್ಕಳ ತಪ್ಪೊಪ್ಪಿಗೆ ನೀಡಿದ್ದಾನೆ.
* ಏಪ್ರಿಲ್ 17, 2010ರಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆದ ಬಾಂಬ್ ಸ್ಫೋಟಗಳನ್ನು ಯಶಸ್ವಿಗೊಳಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದೆ.* ಸ್ಫೋಟಕಗಳ ಬಗ್ಗೆ ಮಾಹಿತಿ ಇಲ್ಲ. ಎಲ್ಲಿಂದ ಪೂರೈಕೆಯಾಗುತ್ತದೆ. ಯಾರು ಕಳಿಸುತ್ತಾರೆ ಎಂಬುದು ನಮಗೂ ತಿಳಿದಿರುವುದಿಲ್ಲ. ನಾವು ಆನ್ ಲೈನ್ ಚಾಟ್ ಮೂಲಕ ವಿಷಯ ವಿನಿಯಮ ಮಾಡಿಕೊಳ್ಳುತ್ತೇವೆ.
* ಭಟ್ಕಳನ ಲ್ಯಾಪ್ ಟಾಪ್ 3 ಸಾವಿರ ಇಮೇಲ್ ಗಳು ದೊರೆತಿದ್ದು, ಅವೆಲ್ಲವೂ ರಹಸ್ಯ ಭಾಷೆಯಲ್ಲಿವೆ.ಜತೆಗೆ ಚಾಟ್ ಹಿಸ್ಟರಿ ಕೂಡಾ ಶೋಧಿಸಬೇಕಿದೆ. ಇವುಗಳನ್ನು ವಿವಿಧ ಸ್ಫೋಟಗಳ ಬಗ್ಗೆ ಪಾಕಿನಲ್ಲಿದ್ದ ಉಗ್ರರಿಗೆ ಮಾಹಿತಿ ನೀಡಲು ಕಳುಹಿಸಿರಬಹುದು ಎಂದು ಅಂದಾಜಿಸಲಾಗಿದೆ.












Click it and Unblock the Notifications