ಸರ್ಜಿಕಲ್ ಸ್ಟ್ರೈಕ್: ಏನ್ ದೇವೇಗೌಡ್ರೇ ಹೀಗೆ ಹೇಳ್ ಬಿಟ್ರಿ, ತಪ್ಪಲ್ವಾ?
ಚಿಕ್ಕಮಗಳೂರು, ಅ 18: ಸರ್ಜಿಕಲ್ ದಾಳಿ ನಡೆದಿರುವುದು ದೇಶದ ಕೆಲವು ರಾಜಕೀಯ ಪಕ್ಷಗಳಿಗೆ 'ಸಂಶಯದ ರಾಜಕೀಯ'ವಾಗಿದ್ದರೆ, ಜೆಡಿಎಸ್ ವರಿಷ್ಠರಿಗೆ ಇದೊಂದು ಮಹತ್ತರ ಸಾಧನೆ ಅಲ್ಲವಂತೆ.
ನಗರದಲ್ಲಿ ಮಂಗಳವಾರ (ಅ 18) ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ದೇವೇಗೌಡ್ರು, ಪಿಓಕೆ ಭಾಗದಲ್ಲಿ ನಮ್ಮ ಸೇನೆಯವರು ಹೋಗಿ ದಾಳಿ ನಡೆಸಿದ್ದಲ್ಲ, ಹಾಗಾಗಿ ಇದೊಂದು (ಸರ್ಜಿಕಲ್ ದಾಳಿ) ದೊಡ್ಡ ಸಾಧನೆಯಾಗುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಜೆಡಿಎಸ್ ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಕುಮಾರಸ್ವಾಮಿಗೆ ಅವಕಾಶ ಕೊಟ್ಟು ನೋಡೋಣ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆಂದು ಗೌಡ್ರು ಹೇಳಿದ್ದಾರೆ.
ಕೆಲವು ಜಿಲ್ಲೆಗಳಲ್ಲಿ ಜೆಡಿಎಸ್ ಲೆಕ್ಕಕ್ಕಿಲ್ಲ ಎಂದು ಇತರ ಪಕ್ಷಗಳು ನಮ್ಮನ್ನು ಕಡೆಗಣಿಸುತ್ತಿವೆ. ಅವರಿಗೆ ಮುಂದಿನ ಚುನಾವಣೆಯಲ್ಲಿ ನಮ್ಮ ಶಕ್ತಿ ಏನೆಂದು ತೋರಿಸಲಿದ್ದೇವೆ ಎಂದು ದೇವೇಗೌಡ್ರು, ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ದ ತೊಡೆತಟ್ಟಿದ್ದಾರೆ.
ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ, ನಮ್ಮ ಯೋಧರು ದೇಶಕ್ಕಾಗಿ ಹೋರಾಡುತ್ತಿದ್ದಾರೆ. ಕೇಂದ್ರದ ಮೋದಿ ಸರಕಾರ ಇದರ ರಾಜಕೀಯ ಲಾಭ ಪಡೆದುಕೊಳ್ಳಬಾರದೆನ್ನುವ ಕಿವಿಮಾತನ್ನು ಗೌಡ್ರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ. ಮುಂದೆ ಓದಿ..
ಪಿಎಂ ಮೋದಿ ಸ್ಪಷ್ಟ ನುಡಿ
ಸರ್ಜಿಕಲ್ ದಾಳಿಯ ವಿಚಾರದಲ್ಲಿ ಯಾರು ಮಾತನಾಡಬೇಕೋ ಅವರು ಮಾತ್ರ ಮಾತನಾಡಬೇಕು. ಈ ವಿಚಾರದಲ್ಲಿ ಯಾರೂ ಎದೆ ಉಬ್ಬಿಸಿ, ಸರಕಾರದ ಸಾಧನೆಯೆಂದು ಮಾತನಾಡುವಂತಿಲ್ಲ ಎಂದು ಮೋದಿ, ತಮ್ಮ ಸಹದ್ಯೋಗಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದರು.
