ಶಬರಿಮಲೆಯಲ್ಲಿ ಮಹಿಳೆಯರಿಗೆ ಪ್ರವೇಶ: ಸುಪ್ರೀಂಕೋರ್ಟ್ ತೀರ್ಪು ಯಾರ ಪರ?
ನವದೆಹಲಿ, ಸೆಪ್ಟೆಂಬರ್ 27: ಕೇರಳದ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನದೊಳಗೆ ಮಹಿಳೆಯರಿಗೆ ಪ್ರವೇಶ ನೀಡುವ ಸಂಬಂಧ ಉದ್ಭವಿಸಿರುವ ವಿವಾದದ ಬಗ್ಗೆ ಸುಪ್ರೀಂಕೋರ್ಟ್ ಶುಕ್ರವಾರ (ಸೆ.28) ಮಹತ್ವದ ತೀರ್ಪು ನೀಡಲಿದೆ.
10ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ಆಗಸ್ಟ್ 1ರಂದು ತೀರ್ಪು ಕಾಯ್ದಿರಿಸಿತ್ತು.
ಮಹಿಳೆಯರಿಗೆ ದೇವಸ್ಥಾನದೊಳಗೆ ಪ್ರವೇಶ ನಿರಾಕರಿಸುವುದು ತಾರತಮ್ಯ ಮತ್ತು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆಯೇ ಅಥವಾ 25ನೇ ವಿಧಿಯ ಧಾರ್ಮಿಕ ಸ್ವಾತಂತ್ರ್ಯದ ಆಯ್ಕೆಯಡಿ ಅಗತ್ಯ ಧಾರ್ಮಿಕ ಆಚರಣೆಯಾಗುತ್ತದೆಯೇ ಎಂಬುದನ್ನು ಸುಪ್ರೀಂಕೋರ್ಟ್ ನಿರ್ಧರಿಸಲಿದೆ.

ತೀರ್ಪಿನ ಫಲಿತಾಂಶ ಏನಾಗಬಹುದು?
ದೇವಸ್ಥಾನದೊಳಗೆ ಪ್ರವೇಶ ನಿರಾಕರಿಸುವುದಕ್ಕೆ ಇರುವ ನಿರ್ಬಂಧವನ್ನು ತೆರವುಗೊಳಿಸಿದರೆ ಅದು ಅಯ್ಯಪ್ಪನ ಮಹಿಳಾ ಭಕ್ತರು ಮತ್ತು ಸುದೀರ್ಘ ಕಾಲದಿಂದ ಹೋರಾಟ ನಡೆಸುತ್ತಿರುವ ಸಂಘಟನೆಗಳಿಗೆ ಸಂದ ಜಯವಾಗಲಿದೆ. ಮಹಿಳೆಯರ ಪರವಾಗಿ ತೀರ್ಪು ಹೊರಬಂದರೆ ಹಲವು ದಶಕಗಳ ಸಂಪ್ರದಾಯಕ್ಕೆ ತಿಲಾಂಜಲಿ ಇಟ್ಟು ಪ್ರವೇಶ ನೀಡುವುದು ಅನಿವಾರ್ಯವಾಗಲಿದೆ.
ಇದು ದೇವಸ್ಥಾನದ ಆಡಳಿತ ಮಂಡಳಿ ಮತ್ತು ಭಕ್ತರ ನಡುವೆ ತೀವ್ರ ಗದ್ದಲಕ್ಕೂ ಕಾರಣವಾಗಬಹುದು. ಮಹಿಳೆಯರಿಗೆ ಪ್ರವೇಶ ನೀಡುವುದಕ್ಕೆ ತನ್ನ ವಿರೋಧ ಇಲ್ಲ ಎಂದು ಕೇರಳ ಸರ್ಕಾರ ಕೋರ್ಟ್ಗೆ ತಿಳಿಸಿತ್ತು. ಸರ್ಕಾರದ ವಿರುದ್ಧ ವಿವಿಧ ಸಂಘಟನೆಗಳು, ದೇವಸ್ಥಾನದ ಪ್ರಮುಖರು ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ತೀರ್ಪು ಮಹಿಳೆಯರ ಪರ ಹೊರಬಂದರೆ ಪ್ರತಿಭಟನೆಗಳು ನಡೆಯುವ ಸಾಧ್ಯತೆ ಇದೆ.

ಸಾಂವಿಧಾನಿಕ ಪೀಠ
ಈ ವಿವಾದದ ವಿಚಾರಣೆ ನಡೆಸಲು 2017ರ ಅಕ್ಟೋಬರ್ನಲ್ಲಿ ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ ರಚಿಸಿತ್ತು. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಆರ್ಎಫ್ ನಾರಿಮನ್, ಎಎಂ ಖಾನ್ವಿಲ್ಕರ್, ಡಿವೈ ಚಂದ್ರಚೂಡ ಮತ್ತು ಇಂದೂ ಮಲ್ಹೋತ್ರಾ ಈ ಪೀಠದಲ್ಲಿದ್ದಾರೆ.

