ಚುನಾವಣೆಗೂ ಮುನ್ನವೇ ಬಂಡಿ ಸಂಜಯ್ಗೆ ಕೊಕ್: ಕರ್ನಾಟಕದಂತೆಯೇ ತೆಲಂಗಾಣದಲ್ಲಿ ಬಿಜೆಪಿಗೆ ಒಳೇಟು? ಇನ್ಸೈಡ್ ಡಿಟೈಲ್ಸ್
ನವದೆಹಲಿ, ಜುಲೈ 05: ನಾಲ್ಕು ರಾಜ್ಯಗಳಿಗೆ ಹೊಸ ಅಧ್ಯಕ್ಷರನ್ನು ಬಿಜೆಪಿ ಮಂಗಳವಾರ ನೇಮಿಸಿದೆ. ತೆಲಂಗಾಣದಲ್ಲಿ ಬಂಡಿ ಸಂಜಯ್ ಅವರಿಗೆ ಕೊಕ್ ನೀಡಿ ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿದೆ. ಈ ಮೂಲಕ ವರ್ಷಾಂತ್ಯದಲ್ಲಿ ನಡೆಯುವ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಬಿಜೆಪಿ ಶತಪ್ರಯತ್ನ ಮಾಡುತ್ತಿದೆ.
ಆಂಧ್ರಪ್ರದೇಶ, ಪಂಜಾಬ್ ಮತ್ತು ಜಾರ್ಖಂಡ್ಗಳಲ್ಲಿಯೂ ನೂತನ ಅಧ್ಯಕ್ಷರನ್ನು ಬಿಜೆಪಿ ನೇಮಿಸಿದೆ. ಇಲ್ಲಿ ಜಾತಿ ಸಮೀಕರಣದ ಲೆಕ್ಕವನ್ನು ಬಿಜೆಪಿ ಹಾಕಿದೆ ಎಂದು ಹೇಳಲಾಗುತ್ತಿದೆ.

ತೆಲಂಗಾಣ ಬಿಜೆಪಿ ಬಿಜೆಪಿ ಅಧ್ಯಕ್ಷರಾಗಿ ಮೂರು ವರ್ಷಗಳ ಅವಧಿಯನ್ನು ಬಂಡಿ ಸಂಜಯ್ ಪೂರ್ಣಗೊಳಿಸಿದ್ದರು. ಇದು ಪದಚ್ಯುತಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ತೆಲಂಗಾಣ ಬಿಜೆಪಿಯ ಚುನಾವಣಾ ನಿರ್ವಹಣಾ ಸಮಿತಿಯ ಅಧ್ಯಕ್ಷರಾಗಿ ತೆಲಂಗಾಣದ ಶಾಸಕ ಮತ್ತು ಮಾಜಿ ಸಚಿವ ಎಟಾಲ ರಾಜೇಂದರ್ ಅವರನ್ನು ನೇಮಿಸಲಾಯಿತು. ರಾಜೇಂದರ್ ಅವರು ಪ್ರಭಾವಿಯಾಗಿದ್ದು, ಕಾಂಗ್ರೆಸ್ ಮತ್ತು ಬಿಆರ್ಎಸ್ ಪಕ್ಷಗಳಿಂದ ನಾಯಕರನ್ನು ಕರೆತರುವ ಟಾಸ್ಕ್ ಅನ್ನು ಅವರಿಗೆ ಹೊರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆಂಧ್ರಪ್ರದೇಶದಲ್ಲಿ ಕೇಂದ್ರದ ಮಾಜಿ ಸಚಿವೆ ದಗ್ಗುಬಾಟಿ ಪುರಂದೇಶ್ವರಿ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಗಿದೆ. ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿಯು ತೆಲುಗು ದೇಶಂ ಪಕ್ಷದೊಂದಿಗೆ ಮೈತ್ರಿಗೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಪ್ರಮುಖ ಬುಡಕಟ್ಟು ನಾಯಕರಾದ ಬಾಬುಲಾಲ್ ಮರಾಂಡಿ ಅವರನ್ನ ಜಾರ್ಖಂಡ್ ಘಟಕದ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಪಂಜಾಬ್ ಘಟಕಕ್ಕೆ ಸುನೀಲ್ ಜಾಖರ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಪಂಜಾಬ್ನಲ್ಲಿ ನಿರ್ಗಮಿತ ರಾಜ್ಯಾಧ್ಯಕ್ಷ ಅಶ್ವಿನಿ ಶರ್ಮಾ ಅವರ ಅವಧಿ ಪೂರ್ಣಗೊಂಡಿತ್ತು. ಈ ಹಿಂದೆ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಜಾಖರ್ಗೆ ಅನುಭವ ಇರುವ ಕಾರಣ ಬಿಜೆಪಿ ಅವರನ್ನು ನೇಮಿಸಿದೆ ಎಂದು ತಿಳಿದುಬಂದಿದೆ.
