ಹೆಂಗಿತ್ತು ಚಿರಂಜೀವಿ ಜನಪ್ರಿಯತೆ:ಈಗ ಏನಾಗಿ ಹೋಯಿತು
ತೆಲುಗು ಭಾಷಿಗರಿಗೆ ಮೊದಲನಿಂದಲೂ ಮನೋರಂಜನೆಗೆ ಇರುವ ಮೊದಲ ಆಯ್ಕೆಯೆಂದರೆ ಸಿನಿಮಾ. ಎನ್ ಟಿ ರಾಮರಾವ್, ಅಕ್ಕಿನೇನಿ ನಾಗೇಶ್ವರ್ ರಾವ್ ನಂತರ ಅಖಂಡ ಅಂಧ್ರಪ್ರದೇಶ ಕಂಡ ಅತ್ಯಂತ ಜನಪ್ರಿಯ ಸಿನಿಮಾ ನಟರಲ್ಲಿ ಮಂಚೂಣಿಯಲ್ಲಿ ಬರುವ ಹೆಸರು ಮೆಗಾಸ್ಟಾರ್ ಚಿರಂಜೀವಿ.
ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿ ತೆಲುಗು ಚಿತ್ರರಂಗದಲ್ಲಿ ಅನಭಿಷಕ್ತ ರಾಜನಂತೆ ಮೆರೆಯುತ್ತಿದ್ದ ಚಿರಂಜೀವಿ ಯಾವಾಗ ರಾಜಕೀಯಕ್ಕೆ ಪ್ರವೇಶಿದರೋ ಆಗಲೇ ಅಭಿಮಾನಿಗಳ ಹೃದಯ ಸಾಮ್ರಾಜ್ಯದಿಂದ ದೂರ ಸರಿಯಲಾರಂಭಿಸಿದರು.
ಆಂಧ್ರದಲ್ಲಿ ತೆಲುಗುದೇಶಂ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯವಾಗಿ ಪ್ರಾದೇಶಿಕ ಪಕ್ಷ ಕಟ್ಟಬಹುದು ಎನ್ನುವ ಮಹತ್ವಾಕಾಂಕ್ಷೆಯೊಂದಿಗೆ ಚಿರು ಪ್ರಜಾರಾಜ್ಯಂ ಪಕ್ಷವನ್ನು 26.08.2008ರಲ್ಲಿ ಹುಟ್ಟು ಹಾಕಿದರು. ತಿರುಪತಿಯಲ್ಲಿ ನಡೆದ ಈ ಮೊದಲ ಸಾರ್ವಜನಿಕ ಸಭೆಯಲ್ಲಿ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಜನರು ಸೇರಿದ್ದರು.
2009ರಲ್ಲಿ ನಡೆದ ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಸದ್ದು ಮಾಡಬಹುದೆಂದು ನಿರೀಕ್ಷೆ ಮಾಡಿದ್ದ ಪ್ರಜಾರಾಜ್ಯಂ ಪಕ್ಷ ಕೇವಲ 18 ಸೀಟುಗಳನ್ನು ಗೆದ್ದು ನಿರಾಶೆ ಮೂಡಿಸಿತು. ಹಗಲಿರುಳು ರಾಜ್ಯ ಸುತ್ತಾಡಿದರೂ ಆಂಧ್ರದ ಮತದಾರ ಚಿರಂಜೀವಿಯಲ್ಲಿ ಒಬ್ಬ ನಟನನ್ನು ಕಂಡರೇ ಹೊರತು ರಾಜಕೀಯ ನಾಯಕನಾಗಿ ನೋಡಲೇ ಇಲ್ಲ.
