ತೆಹಲ್ಕಾ ತೇಜಪಾಲ್ ಜಾಮೀನು ತೀರ್ಪು ಸಂಜೆಗೆ

ತರುಣ್ ತೇಜಪಾಲ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಇಂದು ಬೆಳಗ್ಗೆ ವಿಚಾರಣೆಗೆ ಕೈಗೆತ್ತಿಕೊಂಡ ಗೋವಾ ಸೆಷನ್ಸ್ ಕೋರ್ಟ್, ದೀರ್ಘ ವಿಚಾರಣೆ ನಡೆಸಿತು. ವಿಚಾರಣೆ ಮುಗಿದು ಸಾಧ್ಯವಾದರೆ ಸಂಜೆ ವೇಳೆಗೆ ತೀರ್ಪು ನೀಡುವುದಾಗಿ ನ್ಯಾಯಾಧೀಶರು ಹೇಳುತ್ತಿದ್ದಂತೆ ಕೋರ್ಟಿನಿಂದ ಹೊರಬಂದ ತೇಜಪಾಲ್ ಖಾಸಗಿ ಕಾರನ್ನೇರಿ ತಮ್ಮ ವಕೀಲರ ಜತೆಗೂಡಿ ತಾವು ಉಳಿದುಕೊಂಡಿರುವ ತಾಜ್ ವಿವಂತಾ ಹೋಟೆಲಿಗೆ ಹೊರಟರು.
ತಾರಕಕ್ಕೇರಿದ್ದ ವಾದ-ಪ್ರತಿವಾದ : ಇಂದು ನಡೆದ ಜಾಮೀನು ಅರ್ಜಿ ವಿಚಾರಣೆಯ ವಾದ-ಪ್ರತಿವಾದ ಒಂದು ಹಂತದಲ್ಲಿ ತಾರಕಕ್ಕೇರಿತ್ತು. 'ತಮ್ಮ ಕಕ್ಷಿದಾರರು ಪ್ರತಿಷ್ಠಿತ ವ್ಯಕ್ತಿಯಾಗಿದ್ದು ಅವರನ್ನು ಬಂಧಿಸಿದರೆ ಬಾರಿ ದೂರಗಾಮಿ ಪರಿಣಾಮಗಳು ಎದುರಾಗುವ ಸಾಧ್ಯತೆಯಿದೆ. ತೇಜಪಾಲ್ ಅವರು ತನಿಖೆಗೆ ಸಹಕರಿಸುತ್ತಿದ್ದಾರೆ. ಅವರು ತನಿಖಾಧಿಕಾರಿಗಳಿಗೆ ತಮ್ಮ ಮೊಬೈಲ್ ನಂಬರ್ ಸಹ ನೀಡಿದ್ದಾರೆ. ಪಾಸ್ ಪೋರ್ಟ್ ಸಹ ಕೋರ್ಟ್ ವಶಕ್ಕೆ ಒಪ್ಪಿಸಲಿದ್ದಾರೆ' ಎಂದು ತೇಜಪಾಲ್ ಪರ ವಕೀಲರು ವಾದ ಮಂಡಿಸಿದ್ದರು.
ಮುಖ್ಯವಾಗಿ 'ನನ್ನ ಕಕ್ಷಿದಾರರನ್ನು ಬಂಧಿಸಬಾರದು. ಅವರು ಮುಂಬೈಗೆ (ಬಾಂಧಿತ ಪತ್ರಕರ್ತೆಯ ವಾಸಸ್ಥಳ) ಹೋಗುವುದಿಲ್ಲ' ಎಂದೆಲ್ಲಾ ವಾದ ಮಂಡಿಸಲಾಯಿತು. ಆದರೆ ಪ್ರಕರಣ ಅತ್ಯಂತ ಗಂಭೀರವಾಗಿದೆ. ಆರೋಪಿ ಪ್ರಭಾವಿ ವ್ಯಕ್ತಿಯಾಗಿದ್ದು, ಆತನನ್ನು ಹೆಚ್ಚಿನ ವಿಚಾರಣೆಗಾಗಿ 14 ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಬೇಕು ಎಂದು ಪ್ರಾಸಿಕ್ಯೂಶನ್ ವಕೀಲರು ಪ್ರತಿವಾದ ಮಂಡಿಸಿದ್ದಾರೆ. ವಾಸ-ಪ್ರತಿವಾದ ಆಲಿಸಿರುವ ನ್ಯಾಯಾಧೀಶರು ಸಂಜೆಗೆ ನೀಡುವ ತೀರ್ಪನ್ನು ಆಧರಿಸಿ ಗೋವಾ ಪೊಲೀಸರು ಮುಂದಿನ ಕಾರ್ಯಾಚರಣೆ ನಡೆಸಲಿದ್ದಾರೆ.