ತೆಲಂಗಾಣದಲ್ಲಿ ಬಂಡಾಯ
ಬಂಡಿ ಸಂಜಯ್ ವಿರೋಧಿ ಲಾಬಿಯ ಒತ್ತಡಕ್ಕೆ ಮಣಿದಿರುವ ಬಿಜೆಪಿ ತೆಲಂಗಾಣದಲ್ಲಿ ಅಚ್ಚರಿಯ ಬದಲಾವಣೆಗೆ ಕೈಹಾಕಿದೆ. ಸಂಜಯ್ ಅವರನ್ನು ಬದಲಾಯಿಸದಿದ್ದರೆ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಈಟಾಳ ರಾಜೇಂದರ್ ಬೆದರಿಕೆ ಹಾಕಿದ್ದರು.

ತೆಲಂಗಾಣದಲ್ಲಿ ನವೆಂಬರ್ನಲ್ಲಿ ಚುನಾವಣೆ ನಡೆಯಲಿದ್ದು, ಬಿಆರ್ಎಸ್ ಆಡಳಿತವಿರುವ ತೆಲಂಗಾಣದಲ್ಲಿ ಬಿಜೆಪಿ ಹೆಚ್ಚಿನ ನಿರೀಕ್ಷೆಯನ್ನು ಹೊಂದಿದೆ. ಆದರೆ, ಭಾರೀ ಆಂತರಿಕ ಕಲಹ ಮತ್ತು ಗುಂಪುಗಾರಿಕೆ ಬಿಜೆಪಿ ನಿರೀಕ್ಷೆಗೆ ತಣ್ಣಿರು ಎರಚಲು ಆರಂಭಿಸಿತ್ತು. ನಿರಂತರ ಗುಂಪುಗಾರಿಕೆಯಿಂದ ಬಂಡಿ ಸಂಜಯ್ ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಬಿಜೆಪಿ ಹೈಕಮಾಂಡ್ ಬೆಂಬಲದ ಹೊರತಾಗಿಯೂ ಸಂಜಯ್ ಅವರು ಸ್ಥಾನವನ್ನು ಕಳೆದುಕೊಂಡಿದ್ದು ಅಚ್ಚರಿಗೆ ಕಾರಣವಾಗಿದೆ.
ಬಂಡಿ ಸಂಜಯ್ ವರ್ತನೆ ಬಗ್ಗೆ ಈಟಾಳ ರಾಜೇಂದರ್ ಬೆಂಬಲಿಗರು ಧ್ವನಿ ಎತ್ತುತ್ತಿದ್ದಂತೆ ಎಚ್ಚೆತ್ತ ಪಕ್ಷದ ಹೈಕಮಾಂಡ್ ಕೇಂದ್ರ ಸಚಿವ ಕಿಶನ್ ರೆಡ್ಡಿ ಅವರನ್ನು ನೇಮಿಸಿದೆ.

'ಕಿಶನ್ ರೆಡ್ಡಿ ಅವರು ಒಮ್ಮತದ ಆಯ್ಕೆಯಾಗಿ ಹೊರಹೊಮ್ಮಿದ್ದಾರೆ. ಅದು ಎರಡೂ ಬಣಗಳಿಗೆ ಸ್ವೀಕಾರಾರ್ಹವಾಗಿದೆ' ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
ಮುಂದಿನ ಸಂಪುಟ ಪುನಾರಚನೆಯಲ್ಲಿ ಸಂಜಯ್ಗೆ ಕೇಂದ್ರ ಸಚಿವ ಸ್ಥಾನ ಸಿಗಲಿದೆ ಎಂದು ಬಿಜೆಪಿ ಒಳಗಿನವರು ಹೇಳಿದ್ದಾರೆ. ಈ ಬದಲಾವಣೆ ಬಗ್ಗೆ ಕಳೆದ ವಾರವಷ್ಟೇ ಈಟಾಲ ರಾಜೇಂದರ್ ಬಣಕ್ಕೆ ತಿಳಿಸಲಾಯಿತು ಎಂದು ಅವರು ಹೇಳಿದ್ದಾರೆ.
'ಇತರ ನಾಯಕರಿಗೆ ಗೌರವ ನೀಡದ ಮತ್ತು ನಿರಂಕುಶಾಧಿಕಾರಿಯಂತೆ ವರ್ತಿಸುವ ಬಂಡಿ ಸಂಜಯ್ ಅವರ ವರ್ತನೆಯ ಬಗ್ಗೆ ನಾವು ಹಲವಾರು ಬಾರಿ ದೂರು ನೀಡಿದ್ದೇವೆ' ಎಂದು ಈಟಾಲಾ ಅವರ ನಿಕಟ ನಾಯಕರೊಬ್ಬರು 'ದಿ ಪ್ರಿಂಟ್' ವೆಬ್ಸೈಟ್ಗೆ ತಿಳಿಸಿದ್ದಾರೆ.