ಸಾರ್ವಜನಿಕ ಸಭೆಗೆ ಬರುವವರೆಲ್ಲಾ ಪಕ್ಷಕ್ಕೆ ಮತ ನೀಡುತ್ತಾರೆ ಎನ್ನುವುದುದು ತಪ್ಪು ಲೆಕ್ಕಾಚಾರ ಎನ್ನುವುದು ಬಹುಷಃ ಚಿರಂಜೀವಿಗೆ ತಿಳಿಯಲಿಲ್ಲವೇನೋ? ಖುದ್ದು ಚಿರಂಜೀವಿ ಸ್ಪರ್ಧಿಸಿದ ಎರಡು ಕ್ಷೇತ್ರಗಳಲ್ಲಿ ಒಂದರಲ್ಲಿ ಸೋಲು ಅನುಭವಿಸಿದರು.
ಚಿರಂಜೀವಿಯನ್ನು ಆಂಧ್ರದ ಜನತೆ ಒಬ್ಬ ಕಲಾವಿದನಾಗಿ ನೋಡುತ್ತಾರೆಯೇ ಹೊರತು ರಾಜಕೀಯ ನಾಯಕನಾಗಿ ಅಲ್ಲ ಎನ್ನುವ ಅಂದಿನ ಸಿಎಂ ರಾಜಶೇಖರ್ ರೆಡ್ಡಿ ಲೆಕ್ಕಾಚಾರ ವೃತ್ತಿಪರ ರಾಜಕಾರಣಿಯ ಮಾತಿನಂತಿತ್ತು. 2008ರಲ್ಲಿ ನಡೆದ ಲೋಕಸಭಾ ಚುನಾವಾಣೆಯಲ್ಲಿ ಪ್ರಜಾರಾಜ್ಯಂ ಟಿಕೆಟಿನಿಂದ ಸ್ಪರ್ಧಿಸಲು ಅಭ್ಯರ್ಥಿಗಳಿಂದ ಕೋಟಿಗಟ್ಟಲೆ ಹಣ ಪಡೆಯಲಾಗಿತ್ತು ಎನ್ನುವ ಆಪಾದನೆ ಕೂಡಾ ಚಿರಂಜೀವಿ ಮೇಲಿತ್ತು.
ರಾಜಕೀಯ ಪ್ರವೇಶಿಸುವ ಎಲ್ಲಾ ಸಿನಿಮಾ ನಟರು NTR ಅಥವಾ MGR ಆಗಲು ಸಾಧ್ಯವೇ? ಅದಕ್ಕಾಗಿಯೋ ಏನೋ ತನ್ನ ಪಕ್ಷಕ್ಕೆ ಭವಿಷ್ಯ ಇಲ್ಲ ಎನ್ನುವುದನ್ನರಿತ ಚಿರಂಜೀವಿ ಪ್ರಜಾರಾಜ್ಯಂ ಪಕ್ಷವನ್ನು 06.02.2011ರಲ್ಲಿ ಕಾಂಗ್ರೆಸ್ ಜೊತೆ ವಿಲೀನಗೊಳಿಸುವುದಾಗಿ ಘೋಷಿಸಿದರು. ಸದ್ಯ, ಚಿರಂಜೀವಿ ಕೇಂದ್ರದಲ್ಲಿ ಪ್ರವಾಸೋದ್ಯಮ ಸಚಿವರಾಗಿದ್ದಾರೆ.
