ಉತ್ತರ ಪ್ರದೇಶದಲ್ಲಿ ಭಾರೀ ಮಳೆ: 10 ಮಂದಿ ಸಾವು, ತಗ್ಗು ಪ್ರದೇಶಗಳು ಜಲಾವೃತ
ಲಕ್ನೋ, ಜುಲೈ. 16: ಉತ್ತರ ಪ್ರದೇಶದಲ್ಲಿ ವರುಣನ ಆರ್ಭಟಕ್ಕೆ ಕಳೆದ 24 ಗಂಟೆಗಳಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ 10 ಜನರು ಸಾವನ್ನಪ್ಪಿದ್ದಾರೆ ಎಂದು ಉತ್ತರ ಪ್ರದೇಶ ಪರಿಹಾರ ಆಯುಕ್ತರು ಶನಿವಾರ ರಾತ್ರಿ 9 ಗಂಟೆಗೆ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ರಾಜ್ಯದಲ್ಲಿ ತುಂತುರು ಮಳೆ ಮುಂದುವರಿದಿದೆ.
"ಕಳೆದ 24 ಗಂಟೆಗಳಲ್ಲಿ, ರಾಂಪುರದಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿದ್ದಾರೆ. ಬಲ್ಲಿಯಾ, ಮಹೋಬಾ ಮತ್ತು ಲಲಿತ್ಪುರ ಜಿಲ್ಲೆಗಳಲ್ಲಿ ಸಿಡಿಲು ಬಡಿತದಿಂದ ಏಳು ಮಂದಿ ಸಾವನ್ನಪ್ಪಿದ್ದಾರೆ. ಸುಲ್ತಾನ್ಪುರದಲ್ಲಿ ಹಾವು ಕಡಿತದಿಂದ ಒಬ್ಬರು ಸಾವನ್ನಪ್ಪಿದ್ದಾರೆ" ಎಂದು ಮಾಹಿತಿ ನೀಡಿದ್ದಾರೆ.

ನೀರಾವರಿ ಇಲಾಖೆಯ ಪ್ರಕಾರ ಬುಡೌನ್ನಲ್ಲಿ ಗಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಬುಲಂದ್ಶಹರ್ ಮತ್ತು ಫರೂಕಾಬಾದ್ನಲ್ಲಿ ನದಿ ಅಪಾಯದ ಮಟ್ಟ ತಲುಪುತ್ತಿದೆ. ಪರಯಾಗ್ರಾಜ್ನಲ್ಲಿ ಯಮುನಾ ನದಿ ಅಪಾಯದ ಮಟ್ಟಕ್ಕೆ ಹರಿಯುತ್ತಿದೆ. ಮಥುರಾದಲ್ಲಿ ಯಮುನೆಯ ನೀರಿನ ಮಟ್ಟ ಅಪಾಯದ ಗಡಿ ದಾಟಿದ ನಂತರವೂ ಏರಿಕೆಯಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಥುರಾ ಜಿಲ್ಲೆಯ ಮಂಟ್ ಪ್ರದೇಶದ ಹಲವು ಗ್ರಾಮಗಳು ನೀರಿನಿಂದ ಆವೃತವಾಗಿದ್ದು, ಎಕರೆಗಟ್ಟಲೆ ಬೆಳೆ ನಾಶವಾಗಿದೆ. ಮಥುರಾ ಮತ್ತು ವೃಂದಾವನದ ತಗ್ಗು ಪ್ರದೇಶಗಳಲ್ಲಿನ ಮನೆ ಮತ್ತು ರಸ್ತೆಗಳು ಜಲಾವೃತವಾಗಿವೆ ಎಂದು ಅಧಿಕಾರಿ ಹೇಳಿದ್ದಾರೆ. ಜಿಲ್ಲಾಡಳಿತವು ಜನರನ್ನು ರಕ್ಷಿಸಲು ಮತ್ತು ಮಳೆ ಹಾನಿಯನ್ನು ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದಿದ್ದಾರೆ.
ಹವಾಮಾನ ಕಚೇರಿಯ ಪ್ರಕಾರ, ರಾತ್ರಿ 8 ಗಂಟೆಯವರೆಗೆ 24 ಗಂಟೆಗಳಲ್ಲಿ ರಾಜ್ಯದಲ್ಲಿ 1.02 ಸೆಂಟಿಮೀಟರ್ 'ಸಾಮಾನ್ಯ' ಮಳೆ ದಾಖಲಾಗಿದೆ. ರಾಜ್ಯದ 75 ಜಿಲ್ಲೆಗಳ ಪೈಕಿ 32 ಜಿಲ್ಲೆಗಳಲ್ಲಿ 'ಹೆಚ್ಚುವರಿ' ಮಳೆ ದಾಖಲಾಗಿದೆ. ಇದರ ಜೊತೆಗೆ ಮುಂದಿನ 48 ಗಂಟೆಗಳಲ್ಲಿ ರಾಜ್ಯಾದ್ಯಂತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಇತ್ತ, ದಾಖಲೆಯ ಮಳೆ ಮತ್ತು ಹರಿಯಾಣದ ಹತ್ನಿ ಕುಂಡ್ ಬ್ಯಾರೇಜ್ನಿಂದ ನೀರನ್ನು ಬಿಡುಗಡೆ ಮಾಡಿದ ನಂತರ ಯಮುನಾ ನದಿಯ ನೀರಿನ ಮಟ್ಟವನ್ನು ಹೆಚ್ಚಿಸಿದೆ. ಇದರಿಂದ ರಾಷ್ಟ್ರ ರಾಜಧಾನಿ ತೀವ್ರ ಪ್ರವಾಹದಿಂದ ತತ್ತರಿಸುತ್ತಿರುವಾಗಲೇ ಮತ್ತೊಮ್ಮೆ ಭಾರೀ ಮಳೆಯು ದೆಹಲಿಗೆ ಅಪ್ಪಳಿಸಿದೆ. ಪ್ರವಾಹದ ನೀರನ್ನು ಹೊರಹಾಕಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿರುವುದರಿಂದ ಈ ಮಳೆಯು ಅಧಿಕಾರಿಗಳ ಕೆಲಸವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಐಟಿಒ ಮತ್ತು ರಾಜ್ಘಾಟ್ ಸೇರಿದಂತೆ ನಗರದ ಪ್ರಮುಖ ಪ್ರದೇಶಗಳು ಮುಳುಗಿದ್ದು, ಭಾನುವಾರ ಬೆಳಗ್ಗೆ ರಾಷ್ಟ್ರ ರಾಜಧಾನಿಯ ಹಲವಾರು ಸ್ಥಳಗಳು ಭಾರಿ ಟ್ರಾಫಿಕ್ ಅಸ್ತವ್ಯಸ್ತತೆಯಿಂದ ನರಳಿವೆ. ಹಲವು ರಸ್ತೆಗಳು ಜಲಾವೃತವಾಗಿವೆ. ಸುಪ್ರೀಂ ಕೋರ್ಟ್ ಸಮೀಪವಿರುವ ಪ್ರದೇಶಗಳಿಂದ ನೀರನ್ನು ಹೊರಹಾಕಲು ಪೌರಕಾರ್ಮಿಕರು ರಾತ್ರಿಯಿಡೀ ಕೆಲಸ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications