ಅರ್ಚಕರ ಮದುವೆಯಾದರೆ ಸರಕಾರದಿಂದ 3 ಲಕ್ಷ, ಮದುವೆ ಖರ್ಚಿಗೆ 1 ಲಕ್ಷ
ಹೈದರಾಬಾದ್, ಅಕ್ಟೋಬರ್ 19 : ತೆಲಂಗಾಣ ಸರಕಾರ ಹೊಸ ಯೋಜನೆಯೊಂದನ್ನು ಜಾರಿಗೆ ತರಲು ನಿರ್ಧರಿಸಿದ್ದು, ಅದಕ್ಕೆ 'ಕಲ್ಯಾಣಮಸ್ತು' ಎಂಬ ಹೆಸರಿಡಲು ತೀರ್ಮಾನಿಸಿದೆ. ಈ ಯೋಜನೆ ಏನೆಂದರೆ, ದೇವಸ್ಥಾನದಲ್ಲಿ ಅರ್ಚಕರಾಗಿರುವವರನ್ನು ಮದುವೆಯಾಗುವ ಮಹಿಳೆಯರಿಗೆ ಮೂರು ಲಕ್ಷ ರುಪಾಯಿ ನೀಡಲಾಗುವುದಂತೆ. ಮುಂದಿನ ತಿಂಗಳಿಂದಲೇ ಈ ಯೋಜನೆ ಜಾರಿಗೆ ಬರುತ್ತದಂತೆ.
ಬ್ರಾಹ್ಮಣ ಹುಡುಗರಿಗೆ ಮದುವೆಗೆ ಹೆಣ್ಣು ಹುಡುಕಿಕೊಡಿ...
ದೇವಸ್ಥಾನಗಳಲ್ಲಿ ಪೂಜೆ ಮಾಡುವ ಅರ್ಚಕರಿಗೆ ಹಾಗೂ ಪುರೋಹಿತ ವೃತ್ತಿಯಲ್ಲಿರುವವರಿಗೆ ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಡುವುದಕ್ಕೆ ಪೋಷಕರು ಹಿಂಜರಿಯುತ್ತಿದ್ದಾರೆ. ಈ ಅಂಶ ಸರಕಾರದ ಗಮನಕ್ಕೆ ಬಂದು, ಇಂಥದ್ದೊಂದು ಯೋಜನೆ ತಂದಿದೆ. ಇದರ ಜತೆಗೆ ಮದುವೆಗೆ ಖರ್ಚಿಗೆ ಅಂತ ಯುವತಿ ಕುಟುಂಬದವರಿಗೆ ಒಂದು ಲಕ್ಷ ರುಪಾಯಿಯನ್ನು ಕೂಡ ಸರಕಾರ ನೀಡಲಿದೆ.
ಬ್ರಾಹ್ಮಣರ ಹುಡುಗರ ಮದುವೆ: ಎರಡು ಪ್ರತಿಕ್ರಿಯೆ
ಅರ್ಚಕರಿಗೆ ಆದಾಯ ಕಡಿಮೆ ಎಂಬ ಭಾವನೆ ಇರುವುದರಿಂದ ಮದುವೆಗೆ ಹೆಣ್ಣು ಸಿಗುತ್ತಿಲ್ಲ. ಆ ಕಾರಣಕ್ಕೆ ಅರ್ಚಕರು ಹಾಗೂ ಅವರನ್ನು ಮದುವೆಯಾಗುವ ಹುಡುಗಿಯ ಹೆಸರಿನಲ್ಲಿ ಜಂಟಿ ಖಾತೆ ಮಾಡಿ, ಮೂರು ಲಕ್ಷ ರುಪಾಯಿ ನಿಶ್ಚಿತ ಠೇವಣಿ ಇಡಲಾಗುತ್ತದೆ. ಜತೆಗೆ ಹುಡುಗಿಯ ಕುಟುಂಬದವರಿಗೆ ಮದುವೆ ಖರ್ಚು ಒಂದು ಲಕ್ಷ ರುಪಾಯಿ ನೀಡುವುದು ಸಹ ಇದೆ.