2006ರಲ್ಲಿ ಅರ್ಜಿ ವಿಚಾರಣೆ
ಅಯ್ಯಪ್ಪ ದೇವಸ್ಥಾನದೊಳಗೆ ಮಹಿಳೆಯರಿಗೆ ಪ್ರವೇಶ ನೀಡುವುದನ್ನು ದೇವಸ್ಥಾನದ ಆಡಳಿತ ಮಂಡಳಿ ನಿಷೇಧಿಸಿದೆ. ಇದು ಹಲವು ದಶಕಗಳಿಂದ ಜಾರಿಯಲ್ಲಿದೆ. ಈ ನಿಷೇಧವನ್ನು ಪ್ರಶ್ನಿಸಿ ವಿವಿಧ ಸಂಘಟನೆಗಳು ಕಾನೂನು ಹೋರಾಟ ನಡೆಸಿದ್ದವು. ಅದರಲ್ಲಿ ದಿ ಇಂಡಿಯಾ ಯಂಗ್ ಲಾಯರ್ಸ್ ಅಸೋಸಿಯೇಷನ್ 2006ರಲ್ಲಿ ಸಲ್ಲಿಸಿದ್ದ ಅರ್ಜಿ ನನೆಗುದಿಗೆ ಬಿದ್ದಿತ್ತು.
ಈ ಅರ್ಜಿಯನ್ನು ಸುಪ್ರೀಂಕೋರ್ಟ್ 2016ರ ಜನವರಿಯಲ್ಲಿ ಕೈಗೆತ್ತಿಕೊಂಡಿತ್ತು.

ಕಾನೂನಿಗೆ ವಿರುದ್ಧ
ಜುಲೈ 17ರಂದು ಅರ್ಜಿಯ ವಿಚಾರಣೆ ನಡೆಸಿದ್ದ ಸಂವಿಧಾನ ಪೀಠ, ಶಬರಿಮಲೆ ದೇವಸ್ಥಾನದ ಒಳಗೆ ಮಹಿಳೆಯರಿಗೆ ಪ್ರವೇಶ ನಿರಾಕರಿಸುವುದು ಕಾನೂನಿಗೆ ವಿರುದ್ಧ ಎಂದು ಹೇಳಿತ್ತು.
ಯಾವ ಆಧಾರದಲ್ಲಿ ನೀವು ಮಹಿಳೆಯರಿಗೆ ಪ್ರವೇಶ ನಿರಾಕರಿಸಿದ್ದೀರಿ ಎಂದು ದೇವಸ್ಥಾನದ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿತ್ತು. ಇದು ಸಂವಿಧಾನದ ನಿಯಮಗಳಿಗೆ ವಿರುದ್ಧ. ಒಮ್ಮೆ ನೀವು ಸಾರ್ವಜನಿಕರಿಗೆ ಮುಕ್ತಗೊಳಿಸಿದ ಬಳಿಕ ಯಾರು ಬೇಕಾದರೂ ಅದರ ಒಳಗೆ ಹೋಗಬಹುದು ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹೇಳಿದ್ದರು. ಆದರೆ ಈ ಕುರಿತು ತೀರ್ಪು ಪ್ರಕಟಿಸಿರಲಿಲ್ಲ.

ಖಾಸಗಿ ದೇವಸ್ಥಾನ ಪರಿಕಲ್ಪನೆ ಇಲ್ಲ
ಖಾಸಗಿ ದೇವಸ್ಥಾನ ಎಂಬ ಯಾವುದೇ ಪರಿಕಲ್ಪನೆ ಇಲ್ಲ. ಯಾವುದೇ ದೇವಸ್ಥಾನ ಇದ್ದರೂ ಅದು ಸಾರ್ವಜನಿಕ ಸ್ಥಳದಲ್ಲಿ ಇರಬೇಕು ಮತ್ತು ಅದರೊಳಗೆ ಪ್ರವೇಶಿಸಲು ಪ್ರತಿಯೊಬ್ಬರಿಗೂ ಅವಕಾಶ ಇರಬೇಕು. ಪುರುಷರು ಅದರೊಳಗೆ ಹೋಗಬಹುದಾದರೆ, ಮಹಿಳೆಯರು ಸಹ ಹೋಗಬಹುದು ಎಂದು ಪೀಠ ಹೇಳಿತ್ತು.

ಧಾರ್ಮಿಕ ಹಕ್ಕು ದೇವಸ್ಥಾನಕ್ಕಲ್ಲ
ದೇವಸ್ಥಾನದೊಳಗೆ ಪ್ರವೇಶ ನಿರಾಕರಿಸುವ ಮಂಡಳಿ ನಿಯಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೋರ್ಟ್, ದೇವಸ್ಥಾನವು ಧಾರ್ಮಿಕ ಹಕ್ಕನ್ನು ಪ್ರತಿಪಾದಿಸುವಂತಿಲ್ಲ ಎಂದು ಅಭಿಪ್ರಾಯಪಟ್ಟಿತ್ತು.
ಪ್ರತಿ ಮಹಿಳೆ ಕೂಡ ದೇವರ ಸೃಷ್ಟಿ. ಉದ್ಯೋಗದಲ್ಲಾಗಲೀ ಅಥವಾ ಪೂಜೆಯಲ್ಲಾಗಲೀ ಅವರ ವಿರುದ್ಧ ತಾರತಮ್ಯ ಏಕಿರಬೇಕು? ಮಹಿಳೆಯಾಗಿ ನೀವು ಪುರುಷರಂತೆಯೇ ಪೂಜಿಸುವ ಹಕ್ಕನ್ನು ಹೊಂದಿದ್ದೀರಿ. ಇದಕ್ಕೆ ಕಾನೂನಿನ ಬೆಂಬಲ ಪಡೆಯುವ ಅವಶ್ಯಕತೆಯಿಲ್ಲ. ಇದು ಸಂವಿಧಾನದಲ್ಲಿಯೇ ಇದೆ. ಆರ್ಟಿಕಲ್ 25 (1) ರ ಅಡಿ ಕಾನೂನು ಪೂಜಿಸುವ ಹಕ್ಕನ್ನು ಪ್ರತಿಯೊಬ್ಬರಿಗೂ ಸಮಾನವಾಗಿ ನೀಡಿದೆ ಎಂದು ಮಿಶ್ರಾ ಹೇಳಿದ್ದರು.












Click it and Unblock the Notifications