ಶುಕ್ರವಾರ ಸಂಜೆ ಏನಾಯಿತೆಂದರೆ ... ಜಾಮೀನು ಅರ್ಜಿ ವಿಚಾರಣೆ ವೇಳೆ ಲೈಂಗಿಕ ಕಿರುಕುಳಕ್ಕೊಳಗಾದ ಯುವತಿಯ ಹೆಸರು ಪ್ರಕಟಿಸಿದ ತೇಜಪಾಲ್ ಪರ ವಕೀಲೆಯನ್ನು ಪಣಜಿ ನ್ಯಾಯಾಲಯ ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ.
ಗೋವಾ ಪೊಲೀಸರು ದಾಖಲಿಸಿದ ಎಫ್ ಐಆರ್ ಅನ್ನು ನ್ಯಾಯಾಲಯದಲ್ಲಿ ಓದುವಾಗ ಲೈಂಗಿಕ ಕಿರುಕುಳಕ್ಕೊಳಗಾದ ಯುವ ಪತ್ರಕರ್ತೆಯ ಹೆಸರನ್ನೂ ತೇಜಪಾಲ್ ಪರ ವಕೀಲೆ ಗೀತಾ ಲಥುರಾ ಓದಿದರು. ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ ನ್ಯಾಯಾಧೀಶೆ 'ನೀವು ಆಕೆಯ ಹೆಸರು ಕೆಡಿಸಲು ಹೊರಟಿದ್ದೀರ. ನೀವು ಮಾಡಿದ್ದು ಸಣ್ಣ ತಪ್ಪಲ್ಲ'ಎಂದು ತರಾಟೆಗೆ ತೆಗೆದುಕೊಂಡರು. ನಂತರ ಗೀತಾ ತಮ್ಮ ತಪ್ಪಿಗಾಗಿ ನ್ಯಾಯಾಲಯದ ಕ್ಷಮೆ ಕೋರಿದರು.
ಇದೇ ವೇಳೆ, ಪ್ರಕರಣದ ಹಿಂದೆ ರಾಜಕೀಯ ಒತ್ತಡ ಇದೆ ಎನ್ನುವ ತೇಜಪಾಲ್ ಪರ ವಕೀಲರ ವಾದಕ್ಕೂ ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿತು. 'ನ್ಯಾಯಾಲಯಕ್ಕೆ ಅಪರಾಧವಷ್ಟೇ ಮುಖ್ಯವೇ ಹೊರತು ರಾಜಕೀಯ ಹೇಳಿಕೆಗಳಲ್ಲ. ಲೈಂಗಿಕ ಕಿರುಕುಳಕ್ಕೊಳಗಾದ ಯುವತಿ ಏನಾದರೂ ರಾಜಕೀಯ ಹೇಳಿಕೆಗಳನ್ನು ನೀಡಿದ್ದಾರೆಯೇ?' ಎಂದು ನ್ಯಾಯಾಲಯ ಪ್ರಶ್ನಿಸಿತು.
ಅತ್ಯಾಚಾರಕ್ಕೆ ಯತ್ನ ದುರುಳ ಅಪ್ಪನಿಗೆ ಸಜೆ :
ಅಪ್ರಾಪ್ತ ವಯಸ್ಸಿನ ತನ್ನ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಮಧ್ಯವಯಸ್ಕ ವ್ಯಕ್ತಿಯೊಬ್ಬನಿಗೆ ಹೈದರಾಬಾದಿನ ಸ್ಥಳೀಯ ನ್ಯಾಯಾಲಯವೊಂದು ಏಳು ವರ್ಷ ಸಜೆ ವಿಧಿಸಿದೆ. ವೃತ್ತಿಯಲ್ಲಿ ಅಡುಗೆಯವನಾದ ಆರೋಪಿಯು ಕುಡಿದ ಮತ್ತಿನಲ್ಲಿ ಕಳೆದ ವರ್ಷ 21ರಂದು 12 ವರ್ಷದ ತನ್ನ ಮಗಳನ್ನು ನಾರಾಯಣಗುಡದಲ್ಲಿರುವ ಲಾಡ್ಜಿಗೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದ ಎಂದು ಪೊಲೀಸರು ಆರೋಪಿಸಿದ್ದರು.












Click it and Unblock the Notifications