ಉತ್ತರಾಭಿಮುಖಿ ಜಯಾ ಪ್ರಧಾನಿ ಕುರ್ಚಿಯತ್ತ ದಾಪುಗಾಲು
ಚೆನ್ನೈ, ಮಾರ್ಚ್ 4: ಇದು ನಿಜಕ್ಕೂ ಪರಮಾವಧಿಯೇ! ಈಗಾಗಲೇ ದಿಲ್ಲಿ ಗದ್ದುಗೆಯ ಮೇಲೆ ದೃಷ್ಟಿ ನೆಟ್ಟಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ತಾವು ಪ್ರಧಾನಿಯಾಗಿ ಅಲ್ಲಿ ಪ್ರತಿಷ್ಠಾಪಿಸುವ ನಿಟ್ಟಿನಲ್ಲಿ ಸರ್ವ ಕಸರತ್ತು ನಡೆಸುತ್ತಿದ್ದಾರೆ.
ತಾಜಾ ಆಗಿ ಏನಪ್ಪಾ ಅಂದರೆ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಜ್ಯೋತಿಷಿಯೊಬ್ಬರು ವಾಸ್ತು ದೋಷದ ಬಗ್ಗೆ ಅಥವಾ ಅವರ ವಾಸ್ತು ಅಭಿವೃದ್ಧಿ ಬಗ್ಗೆ ಗಮನ ಸೆಳೆದಿದ್ದಾರೆ.

ತಮಿಳುನಾಡಿನ ಸದರಿ ಜ್ಯೋತಿಷಿ 'ಅಮ್ಮಾ, ನೋಡಿ ನೀವು ಹೇಗೂ ದಿಲ್ಲಿಯಲ್ಲಿರುವ ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟಿದ್ದೀರಿ. ಅದು ಇರುವುದು ದೇಶದ ಉತ್ತರ ಭಾಗದಲ್ಲಿ ಹಾಗಾಗಿ ನಿಮ್ಮ ಗಮನವೆಲ್ಲಾ ಉತ್ತರದತ್ತಲೇ ಕೇಂದ್ರೀಕರಿಸಬೇಕು. ನೀವು ಏನೇ ಮಾಡಿದರೂ ಉತ್ತರ ದಿಕ್ಕಿಗೆ ತಿರುಗಿಕೊಂಡು ಮಾಡಿ. ಅದರಲ್ಲೂ ಭಾಷಣ ಮಾಡುವಾಗಲಂತೂ ಉತ್ತರಾಭಿಮುಖವಾಗಿರಿ. ಅದರಿಂದ ದಿಲ್ಲಿಯತ್ತ ನೀವು ಹೆಚ್ಚು ಆಕರ್ಷಿತರಾಗುತ್ತೀರಿ' ಎಂದು ಸಲಹೆ ನೀಡಿಬಿಟ್ಟಿದ್ದಾರೆ.
ಅದು ಕೇಳಿದ್ದೇ ಜಯಮ್ಮ 'ನಾನು ಇನ್ಮೇಲೆ ಉತ್ತರ ದಿಕ್ಕಿನತ್ತ ಮುಖ ಮಾಡಿರುವ ವೇದಿಕೆಯಿಂದ ಮಾತ್ರವೇ ಭಾಷಣ ಮಾಡುವುದು. ಹಾಗಾಗಿ ವೇದಿಕೆಗಳನ್ನು ಉತ್ತರ ದಿಕ್ಕಿಗೆ ತಿರುಗಿಸಿ' ಎಂದು ಫರ್ಮಾನು ಹೊರಡಿಸಿ, ಅಧಿಕಾರಿಗಳು ಮತ್ತು ಪಕ್ಷದ ಕಾರ್ಯಕರ್ತರಿಗೆ ಹೊಸ ಸಂಕಷ್ಟ ತಂದಿಟ್ಟಿದ್ದಾರೆ. ಮೊದಲ ಪ್ರಯತ್ನವಾಗಿ ಕಾಂಚಿಪುರಂನ ಕಾಮರಾಜ್ ಅವೆನ್ಯೂದಲ್ಲಿ ನಿನ್ನೆ ಸೋಮವಾರ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ ಜಯಾ ಉತ್ತರಾಭಿಮುಖವಾಗಿಯೇ ನಿಂತು ಮಾತನಾಡಿದ್ದಾರೆ!
ಅಷ್ಟೇ ಅಲ್ಲ. ಇನ್ನು ಲೋಕಸಭಾ ಚುನಾವಣೆ ಮುಗಿಯುವವರೆಗೂ ಜಯಲಲಿತಾ ಕೇವಲ ಉತ್ತರ ದಿಕ್ಕಿನತ್ತ ಮಾತ್ರವೇ ಮುಖಮಾಡಿ ಭಾಷಣ ಮಾಡುವ ದೃಶ್ಯ ಕಾಣಸಿಗಲಿದೆ! ಮೊದಲ ಹಂತದಲ್ಲಿ 16 ದಿನ ಒಟ್ಟು 19 ಸಮಾವೇಶಗಳನ್ನುದ್ದೇಶಿ ಅಮ್ಮಾ ಜಯಾ ಉತ್ತರಾಭಿಮುಖವಾಗಿ ಅಂದರೆ ಪಿಎಂ ಕುರ್ಚಿಯಿರುವ ಕಡೆಗೆ ತಿರುಗಿಕೊಂಡು ಭಾಷಣ ಮಾಡಲಿದ್ದಾರೆ.
2011ರಲ್ಲಿ ರಾಜ್ಯದಲ್ಲಿ ಮರಳಿ ಅಧಿಕಾರಕ್ಕೆ ಬಂದ ಜಯಾ ವಿಧಾನಸಭೆಯಲ್ಲಿ ಎಲ್ಲರ ಕುರ್ಚಿಗಳನ್ನು ಪೂರ್ವ ದಿಕ್ಕಿಗೆ ತಿರುಗಿಸಿಬಿಟ್ಟರು. ಅದಕ್ಕೂ ವಾಸ್ತು ದೋಷವೇ ಕಾರಣವಾಗಿತ್ತು. ಇನ್ನೂ ಇಂಟರೆಸ್ಟಿಂಗ್ ವಿಷಯವೆಂದರೆ 2001ರಲ್ಲಿ ಜಯಾ ಅರ್ಧಕ್ಕೆ ಕುರ್ಚಯಿಂದ ಇಳಿದಿದ್ದು ಅವರ ವಾಸ್ತು ಪಶ್ಚಿಮ ದಿಕ್ಕಿಗೆ ತಿರುಗಿರಲಿಲ್ಲವಂತೆ. ಹಾಗಂತ ವಾಸ್ತುತಜ್ಞರು ಜಯಾರನ್ನು ನಂಬಿಸಿದ್ದಾರೆ.












Click it and Unblock the Notifications