ದೇಶದ್ರೋಹ ಕಾನೂನಿನ ವ್ಯಾಖ್ಯಾನ ಪರಿಶೀಲನೆ ಅಗತ್ಯವಿದೆ; ಸುಪ್ರೀಂ
ನವದೆಹಲಿ, ಮೇ 31; ಮಾಧ್ಯಮಗಳ ಹಕ್ಕು ಮತ್ತು ಪತ್ರಿಕಾ ಸ್ವಂತ್ರತ್ರ್ಯದ ಹಿನ್ನಲೆಯಲ್ಲಿ ದೇಶದ್ರೋಹದ ಕಾನೂನಿನ ವ್ಯಾಖ್ಯಾನವನ್ನು ಪರಿಶೀಲಿಸುವುದಾಗಿ ಸುಪ್ರೀಂಕೋರ್ಟ್ ಸೋಮವಾರ ಹೇಳಿದೆ. ತೆಲಗು ವಾಹಿನಿಗಳಾದ ಟಿವಿ 5 ಮತ್ತು ಆಂಧ್ರಜ್ಯೋತಿ ವಿರುದ್ಧ ಪೂರ್ವಗ್ರಹಪೀಡಿತವಾಗಿ ಕೇಸು ದಾಖಲು ಮಾಡಲಾಗಿದೆಯೇ ಎಂದು ಸಹ ಕೇಳಿದೆ.
ಆಂಧ್ರ ಪ್ರದೇಶ ಪೊಲೀಸರು ವೈಎಸ್ಆರ್ ಕಾಂಗ್ರೆಸ್ ಪಕ್ಷದ ಬಂಡಾಯ ನಾಯಕ, ಸಂಸದ ಕೆ. ಕೆ. ರಘು ರಾಮ ಕೃಷ್ಣ ರಾಜು ಭಾಷಣಗಳನ್ನು ಪ್ರಸಾರ ಮಾಡಿದ 2 ವಾಹಿನಿಗಳ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿದ್ದರು. ಇದನ್ನು ವಾಹಿನಿಗಳು ಸುಪ್ರೀಂನಲ್ಲಿ ಪ್ರಶ್ನೆ ಮಾಡಿವೆ.
ಸೋಮವಾರ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ನೇತೃತ್ವದ ತ್ರಿ ಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಿತು. ಪೀಠದಲ್ಲಿ ನ್ಯಾಯಮೂರ್ತಿ ಎಲ್. ಎನ್. ರಾವ್ ಮತ್ತು ನ್ಯಾಯಮೂರ್ತಿ ಎಸ್. ರವೀಂದ್ರ ಭಟ್ ಇದ್ದರು.

ಐಪಿಸಿಯ 124 ಎ (ದೇಶದ್ರೋಹ) ಮತ್ತು 153 (ವರ್ಗಗಳ ನಡುವೆ ದ್ವೇಷವನ್ನು ಉತ್ತೇಜಿಸುವ) ಕಾನೂನಿನ ವ್ಯಾಖ್ಯಾನ ಅಗತ್ಯವಿದೆ. ಅದರಲ್ಲೂ ವಿಶೇಷವಾಗಿ ಪತ್ರಿಕಾ ಸ್ವತಂತ್ರ್ಯ ಮತ್ತು ಮಾಧ್ಯಮಗಳ ಹಕ್ಕಿನ ವಿಷಯದಲ್ಲಿ ಅತ್ಯಗತ್ಯವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಆಂಧ್ರ ಪ್ರದೇಶದ ಪೊಲೀಸರು ದಾಖಲು ಮಾಡಿರುವ ಎಫ್ಐಆರ್ ಕುರಿತು ಮಾಧ್ಯಮಗಳ ನೌಕರರು ಅಥವಾ ಸಿಬ್ಬಂದಿಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಸೂಚನೆಯನ್ನು ನೀಡಿತು. ನಾಲ್ಕು ವಾರದಲ್ಲಿ ಸರ್ಕಾರ ಮಾಧ್ಯಮಗಳ ವಿರುದ್ಧ ದಾಖಲಿಸಿರುವ ಪ್ರಕರಣಗಳ ಕುರಿತು ಪ್ರತಿಕ್ರಿಯೆ ನೀಡುವಂತೆಯೂ ನಿರ್ದೇಶ ನೀಡಿತು.