'ಹಿರಿಯ ನಾಯಕರಾದ ಕಿಶನ್ ರೆಡ್ಡಿ ಮತ್ತು ಕೆ. ಲಕ್ಷ್ಮಣ್ ಕೂಡ ಸಂಜಯ್ ಅವರ ವರ್ತನೆ ಬಗ್ಗೆ ಅಸಮಾಧಾನ ಹೊಂದಿದ್ದರು' ಎಂದು ಅವರು ಹೇಳಿದ್ದಾರೆ.
ತಮ್ಮ ಕಾರ್ಯಕರ್ತರು ಮತ್ತು ಸಹವರ್ತಿಗಳಿಗೆ ಗೌರವ ಸಿಗುತ್ತಿಲ್ಲ. ಈ ಕಾರಣ ಭ್ರಮನಿರಸನಗೊಂಡಿರುವುದಾಗಿ ಈಟಾಲ ತಿಳಿಸಿದ್ದರು.
ಅನೇಕ ಬಿಆರ್ಎಸ್ ನಾಯಕರು ಆರಂಭದಲ್ಲಿ ಬಿಜೆಪಿಗೆ ಸೇರಲು ಒಲವು ತೋರಿದರು. ಆದರೆ, ಪಕ್ಷದಲ್ಲಿ ತಮಗೇ ಗೌರವ ಸಿಗುತ್ತಿಲ್ಲ. ಇನ್ನು ಅವರ ಭವಿಷ್ಯದ ಗ್ಯಾರಂಟಿ ಏನು ಎಂದು ನಾನು ಸುಮ್ಮನಾದೆ ಎಂದು ಈಟಾಲ ಹೇಳಿದ್ದರು.
ನಾಯಕತ್ವದ ಸಮಸ್ಯೆಗಳ ಹೊರತಾಗಿ, ಎರಡು ಬಣಗಳ ನಡುವೆ ಚುನಾವಣೆಗೆ ಸಂಬಂಧಿಸಿದ ವಿಷಯಗಳ ಬಗ್ಗೆಯೂ ಭಿನ್ನಾಭಿಪ್ರಾಯಗಳಿವೆ.
ತೆಲಂಗಾಣ ಬಿಜೆಪಿಯು ಸಂಜಯ್ ಅವರ ನಾಯಕತ್ವದಲ್ಲಿ ವಸ್ತುನಿಷ್ಠ ವಿಷಯಗಳಿಗಿಂತ ಭಾವನಾತ್ಮಕ ವಿಚಾರಗಳ ಮೇಲೆ ಗಮನಹರಿಸುತ್ತಿದೆ. ಇದರಿಂದ ಪಕ್ಷಕ್ಕೆ ನಷ್ಟವಾಗಬಹುದು ಎಂಬುದಾಗಿ ನಾವು ಭಾವಿಸಿದ್ದೇವೆ ಎಂದು ಈಟಾಲ ಗುಂಪಿನ ನಾಯಕರೊಬ್ಬರು ಹೇಳಿದ್ದಾರೆ.
ಹಿಂದುತ್ವದ ವಿಚಾರಕ್ಕೆ ಒತ್ತು ನೀಡುವ ಮೂಲಕ ತೆಲಂಗಾಣ ಚುನಾವಣೆಯನ್ನು ಗೆಲ್ಲಬಹುದು ಎಂದು ಬಂಡಿ ನಂಬಿದ್ದಾರೆ. ತೆಲಂಗಾಣದಲ್ಲಿ ನಮಗೆ ಕೆಡರ್ ಇಲ್ಲ. ಭ್ರಷ್ಟಾಚಾರ, ಹಣದ ದುರುಪಯೋಗ ಮತ್ತು ನಿರುದ್ಯೋಗದ ಸಮಸ್ಯೆಗಳ ಬಗ್ಗೆ ಮಾತನಾಡದೇ ನಾವು ಗೆಲ್ಲಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಕಿಶನ್ ರೆಡ್ಡಿ ಒಮ್ಮತದ ಆಯ್ಕೆಯಾಗಿದ್ದಾರೆ. ಈಟಾಲಾ ಅವರು ಕಾಂಗ್ರೆಸ್ ಮತ್ತು ಬಿಆರ್ಎಸ್ನಿಂದ ಹೆಚ್ಚಿನ ನಾಯಕರನ್ನು ಬಿಜೆಪಿಗೆ ಕರೆತರುವ ಶಕ್ತಿ ಹೊಂದಿದ್ದಾರೆ. ಅವರಿಗೆ ಮಾನ್ಯತೆ ನೀಡಲಾಗಿದೆ ಎಂದು ಹಿರಿಯ ನಾಯಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಕಿಶನ್ ರೆಡ್ಡಿ ಅವರು 2014 ರಿಂದ 2016 ರ ವರೆಗೆ ತೆಲಂಗಾಣ ರಾಜ್ಯ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.












Click it and Unblock the Notifications