ಅರ್ಜಿ ಹಾಕಿಕೊಳ್ಳಬಹುದು
ಕಲ್ಯಾಣಮಸ್ತು ಯೋಜನೆ ನವೆಂಬರ್ ನಲ್ಲಿ ಜಾರಿಗೆ ಬರಲಿದ್ದು, ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಗಂಡ-ಹೆಂಡತಿ ಹೆಸರಿನಲ್ಲಿ ಜಂಟಿ ಖಾತೆ ಮಾಡಿ, ಮೂರು ವರ್ಷದ ತನಕ ಮೂರು ಲಕ್ಷ ರುಪಾಯಿ ನಿಶ್ಚಿತ ಠೇವಣಿ ಇಡಲಾಗುತ್ತದೆ. ಇನ್ನು ದೇವಸ್ಥಾನದ ಅರ್ಚಕರಿಗೆ ಮದುವೆ ಮಾಡಿಕೊಡಲು ಮುಂದೆ ಬರುವವರು ಅರ್ಜಿ ಸಲ್ಲಿಸಬಹುದು. ಈ ಯೋಜನೆ ಅಡಿ ಇಷ್ಟೇ ಮಂದಿ ಎಂಬ ಸಂಖ್ಯೆ ಮಿತಿ ಹಾಕಿಕೊಂಡಿಲ್ಲ.
ಮೊದಲ ದಿನವೇ ವೇತನ ಪಾವತಿ
ತೆಲಂಗಾಣ ರಾಜ್ಯದಲ್ಲಿರುವ ನಾಲ್ಕು ಸಾವಿರಕ್ಕೂ ಹೆಚ್ಚು ದೇವಸ್ಥಾನಗಳ ಅರ್ಚಕರಿಗೆ ವೇತನ ಪರಿಷ್ಕರಣೆ ಮಾಡಲಾಗುವುದು. ಎಲ್ಲ ಸರಕಾರಿ ನೌಕರರಿಗೆ ನೀಡುವಂತೆ ಅರ್ಚಕರಿಗೂ ಮೊದಲ ದಿನವೇ ವೇತನ ಪಾವತಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಸೆಪ್ಟೆಂಬರ್ ತಿಂಗಳಲ್ಲಿ ಪ್ರಕಟಿಸಿದ್ದರು.
ಸಾಫ್ಟ್ ವೇರ್ ಉದ್ಯೋಗಿಗಳಿಗೇ ವಧು ಸಿಗುತ್ತಿಲ್ಲ
ಕಾಲವು ಬದಲಾಗಿದ್ದು, ಹೆಣ್ಣುಮಕ್ಕಳು ಆಕಾಂಕ್ಷೆ ಹಾಗೂ ಆಯ್ಕೆಯಲ್ಲಿ ಬದಲಾವಣೆಗಳಾಗಿವೆ. ಉದ್ಯೋಗದಲ್ಲಿ ಅನಿಶ್ಚಿತತೆ ಇರುವ ಕಾರಣಕ್ಕೆ ಸಾಫ್ಟ್ ವೇರ್ ಉದ್ಯೋಗಿಗಳಿಗೆ ವಧು ಸಿಗುವುದೇ ಕಷ್ಟವಾಗಿದೆ. ಇನ್ನು ಅರ್ಚಕರ ಸ್ಥಿತಿ ಮತ್ತೂ ಚಿಂತಾಜನಕವಾಗಿದೆ ಎಂದು ತೆಲಂಗಾಣ ಬ್ರಾಹ್ಮಣ ಸಂಕ್ಷೇಮ ಪರಿಷದ್ ಅಧ್ಯಕ್ಷ ಹಾಗೂ ಮುಖ್ಯಮಂತ್ರಿಗಳ ಸಲಹೆಗಾರರೂ ಆಗಿರುವ ಕೆ.ವಿ.ರಮಣಾಚಾರಿ ಅಭಿಪ್ರಾಯಪಟ್ಟಿದ್ದಾರೆ.
ಸಾಮಾಜಿಕ ಸ್ಥಾನಮಾನ ಹೆಚ್ಚು
ಅರ್ಚಕರ ವೇತನ ಹೆಚ್ಚಳ, ಕಲ್ಯಾಣಮಸ್ತು ಯೋಜನೆಯಂಥದ್ದು ಜಾರಿಯಾದರೆ ಅರ್ಚಕರ ಸಾಮಾಜಿಕ ಸ್ಥಾನಮಾನಗಳೂ ಹೆಚ್ಚಾಗುತ್ತದೆ. ಇಂದಿಗೆ ಸಾಮಾಜಿಕ ವಿವಾಹವೇ ಸಮಸ್ಯೆಯಂತೆ ಕಾಡುತ್ತಿದ್ದು, ಸೂಕ್ತ ಸಂಗಾತಿ ಸಿಗುವ ಸಾಧ್ಯತೆಗಳು ಹೆಚ್ಚುತ್ತವೆ ಎಂದು ಕೆ.ವಿ.ರಮಣಾಚಾರಿ ಹೇಳಿದ್ದಾರೆ.