ಆಂಧ್ರ ಪ್ರದೇಶದಲ್ಲಿ ಪೊಲೀಸರು ದಾಖಲಿಸಿರುವ ಪ್ರಕರಣ ಅದರಲ್ಲೂ ದೇಶದ್ರೋಹದ ಪ್ರಕರಣದಲ್ಲಿ ದಾಖಲಾದ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಎರಡು ವಾಹಿನಿಗಳು ಸುಪ್ರೀಂಕೋರ್ಟ್ ಮೊರೆ ಹೋಗಿದ್ದವು.
ಹೈದರಾಬಾದ್, ವಿಶಾಖಪಟ್ಟಣಂ ಮತ್ತು ವಿಜಯವಾಡದಲ್ಲಿ ಟಿವಿ 5 ಒಡೆತನವನ್ನು ಹೊಂದಿರುವ ಶ್ರೇಯಾ ಬ್ರಾಡ್ ಕಾಸ್ಟಿಂಗ್ ಪ್ರೈವೇಟ್ ಲಿ. ತನ್ನ ಬ್ಯರೋ ಹೊಂದಿದೆ. ತನ್ನ ಅರ್ಜಿಯಲ್ಲಿ ಎಫ್ಐಆರ್ ದಾಖಲು ಮಾಡುವ ಮೂಲಕ ಸರ್ಕಾರವನ್ನು ಟೀಕಿಸುವ ಹಕ್ಕನ್ನು ಮೌನವಾಗಿಲು ಸರ್ಕಾರ ಹೊರಟಿದೆ ಎಂದು ಉಲ್ಲೇಖಿಸಲಾಗಿತ್ತು.
ದೇಶದ್ರೋಹ ಪ್ರಕರಣದಲ್ಲಿ ಬಂಧಿತರಾಗಿರುವ ಕೆ. ಕೆ. ರಘು ರಾಮ ಕೃಷ್ಣ ರಾಜು ಬಗ್ಗೆ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದ ಕಾರಣಕ್ಕೆ ವಾಹಿನಿಗಳ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಆಂಧ್ರಪ್ರದೇಶದ ಸಿಐಡಿ ಪೊಲೀಸರು ಕೆ. ಕೆ. ರಘು ರಾಮ ಕೃಷ್ಣ ರಾಜು ಬಂಧಿಸಿದ್ದಾರೆ. ಇದೇ ಪ್ರಕರಣದಲ್ಲಿ ಎರಡು ವಾಹಿನಿಗಳು, ಇತರರನ್ನು ಆರೋಪಿಗಳು ಎಂದು ಪೊಲೀಸರು ಉಲ್ಲೇಖಿಸಿದ್ದಾರೆ. ವಾಹಿನಿಗಳ ಸಿಬ್ಬಂದಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಸೂಚನೆ ನೀಡಬೇಕು ಎಂದು ವಾಹಿನಿಗಳು ಸುಪ್ರೀಂಕೋರ್ಟ್ಗೆ ಮನವಿ ಮಾಡಿದ್ದವು.
ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಕೆ. ಕೆ. ರಘು ರಾಮ ಕೃಷ್ಣ ರಾಜುಗೆ ಮೇ 21 ರಂದು ಜಾಮೀನು ಸಿಕ್ಕಿತ್ತು. ಐಪಿಸಿ ಸೆಕ್ಷನ್ 120 ಬಿ, ಸೆಕ್ಷನ್ 124 ಎ (ದೇಶದ್ರೋಹ), 153ಎ (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 505 (ಸಾರ್ವಜನಿಕ ಶಾಂತಿಭಂಗ) ಕಾಯ್ದೆಗಳ ಅಡಿ ಎಫ್ಐಆರ್ ದಾಖಲಾಗಿದೆ.












Click it and Unblock the Notifications