ಸೀಮಿತ ದಾಳಿ
ಪೂರ್ಣ ಪ್ರಮಾಣದ ಯುದ್ದ ಬೇರೆ, ಸೀಮಿತ ದಾಳಿ ಬೇರೆ. ನಮ್ಮ ದೇಶ ಈಗಾಗಲೇ ಎರಡು ಬಾರಿ ಪೂರ್ಣ ಪ್ರಮಾಣದ ಯುದ್ದ ನಡೆಸಿದೆ. ಸರ್ಜಿಕಲ್ ದಾಳಿಯ ವಿಚಾರದಲ್ಲಿ ಮೋದಿ ಸರಕಾರ ಇದನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು - ದೇವೇಗೌಡ.
ಪಾಕ್ ಆಕ್ರಮಿತ ಕಾಶ್ಮೀರ
ನಮ್ಮ ಯೋಧರು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಗಿ ದಾಳಿ ಮಾಡಿದ್ದಲ್ಲ. ನಮ್ಮ ದೇಶ 1965, 1971ರಲ್ಲಿ ಪಾಕಿಸ್ತಾನದ ವಿರುದ್ದ ಪೂರ್ಣ ಪ್ರಮಾಣದ ಯುದ್ದ ನಡೆಸಿದೆ. ಹಾಗಾಗಿ, ಸರ್ಜಿಕಲ್ ದಾಳಿ ಎನ್ನುವುದು ದೊಡ್ಡ ಸಾಧನೆಯಲ್ಲ - ದೇವೇಗೌಡ.
ಮುಂದಿನ ಅಸೆಂಬ್ಲಿ ಚುನಾವಣೆ
ನಾಲ್ಕು ಟೀಮ್ ಮಾಡಿ ರಾಜ್ಯದ ಎಲ್ಲಾ ಜಿಲ್ಲೆಗೂ ಪ್ರವಾಸ ಮಾಡ್ತೇನೆ. ಎಲ್ಲಿ ಶಕ್ತಿ ಇಲ್ಲವೋ ಅಲ್ಲಿ ಶಕ್ತಿಪ್ರದರ್ಶನ ಮಾಡಿ ತೋರಿಸುತ್ತೇನೆ. ಈ ದೇಶದಲ್ಲಿ ಕಾಂಗ್ರೆಸ್ ಮುಸ್ಲಿಮರಿಗೆ ಏನ್ ಮಾಡಿದೆ ಎನ್ನುವುದನ್ನು ವಿವರಿಸುತ್ತೇನೆಂದು ಗೌಡ್ರು ಚಿಕ್ಕಮಗಳೂರಿನಲ್ಲಿ ಹೇಳಿದ್ದಾರೆ.
ಶ್ರೀನಿವಾಸ್ ಪ್ರಸಾದ್
ನಾನು ಯಾರ ಮನೆಗೂ ಹೋಗಿ, ನನ್ನ ಪಕ್ಷ ಸೇರಿ ಎಂದು ಕೇಳಿಕೊಳ್ಳುವುದಿಲ್ಲ. ಇನ್ನೊಂದು ಪಕ್ಷವನ್ನು ಹಾಳು ಮಾಡಿ ಪಕ್ಷ ಕಟ್ಟುವ ದುರ್ಗತಿ ದೇವೇಗೌಡನಿಗೆ ಬಂದಿಲ್ಲ. ಅವರಾಗಿ ಬಂದರೆ ಸ್ವಾಗತಿಸುತ್ತೇನೆಂದು ಶ್ರೀನಿವಾಸ ಪ್ರಸಾದ್ ರಾಜೀನಾಮೆ ಬಗ್ಗೆ ಗೌಡ್ರು ಪ್ರತಿಕ್ರಿಯಿಸಿದ್ದಾರೆ.