ಲೆಕ್ಕಾಚಾರವಿಲ್ಲದ ರಾಜಕೀಯ ನಿಧಾರಗಳಿಂದ ಪಕ್ಷ ಸ್ಥಾಪಿಸಿದ ಹೆಚ್ಚುಕಮ್ಮಿ ಮೂರೇ ವರ್ಷಗಳಲ್ಲಿ ಪಕ್ಷಕ್ಕೆ ಇತಿಶ್ರೀ ಹಾಡಿದ್ದು ಹಲವರ ಬೇಸರಕ್ಕೆ ಕಾರಣವಾಯಿತು. ಕಾಂಗ್ರೆಸ್ ಪಕ್ಷಕ್ಕೆ ವಿಲೀನಗೊಳಿಸುವ ವಿಚಾರದಲ್ಲಿ ಚಿರಂಜೀವಿ ತನ್ನ ಅಭಿಮಾನಿಗಳು, ಪ್ರಜಾರಾಜ್ಯಂ ಪಕ್ಷದ ಕಾರ್ಯಕರ್ತರು ಜೊತೆಗೆ ತನ್ನ ಸಹೋದರರ ಜೊತೆಗೆ ಮನಸ್ತಾಪ ಎದುರಿಸ ಬೇಕಾಯಿತು. ಆದರೆ ಅಂದು ಇದಕ್ಕೆಲ್ಲಾ ಚಿರಂಜೀವಿ ಕ್ಯಾರೇ ಅನ್ನಲಿಲ್ಲ. ಇಂದು..
ಮುಂದೆ ಓದಿ..
ತೆಲಂಗಾಣ ಸಮಸ್ಯೆ
ಈ ಮಧ್ಯೆ, ತೆಲಂಗಾಣ ಸಮಸ್ಯೆ ಆಂಧ್ರದ ಎಲ್ಲಾ ರಾಜಕೀಯ ನಾಯಕರಿಗೆ ಬಿಸಿತುಪ್ಪವಾಗಿ ಪರಿಣಮಿಸಲು ಆರಂಭಿಸಿತು. ಅದರಂತೆ ಚಿರಂಜೀವಿಗೂ ಕೂಡಾ. ತನ್ನ ದ್ವಂದ್ವ ನೀತಿಯಿಂದ ಚಿರಂಜೀವಿ ಪ್ರಮುಖವಾಗಿ ಸೀಮಾಂಧ್ರ ಪ್ರದೇಶದ ಜನರ ಆಕ್ರೋಶ ಎದುರಿಸ ಬೇಕಾಯಿತು.
ಚಪ್ಪಲಿ, ಮೊಟ್ಟೆ ಎಸೆತ
ಸಿನಿಮಾ ರಂಗದಲ್ಲಿದ್ದಾಗ ತನಗೆ ಹೂವು, ದುಡ್ಡು ಎಸೆಯುತ್ತಿದ್ದ ಜನರು ಚಪ್ಪಲಿ, ಮೊಟ್ಟೆ ಎಸೆಯಲಾರಂಭಿಸಿದ್ದು ಚಿರಂಜೀವಿ ಮೇಲೆ ಜನರಿಗಿರುವ ಸಿಟ್ಟಿಗೆ ಕೊಡಬಹುದಾದ ಉದಾಹರಣೆ. ಆಂಧ್ರವನ್ನು ಅಖಂಡವಾಗಿ ಉಳಿಸಲು ಚಿರಂಜೀವಿ ಪರಿಶ್ರಮ ಪಡಲೇ ಇಲ್ಲ ಎನ್ನುವುದು ಸೀಮಾಂಧ್ರ ಪ್ರಾಂತ್ಯದ ಜನರಿಗಿರುವ ನೋವು. ಇತ್ತೀಚೆಗೆ ಚಂಡಮಾರುತಕ್ಕೆ ಒಳಗಾದ ಪ್ರದೇಶಕ್ಕೆ ಚಿರು ಭೇಟಿ ನೀಡಿದಾಗ ಜನರ ಕಲ್ಲು ತೂರಾಟ ಎದುರಿಸ ಬೇಕಾಯಿತು. ಜನರು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದರು. ಮೊಟ್ಟೆ ಎಸೆದರು.
