ಗೋವಾದಲ್ಲಿ ಬಿಜೆಪಿ ಸರಕಾರ ರಚನೆ: ಕಾಂಗ್ರೆಸ್ ಹೊಸ ತಂತ್ರ ಕೈಗೂಡುತ್ತಾ?
ಗೋವಾದ ರಾಜ್ಯಪಾಲರು ಬಿಜೆಪಿಯನ್ನು ಸರಕಾರ ರಚಿಸಲು ಆಹ್ವಾನಿಸಿರುವುದನ್ನು ಪ್ರಶ್ನಿಸಿ, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಕಾಂಗ್ರೆಸ್ ಸುಪ್ರೀಂಕೋರ್ಟ್ ಮೊರೆ ಹೋಗಿದೆ. ಸುಪ್ರೀಂ ಅರ್ಜಿಯ ವಿಚಾರಣೆಯನ್ನು ಮಂಗಳವಾರ (ಮಾ 14) ಬೆಳಗ್ಗೆ ನಡೆಸಲಿದೆ
ನವದೆಹಲಿ, ಮಾ 13: ಗೋವಾದ ರಾಜ್ಯಪಾಲರು ಬಿಜೆಪಿಯನ್ನು ಸರಕಾರ ರಚಿಸಲು ಆಹ್ವಾನಿಸಿರುವುದನ್ನು ಪ್ರಶ್ನಿಸಿ, ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಕಾಂಗ್ರೆಸ್ ಈಗ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದೆ.
ಗೋವಾ ರಾಜ್ಯಪಾಲೆ ಮೃದುಲಾ ಸಿಂಹಾ, ಬಿಜೆಪಿ ನೀಡಿದ್ದ ಲಿಖಿತ ಬಹುಮತದ ಪಟ್ಟಿಯನ್ನು ಆಧರಿಸಿ ಸರಕಾರ ರಚಿಸುವಂತೆ ಆಹ್ವಾನ ನೀಡಿದ್ದರು.
ಅದರಂತೆ, ಕೇಂದ್ರ ರಕ್ಷಣಾ ಸಚಿವ ಮನೋಹರ್ ಪಾರಿಕ್ಕಾರ್ ಮಂಗಳವಾರ (ಮಾ 14) ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಸಿದ್ದತೆ ನಡೆಸಿದ್ದರು.
ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಕಾಂಗ್ರೆಸ್ ಪಕ್ಷವನ್ನು ಸರಕಾರ ರಚಿಸಲು ಆಹ್ವಾನಿಸದೇ ಇರುವುದನ್ನು ಪ್ರಶ್ನಿಸಿರುವ ಕಾಂಗ್ರೆಸ್, ಈ ಸಂಬಂಧ ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಿ, ಅರ್ಜಿಯ ತುರ್ತು ವಿಚಾರಣೆ ನಡೆಸುವಂತೆ ಕೋರಿದೆ.
ಕಾಂಗ್ರೆಸ್ ಮನವಿಗೆ ಸ್ಪಂಧಿಸಿರುವ ಜೆ ಎಸ್ ಖೇರ್ ನೇತೃತ್ವದ ಸುಪ್ರೀಂಕೋರ್ಟ್ ನ್ಯಾಯಪೀಠ, ಹೋಳಿ ರಜೆಯ ಹೊರತಾಗಿಯೂ ಮಂಗಳವಾರ ಬೆಳಗ್ಗೆ ಅರ್ಜಿಯ ವಿಚಾರಣೆ ನಡೆಸಲು ಒಪ್ಪಿಕೊಳ್ಳುವ ಮೂಲಕ, ಸಿಎಂ ಆಗಿ ಮನೋಹರ್ ಪಾರಿಕ್ಕಾರ್ ಪ್ರಮಾಣವಚನ ಸ್ವೀಕರಿಸುವುದು ಈಗ ಅನಿಶ್ಚಿತತೆಯಲ್ಲಿದೆ.
ಗೋವಾದ ಕಾಂಗ್ರೆಸ್ ಚುನಾಯಿತ ಅಭ್ಯರ್ಥಿ ಚಂದ್ರಕಾಂತ್ ಕಾವ್ಲೇಕರ್ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಪುರಸ್ಕರಿಸಿರುವ ಸುಪ್ರೀಂ, ಮಂಗಳವಾರ ಏನು ತನ್ನ ತೀರ್ಪನ್ನು ಪ್ರಕಟಿಸಲಿದೆ ಎನ್ನುವುದು ಈಗ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಈ ಹಿಂದೆ ರಾಮೇಶ್ವರ್ ಪ್ರಸಾದ್ ನೀಡಿದ್ದ ತೀರ್ಪಿನ ಅನ್ವಯ, ರಾಜ್ಯಪಾಲರು ಅತಿದೊಡ್ಡ ಪಕ್ಷವನ್ನು ಸರಕಾರ ರಚಿಸಲು ಆಹ್ವಾನಿಸಬೇಕಿತ್ತು. ಸಾಕಿರಾ ಆಯೋಗ ಕೂಡಾ ಇದನ್ನೇ ಹೇಳಿತ್ತು ಎಂದು ಕಾಂಗ್ರೆಸ್ ತನ್ನ ಅರ್ಜಿಯಲ್ಲಿ ರಾಜ್ಯಪಾಲರ ನಿರ್ಧಾರವನ್ನು ಪ್ರಶ್ನಿಸಿದೆ.