ಬಿಜೆಪಿ ಕೈಹಿಡಿದ ಎನ್ ಟಿ ರಾಮರಾವ್ ಪುತ್ರಿ ಪುರಂದರೇಶ್ವರಿ
ಹೈದರಾಬಾದ್, ಮಾರ್ಚ್6-ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಗೆ ಹೈದರಾಬಾದಿನಿಂದ ಸಿಹಿ ಸುದ್ದಿಯೊಂದು ಬಂದಿದೆ. ಮೂರು ವಾರಗಳ ಹಿಂದೆ ಕಾಂಗ್ರೆಸ್ ಪಕ್ಷದಿಂದ ಹೊರಬಂದಿದ್ದ ಕೇಂದ್ರ ಸಚಿವೆ ದಗ್ಗುಬಾಟಿ ಪುರಂದರೇಶ್ವರಿ ಮತ್ತು ಅವರ ಪತಿ ಪ್ರಕಾಶಂ ಜಿಲ್ಲೆಯ ಪರ್ಚೂರು ಶಾಸಕ, ಮಾಜಿ ಸಚಿವ ದಗ್ಗುಬಾಟಿ ವೆಂಕಟೇಶ್ವರ ರಾವುಲು ದಂಪತಿ ಇದೀಗ ಮೋದಿ ಕೈಹಿಡಿದಿದ್ದು, ಇಂದು ಗುರುವಾರ ಬಿಜೆಪಿ ಕೈಹಿಡಿದರು.
ಸೋನಿಯಾ ಗಾಂಧಿಗೆ ಹತ್ತಿರವಾಗಿದ್ದ ಪುರಂದರೇಶ್ವರಿ, ತೆಲಂಗಾಣ ಸ್ಥಾಪನೆಯನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷದಿಂದ ವಿಮುಖಗೊಂಡಿದ್ದರು. ವಿಶಾಖಪಟ್ಟಣಂ ಸಂಸದೆಯಾಗಿರುವ 55 ವರ್ಷದ ದಗ್ಗುಬಾಟಿ ಪುರಂದರೇಶ್ವರಿ ಕಳೆದ ತಿಂಗಳು ಕಾಂಗ್ರೆಸ್ ಪ್ರಾಥಮಿಕ ಸದಸ್ಯಕ್ಕೆ ರಾಜೀನಾಮೆ ನೀಡಿ, ವಾಣಿಜ್ಯ ಮತ್ತು ಕೈಗಾರಿಕೆ ಖಾತೆ ಸಚಿವ ಸ್ಥಾನದಿಂದಲೂ ದೂರವಾಗಿದ್ದರು. ಪುರಂದರೇಶ್ವರಿ, ಈ ಹಿಂದಿನ ಲೋಕಸಭೆಯಲ್ಲಿ ಬಾಪಟ್ಲ ಕ್ಷೇತ್ರದಿಂದ ಆಯ್ಕೆಯಾಗಿ ಬಂದಿದ್ದರು. ಆ ಅವಧಿಯಲ್ಲಿ ಮಾನವ ಸಂಪನ್ಮೂಲ ಖಾತೆಯನ್ನು ನಿಭಾಯಿಸಿದ್ದರು.
ದಗ್ಗುಬಾಟಿ ಪುರಂದರೇಶ್ವರಿ ಅವರು ತೆಲುಗು ದೇಶಂ ಪಕ್ಷದ ಸಂಸ್ಥಾಪಕ, ದಿವಂಗತ ನಂದಮೂರಿ ತಾರಕ ರಾಮಾರಾವ್ ಅವರ ಪುತ್ರಿ. ತೆಲಂಗಾಣ ರಚನೆ ವಿರೋಧಿಸಿ ಸಲ್ಲಿಸಿದ್ದ ರಾಜೀನಾಮೆ ಪತ್ರದಲ್ಲಿ ನೀವು ನಮ್ಮ ಕತ್ತು ಕತ್ತರಿಸಿದ್ದೀರಿ. ತೆಲಂಗಾಣ ದಳ್ಳುರಿಯಲ್ಲಿ ಮಜಾ ಮಾಡುತ್ತಿದ್ದೀರಿ' ಎಂದು ಪುರಂದರೇಶ್ವರಿ ಆಕ್ರೋಶ ವ್ಯಕ್ತಪಡಿಸಿದ್ದರು.
ದಗ್ಗುಬಾಟಿ ಪುರಂದರೇಶ್ವರಿ ಮತ್ತು ದಗ್ಗುಬಾಟಿ ವೆಂಕಟೇಶ್ವರ ರಾವುಲು ದಂಪತಿಯನ್ನು ಪಕ್ಷಕ್ಕೆ ಸ್ವಾಗತಿಸಿರುವ ಬಿಜೆಪಿ, ಇಬ್ಬರಿಗೂ ಪಕ್ಷದ ವತಿಯಿಂದ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡುವುದಾಗಿ ತಿಳಿಸಿದೆ. ಜತೆಗೆ ಆಂಧ್ರ ಪ್ರದೇಶದಲ್ಲಿ ಪುರಂದರೇಶ್ವರಿಗೆ ಬಿಜೆಪಿ ಉದ್ತುವಾರಿಯನ್ನು ಸಹ ನೀಡುವ ಸಾಧ್ಯತೆಯಿದೆ.
ಪುರಂದರೇಶ್ವರಿ ಅವರು ತಮಿಳು, ತೆಲುಗು, ಇಂಗ್ಲಿಷ್, ಹಿಂದಿ ಮತ್ತು ಫ್ರೆಂಚ್ ಭಾಷೆಗಳನ್ನು ಕರತಲಾಮಲಕ ಮಾಡಿಕೊಂಡಿದ್ದಾರೆ. ಗುರು ವೇಮಪತಿ ಚಿನ್ನ ಸತ್ಯಂ ಅವರ ಮಾರ್ಗದರ್ಶನದಲ್ಲಿ ದಶಕಗಳ ಕಾಲ ಕೂಚಿಪುಡಿ ನೃತ್ಯಾಭ್ಯಾಸ ಮಾಡಿದ್ದಾರೆ.