ಪ್ರಿಯಕರನ ಜೊತೆ ವಧು ಜೂಟ್? ತಮಿಳುನಾಡು ಶಾಸಕನ ಮದುವೆ ರದ್ದು
ಚೆನ್ನೈ, ಸೆ 4: ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ಮದುವೆ ಕ್ಯಾನ್ಸಲ್ ಆದ ಅದೆಷ್ಟೋ ಘಟನೆಗಳಿವೆ. ಇಲ್ಲೊಂದು ಪ್ರೇಮ ಪ್ರಕರಣದಲ್ಲಿ ವಧು, ಮದುವೆಗೆ ಇನ್ನೂ ಎಂಟು ದಿನ ಇರುವಾಗಲೇ, ಪ್ರಿಯಕರನ ಜೊತೆ ಪರಾರಿಯಾಗಿದ್ದಾಳೆ. ಆದರೆ, ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು ಎನ್ನುವಂತೆ, ಎರಡೂ ಕುಟುಂಬದ ಮಾನ ಬೀದಿಗೆ ಬಂದಿದೆ.
ತಮಿಳುನಾಡಿನ ಎಐಡಿಎಂಕೆ ಪಕ್ಷದ, ಭವಾನಿಸಾಗರ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕ ಎಸ್ ಈಶ್ವರನ್ ಅವರ ಮದುವೆ ಇದೇ ತಿಂಗಳ ಹನ್ನೆರಡರಂದು ಈರೋಡ್ ಜಿಲ್ಲೆಯಲ್ಲಿರುವ ಬನ್ನಾರಿ ಅಮ್ಮನ್ ದೇವಾಲಯದಲ್ಲಿ ಅದ್ದೂರಿಯಾಗಿ ನಡೆಸಲು ಎರಡೂ ಕುಟುಂಬಗಳು ತಯಾರಿ ನಡೆಸಿಕೊಂಡಿದ್ದವು. ಹೆಚ್ಚುಕಮ್ಮಿ, ಆಮಂತ್ರಣ ನೀಡುವ ಕೆಲಸವನ್ನೂ ಪೂರೈಸಿದ್ದವು.
ಮುಖ್ಯಮಂತ್ರಿ ಪಳನಿಸ್ವಾಮಿ, ಉಪಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಜೊತೆ ಪಕ್ಷದ ಎಲ್ಲಾ ಘಟಾನುಗಟಿಗಳು ಮದುವೆಗೆ ಹಾಜರಾಗುವುದು ಖಾತ್ರಿಯಾಗಿತ್ತು. ಅದೇನೋ ಅಂತಾರಲ್ಲಾ 'ಮದುವೆ ಸ್ವರ್ಗದಲ್ಲಿ ನಿಗದಿಯಾಗುತ್ತದೆ', ಜೊತೆಗೆ, ಬನ್ನಾರಿ ಅಮ್ಮನ ಚಿತ್ತ ಬೇರೆ ಇತ್ತೋ ಏನೋ, ವಧು ತನ್ನ ಪ್ರಿಯಕರನ ಜೊತೆಗೆ ಊರು ಬಿಟ್ಟಿದ್ದಾಳೆ. ಅಲ್ಲಿಗೆ, ಅದ್ದೂರಿ ಮದುವೆ ರದ್ದಾಗಿದೆ.

43ವರ್ಷದ ಈಶ್ವರನ್ ಮದುವೆ, ಗೋಪಿಚೆಟ್ಟಿಪಾಳ್ಯಂ ನಿವಾಸಿಯಾಗಿರುವ 23ವರ್ಷದ ಸಂಧ್ಯಾ ಎನ್ನುವವರ ಜೊತೆ ಸೆಪ್ಟಂಬರ್ ಹನ್ನೆರಡಕ್ಕೆ ನಿಗದಿಯಾಗಿತ್ತು. ಕಳೆದ ಶನಿವಾರ (ಸೆ 1) ಹನ್ನೊಂದು ಗಂಟೆ ಸುಮಾರಿಗೆ ತನ್ನ ತಾಯಿಗೆ ಸತ್ಯಮಂಗಲಂನಲ್ಲಿರುವ ತನ್ನ ಸಹೋದರಿಯ ಮನೆಗೆ ಹೋಗುತ್ತೇನೆಂದು ಹೇಳಿ ಸಂಧ್ಯಾ ಹೊರಟಿದ್ದಾಳೆ.
ಆದರೆ ಸತ್ಯಮಂಗಲಂ ಕಡೆಗೆ ಹೋಗದೇ ಸಂಧ್ಯಾ, ತನ್ನ ಪ್ರಿಯಕರನ ಜೊತೆ, ಮೊಬೈಲ್ ಸ್ವಿಚ್ ಆಫ್ ಮಾಡಿ ಪರಾರಿಯಾಗಿದ್ದಾಳೆ. ತನ್ನ ಮಗಳು ಸತ್ಯಮಂಗಲಂಗೆ ತಲುಪದೇ ಇದ್ದಾಗ, ವಧುವಿನ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ.
ವಧು ಸಂಧ್ಯಾ ತಾಯಿ ನೀಡಿದ ದೂರಿನ ಪ್ರಕಾರ, ಆಕೆಗೆ ತಿರುಪೂರು ಜಿಲ್ಲೆಯ ವಿಘ್ನೇಶ್ ಎನ್ನುವವನ ಜೊತೆ ಪ್ರೀತಿಯಿತ್ತು. ಕಡತೂರು ಪೊಲೀಸರು ಸಂಧ್ಯಾ ಹುಡುಕಾಟದಲ್ಲೀಗ ತೊಡಗಿದ್ದಾರೆ.
ತಾಜಾ ಮಾಹಿತಿಯ (ಸೆ 5) ಪ್ರಕಾರ ವರ ಈಶ್ವರನ್ ಗೆ ಬೇರೆ ವಧು ಜೊತೆ ಸೆಪ್ಟಂಬರ್ ಹನ್ನೆರಡರಂದೇ ಮದುವೆಯಾಗಲಿದೆ. ಇತ್ತ ಪರಾರಿಯಾಗಿರುವ ಸಂಧ್ಯಾಳನ್ನು ಪತ್ತೆ ಹಚ್ಚುವಲ್ಲಿ ಕಡತೂರು ಪೊಲೀಸರು ಯಶಸ್ವಿಯಾಗಿದ್ದಾರೆ.











Click it and Unblock the Notifications