ಮಗನ ಚಿತ್ರ ಬಿಡುಗಡೆಯಾಗಲಿಲ್ಲ
ತನ್ನನ್ನು ದೇವರಂತೆ ಕಾಣುತ್ತಿದ್ದ ಸೀಮಾಂಧ್ರ ಮತ್ತು ತೆಲಂಗಾಣದ ಅಭಿಮಾನಿಗಳು ಚಿರಂಜೀವಿಯಿಂದ ದೂರವಾಗಲಾರಂಭಿಸಿದರು. ಅಷ್ಟೇ ಅಲ್ಲದೆ ಚಿರಂಜೀವಿ ಪುತ್ರ ರಾಮ್ ಚರಣ್ ತೇಜಾ ಅವರ ಚಿತ್ರ ಕೂಡಾ ತೆಲಂಗಾಣದಲ್ಲಿ ಬಿಡುಗಡೆಯಾಗಲಿಲ್ಲ. ಚಿರಂಜೀವಿ ಕುಟುಂಬದ ಕಾರ್ಯಕ್ರಮಗಳಿಗೆ ಅವರ ಸಹೋದರರು ದೂರ ಸರಿಯಲಾರಂಭಿಸಿದರು.
ಸಂಘಗಳಲ್ಲಿ ಕಿಚ್ಚಿಲ್ಲ
ಆಂಧ್ರಪ್ರದೇಶದಲ್ಲಿರುವ ಹಲವಾರು ಚಿರಂಜೀವಿ ಅಭಿಮಾನಿ ಸಂಘಗಳು ಈಗಾಗಲೇ ಮುಚ್ಚಿವೆ. ಮುಚ್ಚದೇ ಇರುವ ಸಂಘಗಳಲ್ಲಿ ಹಿಂದಿನ ಕಿಚ್ಚಿಲ್ಲ. ಚಿರಂಜೀವಿ ಬಣ್ಣ ಹಚ್ಚುತ್ತಾರೆಂದರೆ ಅಭಿಮಾನಿಗಳಲ್ಲಿ ಆ ಹಿಂದಿನ ಹುಚ್ಚಿಲ್ಲ. ರಾಜಕೀಯದಲ್ಲಿ ಚಿರಂಜೀವಿ ಹಿನ್ನಡೆ ಅನುಭವಿಸಲು ಅವರ ಭಾವಮೈದುನ ಅಲ್ಲು ಅರವಿಂದ್ ಕಾರಣ ಎನ್ನುವ ಮಾತೂ ಕೇಳಿ ಬರುತ್ತಿದೆ.
ಮೆಗಾಸ್ಟಾರ್
ಒಂದು ಕಾಲದಲ್ಲಿ ಸಾವಿರಾರು ಜನರು ಚಿರಂಜೀವಿ ಭೇಟಿ ಮಾಡಲು ಕಾಯುತ್ತಿದ್ದರು. ನಿರ್ಮಾಪಕರು ಇವರ ಕಾಲ್ ಶೀಟಿಗಾಗಿ ಹಾತೊರೆಯುತ್ತಿದ್ದರು. ಈಗ ರಸ್ತೆಯಲ್ಲಿ ನಡೆದು ಕೊಂಡು ಹೋಗುತ್ತಿದ್ದರೂ ಚಿರಂಜೀವಿ ತನ್ನ ಆ ಕಾಲದ ಗತವೈಭವದ ಜನಪ್ರಿಯತೆಯನ್ನು ಉಳಿಸಿಕೊಳ್ಳಲು ವಿಫಲರಾಗಿದ್ದಾರೆ. ಆಂಧ್ರ ಕಾಂಗ್ರೆಸ್ಸಿನಲ್ಲಿರುವ ಹಲವಾರು ನಾಯಕರಲ್ಲಿ ಚಿರಂಜೀವಿ ಕೂಡಾ ಒಬ್ಬರಂತಾಗಿದ್ದಾರೆ. ಅತ್ತ ಸಿನಿಮಾದಲ್ಲೂ ಇತ್ತ ರಾಜಕೀಯದಲ್ಲೂ ಅತಂತ್ರವಾಗಿರುವ ಚಿರಂಜೀವಿ ಇಂದಿನ ಸ್ಥಿತಿಗತಿಗೆ ಕಾರಣ ಯಾರು?