60 ವರ್ಷಗಳಿಂದ ಗುಹೆಯಲ್ಲೇ ವಾಸವಿರುವ ಸ್ವಾಮೀಜಿಯಿಂದ 1 ಕೋಟಿ ದೇಣಿಗೆ
ಹರಿದ್ವಾರ, ಜನವರಿ 29: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಅಭಿಯಾನ ಆರಂಭಗೊಂಡಿದ್ದು, ಹಲವು ಗಣ್ಯರು ದೇಣಿಗೆ ನೀಡುತ್ತಿದ್ದಾರೆ.
ಆದರೆ ರಿಷಿಕೇಶದ ಸ್ವಾಮೀಜಿಯೊಬ್ಬರು ರಾಮಮಂದಿರ ನಿರ್ಮಾಣಕ್ಕೆ ನೀಡಿರುವ ದೇಣಿಗೆ ಎಲ್ಲರ ಹುಬ್ಬೇರುವಂತೆ ಮಾಡಿದೆ. ಅರವತ್ತಕ್ಕೂ ಹೆಚ್ಚು ವರ್ಷಗಳಿಂದ ಗುಹೆಯಲ್ಲೇ ವಾಸಿಸುತ್ತಿರುವ ರಿಷಿಕೇಶದ ಸ್ವಾಮಿ ಶಂಕರ್ ದಾಸ್ ಒಂದು ಕೋಟಿ ರೂಪಾಯಿಯ ಚೆಕ್ ನೀಡಿದ್ದಾರೆ.
ಬುಧವಾರ ಒಂದು ಕೋಟಿ ರೂಪಾಯಿಯ ಚೆಕ್ ಅನ್ನು ಬ್ಯಾಂಕ್ ನಲ್ಲಿ ಒಪ್ಪಿಸಿದ್ದಾರೆ. ಆದರೆ ಗುಹೆಯಲ್ಲಿ ವಾಸಿಸುತ್ತಿರುವ ಸ್ವಾಮೀಜಿ ಬಳಿ ಒಂದು ಕೋಟಿ ರೂಪಾಯಿ ಹೇಗೆ ಬಂತು ಎಂಬುದು ಹಲವರ ಕುತೂಹಲವಾಗಿದ್ದು, ಈ ಬಗ್ಗೆ ವಿವರಣೆ ನೀಡಿರುವ ಸ್ವಾಮೀಜಿ, ತಾವು ವಾಸಿಸುತ್ತಿರುವ ಗುಹೆ ತಮ್ಮ ಗುರು ತಾತ್ ವಾಲೆ ಬಾಬಾ ಅವರದ್ದಾಗಿದ್ದು, ಇದುವರೆಗೂ ಅಲ್ಲಿ ಭಕ್ತಾದಿಗಳು ನೀಡಿದ ಕಾಣಿಕೆ ಮೊತ್ತ ಇದಾಗಿದೆ ಎಂದಿದ್ದಾರೆ.

ಸ್ವಾಮೀಜಿಯೊಬ್ಬರು ಹೀಗೆ ಏಕಾಏಕಿ ಬಂದು ಒಂದು ಕೋಟಿ ರೂಪಾಯಿ ದೇಣಿಗೆ ನೀಡುತ್ತಿದ್ದಂತೆ ಬ್ಯಾಂಕ್ ಸಿಬ್ಬಂದಿ ಗಲಿಬಿಲಿಗೊಂಡಿದ್ದಾರೆ. ಮತ್ತೆ ಸ್ವಾಮೀಜಿ ಖಾತೆ ಪರಿಶೀಲಿಸಿ ಆರ್ ಎಸ್ ಎಸ್ ಕಾರ್ಯಕರ್ತರನ್ನು ಬ್ಯಾಂಕ್ ಗೆ ಕರೆಸಿ ಚೆಕ್ ಹಸ್ತಾಂತರಿಸಿದ್ದಾರೆ.
"ಸ್ವಾಮಿ ಶಂಕರ್ ದಾಸ್ ಅವರು ರಾಮ ಮಂದಿರ ಟ್ರಸ್ಟ್ ಗೆ ಒಂದು ಕೋಟಿ ರೂಪಾಯಿ ದೇಣಿಗೆ ನೀಡುತ್ತಿರುವ ಮಾಹಿತಿ ಬರುತ್ತಿದ್ದಂತೆ ನಾವು ಬ್ಯಾಂಕ್ ಗೆ ಹೋದೆವು. ನಗದನ್ನು ಅವರು ನೇರವಾಗಿ ಕೊಡಲು ಸಾಧ್ಯವಿಲ್ಲ ಎಂದಿದ್ದರಿಂದ ಚೆಕ್ ಮೂಲಕ ಕೊಟ್ಟರು. ಸ್ವಾಮೀಜಿಯವರು ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಕೊಟ್ಟಿರುವುದು ತುಂಬಾ ಸಂತಸ ತಂದಿದೆ. ತಾವು ದೇಣಿಗೆ ನೀಡುತ್ತಿರುವುದು ಯಾರಿಗೂ ತಿಳಿಯದಿರಲಿ ಎಂದು ಸ್ವಾಮೀಜಿ ನಮ್ಮ ಬಳಿ ಕೇಳಿಕೊಂಡಿದ್ದರು. ಆದರೆ ಅವರ ಈ ದೇಣಿಗೆ ಮತ್ತೊಬ್ಬರಿಗೆ ಸ್ಫೂರ್ತಿಯಾಗಲಿ ಎಂಬ ಕಾರಣಕ್ಕೆ ಈ ವಿಷಯ ಹಂಚಿಕೊಳ್ಳಲಾಗಿದೆ." ಎಂದು ರಿಷಿಕೇಶ ಆರ್ ಎಸ್ ಎಸ್ ನ ಸುದಾಮ ಸಿಂಘಾಲ್ ಹೇಳಿದ್ದಾರೆ.
ರಿಷಿಕೇಶದಲ್ಲಿ ಫಕ್ಕದ್ ಬಾಬಾ ಎಂದೇ ಪ್ರಸಿದ್ಧಿಯಾಗಿರುವ ಸ್ವಾಮೀಜಿ, ಭಕ್ತರು ನೀಡುವ ದೇಣಿಗೆಯಲ್ಲಿಯೇ ಜೀವನ ಮಾಡುತ್ತಿದ್ದಾರೆ. ಅಗತ್ಯವಿದ್ದವರಿಗೆ ಅನ್ನದಾನ ಮಾಡುತ್ತಾ, ಜನರ ಪ್ರೀತಿ, ವಿಶ್ವಾಸ ಗಳಿಸಿದ್ದಾರೆ.
ಜನವರಿ 15ರಿಂದ ವಿಶ್ವ ಹಿಂದೂ ಪರಿಷದ್ ರಾಮ ಮಂದಿರ ನಿರ್ಮಾಣಕ್ಕೆ 44 ದಿನಗಳ ದೇಣಿಗೆ ಸಂಗ್ರಹಣಾ ಅಭಿಯಾನ ಆರಂಭಿಸಿದೆ.












Click it and Unblock the Notifications