'ನಮ್ಮ 100 ಶಾಸಕರನ್ನು ತೆಗೆದುಕೊಂಡು ಸಿಎಂ ಆಗಿ'- ಅಖಿಲೇಶ್ 'ಓಪನ್ ಆಫರ್'
ರಾಂಪುರ ಡಿಸೆಂಬರ್ 2: ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಮೌರ್ಯ ಮತ್ತು ಬ್ರಿಜೇಶ್ ಪಾಠಕ್ ಅವರಿಗೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಓಪನ್ ಆಫರ್ ನೀಡಿದ್ದಾರೆ. ಅಖಿಲೇಶ್ ಯಾದವ್ ಹೇಳಿಕೆಯಲ್ಲಿ, "ನಮ್ಮ 100 ಶಾಸಕರನ್ನು ತೆಗೆದುಕೊಳ್ಳಿ ಮತ್ತು ಯುಪಿ ಸಿಎಂ ಆಗಿ" ಎಂದು ಕೇಶವ್ ಮೌರ್ಯ ಮತ್ತು ಬ್ರಿಜೇಶ್ ಪಾಠಕ್ ಅವರಿಗೆ ಹೇಳಿದ್ದಾರೆ.
'ನಾನು ಅವರಿಗೆ ಆಫರ್ ಮಾಡಲು ಬಂದಿದ್ದೇನೆ. ನಮ್ಮಿಂದ 100 ಶಾಸಕರನ್ನು ತೆಗೆದುಕೊಳ್ಳಿ. ನಾವು ನಿಮ್ಮೊಂದಿಗಿದ್ದೇವೆ. ನೀವು ಯಾವಾಗ ಬೇಕಾದರೂ ಸಿಎಂ ಆಗಿ. ಈ ಹಿಂದೆಯೂ ಈ ಆಫರ್ ನೀಡಿದ್ದೆ. ಇಂದು ಮತ್ತೊಮ್ಮೆ ನೀಡುತ್ತಿದ್ದೇನೆ. ನಮ್ಮ 100 ಶಾಸಕರು ನಿಮ್ಮೊಂದಿಗಿರುತ್ತಾರೆ. ನೀವು ಸಿಎಂ ಆಗಿ' ಎಂದು ಅಖಿಲೇಶ್ ಹೇಳಿದ್ದಾರೆ.
#WATCH | There are 2 Deputy CMs in the state... Both of them are looking for an opportunity to become CM. We have come to give them an offer, take 100 MLAs from us, we are with you, become CM whenever you want: Samajwadi Party chief Akhilesh Yadav pic.twitter.com/94WN4WK7cx
— ANI UP/Uttarakhand (@ANINewsUP) December 1, 2022
ರಾಂಪುರ ಕ್ಷೇತ್ರದಲ್ಲಿ ನಡೆಯಲಿರುವ ಉಪಚುನಾವಣೆಯ ಪ್ರಚಾರದ ವೇಳೆ ಅಖಿಲೇಶ್ ಯಾದವ್ ಈ ಹೇಳಿಕೆ ನೀಡಿದ್ದಾರೆ. ಅಜಂ ಖಾನ್ ಮತ್ತು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರು ಡಿಸೆಂಬರ್ 5 ರ ಉಪಚುನಾವಣೆಯಲ್ಲಿ ಸ್ಪರ್ಧಿಸಲಿದ್ದು ಗುರುವಾರ (ಡಿಸೆಂಬರ್ 1) ಅಖಿಲೇಶ್ ಯಾದವ್ ರಾಂಪುರದಲ್ಲಿ ಅಭ್ಯರ್ಥಿಗಳಿಗೆ ಮತ ನೀಡುವಂತೆ ಮನವಿ ಮಾಡಿದರು. ಈ ವೇಳೆ ಮಾತನಾಡಿದ ಅಖಿಲೇಶ್ ಬಿಜೆಪಿಗೆ ಓಪನ್ ಆಫರ್ ಕೊಟ್ಟಿದ್ದಾರೆ.
ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ಹಿರಿಯ ನಾಯಕ ಅಜಂ ಖಾನ್ ಅವರಿಗೆ "ನಕಲಿ ಪ್ರಕರಣಗಳ" ಮೂಲಕ "ಕಿರುಕುಳ" ನೀಡುತ್ತಿದೆ ಎಂದು ಅಖಿಲೇಶ್ ಯಾದವ್ ಅವರು ಆರೋಪಿಸಿದರು. ಅವರು ರಾಜ್ಯವನ್ನು ಮುನ್ನಡೆಸಿದಾಗ, ಪ್ರಸ್ತುತ ಸಿಎಂ (ಯೋಗಿ ಆದಿತ್ಯನಾಥ್) ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವುದನ್ನು ತಪ್ಪಿಸಿದ್ದರು ಎಂದು ಅವರು ಹೇಳಿದ್ದಾರೆ. ಪಕ್ಷದ ಹಿರಿಯ ನಾಯಕ ಅಜಂ ಖಾನ್ ಅವರಿಗೆ ಆಗಿರುವ ಅನ್ಯಾಯದ ವಿರುದ್ಧ ಮತ ಚಲಾಯಿಸುವಂತೆ ಅಖಿಲೇಶ್ ಯಾದವ್ ಜನರಲ್ಲಿ ಮನವಿ ಮಾಡಿದ್ದಾರೆ.
ಅಖಿಲೇಶ್ ಯಾದವ್, "ಸಮಯಕ್ಕಿಂತ ಶಕ್ತಿಶಾಲಿ ಯಾರೂ ಇಲ್ಲ. ನಾನು ಸಿಎಂ ಆಗಿದ್ದಾಗ ಈಗಿನ ಮುಖ್ಯಮಂತ್ರಿ (ಯೋಗಿ ಆದಿತ್ಯನಾಥ್) ಅವರ ಕಡತವನ್ನು ನನ್ನ ಮುಂದಿಟ್ಟಿದ್ದರು. ಆದರೆ ನಾವು ಸಮಾಜವಾದಿಗಳು. ನಾವು ದ್ವೇಷದ ರಾಜಕಾರಣ ಮಾಡುವುದಿಲ್ಲ. ಇತರರಿಗೆ ತೊಂದರೆ ಕೊಡುವುದಿಲ್ಲ ಎಂದು ನಾನು ಅವರಿಗೆ ಹೇಳಲು ಬಯಸುತ್ತೇನೆ. ನಾನು ಸಿಎಂ ಆಗಿದ್ದಾಗ ಅವರ ವಿರುದ್ಧ ನಾವು ಯಾವುದೇ ಪ್ರಕರಣ ದಾಖಲಿಸಿಲ್ಲ'' ಎಂದು ಅಖಿಲೇಶ್ ಹೇಳಿದರು.