ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಟಲಿ ನಾವಿಕರಿಂದ ಮೀನುಗಾರರ ಹತ್ಯೆ: ಪ್ರಕರಣ ಅಂತ್ಯಗೊಳಿಸಲು ಮುಂದಾದ ಕೇಂದ್ರ

|
Google Oneindia Kannada News

ನವದೆಹಲಿ, ಏಪ್ರಿಲ್ 7: ಕೇರಳದ ಕರಾವಳಿಯಲ್ಲಿ 2012ರ ಫೆಬ್ರವರಿಯಲ್ಲಿ ಇಬ್ಬರು ಭಾರತೀಯ ಮೀನುಗಾರರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಆರೋಪ ಎದುರಿಸುತ್ತಿರುವ ಇಟಲಿಯ ಇಬ್ಬರು ನಾವಿಕರ ವಿರುದ್ಧದ ಪ್ರಕರಣವನ್ನು ಅಂತ್ಯಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಸಂಬಂಧ ಕೇಂದ್ರ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಏ. 9ರಂದು ನಡೆಸಲು ಸುಪ್ರೀಂಕೋರ್ಟ್‌ ಒಪ್ಪಿಕೊಂಡಿದೆ.

ತಾನು ಸಂತ್ರಸ್ತರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿದ್ದು, ಅವರಿಗೆ ಸೂಕ್ತ ಪರಿಹಾರವನ್ನು ಪಾವತಿಸಲಾಗಿದೆ ಎಂದು ಕೇಂದ್ರ ತಿಳಿಸಿದೆ. ಇಟಲಿಯ ನಾವಿಕರನ್ನು ರಕ್ಷಿಸಲು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಆಗಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರು ಆಗ ಟೀಕಾಪ್ರಹಾರ ನಡೆಸಿದ್ದರು. ಆದರೆ ಈಗ ಸ್ವತಃ ಅಧಿಕಾರದಲ್ಲಿರುವ ಬಿಜೆಪಿಯೇ ಪ್ರಕರಣವನ್ನು ಮುಚ್ಚಿಬಿಡಲು ಮುಂದಾಗಿದ್ದು, ಟೀಕೆಗೆ ಒಳಗಾಗಿದೆ.

ಕೇರಳ ಮೀನುಗಾರರ ಕೊಲೆ ಪ್ರಕರಣ: ಇಟಾಲಿಯನ್ ಅಧಿಕಾರಿಗಳಿಗೆ ರಿಲೀಫ್?ಕೇರಳ ಮೀನುಗಾರರ ಕೊಲೆ ಪ್ರಕರಣ: ಇಟಾಲಿಯನ್ ಅಧಿಕಾರಿಗಳಿಗೆ ರಿಲೀಫ್?

ಕೇಂದ್ರದ ಅರ್ಜಿಯನ್ನು ಬೇಗನೆ ವಿಚಾರಣೆಗೆ ಪರಿಗಣಿಸಬೇಕು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೋರಿದ್ದರು. ಕಳೆದ ವಿಚಾರಣೆಯ ವೇಳೆ ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡುವಂತೆ ಕೋರ್ಟ್ ಸೂಚನೆ ನೀಡಿತ್ತು. ಅವರನ್ನು ಸಂಪರ್ಕಿಸಿದ್ದು, ಬಾಕಿ ಪರಿಹಾರವನ್ನು ಪಾವತಿಸಲಾಗಿದೆ. ಅವರು ಇಲ್ಲಿ ಹಾಜರಿದ್ದಾರೆ ಕೂಡ ಎಂದು ಬುಧವಾರ ನಡೆದ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೋಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎಎಸ್ ಬೋಪಣ್ಣ ಹಾಗೂ ವಿ. ರಾಮಸುಬ್ರಮಣಿಯನ್ ಅವರನ್ನು ಒಳಗೊಂಡ ನ್ಯಾಯಪೀಠಕ್ಕೆ ತುಷಾರ್ ಮೆಹ್ತಾ ತಿಳಿಸಿದರು.

 Supreme Court To Hear Centres Plea Seeking Closure Of Cases Against Italian Marines

ಈ ಪ್ರಕರಣವು ಭಾರತ ಸರ್ಕಾರ ಮತ್ತು ಇಟಲಿ ಸರ್ಕಾರದ ನಡುವೆ ಇರುವುದರಿಂದ ಇದರ ತುರ್ತು ವಿಚಾರಣೆ ನಡೆಯಬೇಕಿದೆ. ಹೀಗಾಗಿ ಶುಕ್ರವಾರವೇ ವಿಚಾರಣೆ ನಡೆಸುವಂತೆ ತುಷಾರ್ ಮೆಹ್ತಾ ಅವರು ನ್ಯಾಯಪೀಠವನ್ನು ಕೋರಿದರು. ಇದಕ್ಕೆ ಪೀಠ ಸಮ್ಮತಿಸಿತು.

ಸಂತ್ರಸ್ತರ ಕುಟುಂಬದವರಿಗೆ ಸೂಕ್ತ ಪ್ರಮಾಣದಲ್ಲಿ ಪರಿಹಾರ ಒದಗಿಸಬೇಕು. ಅವರ ಹೇಳಿಕೆಗಳನ್ನು ಆಲಿಸದೆ ಈ ಪ್ರಕರಣವನ್ನು ಮುಕ್ತಾಯಗೊಳಿಸುವ ಅರ್ಜಿಯ ಕುರಿತು ಯಾವುದೇ ಆದೇಶ ಹೊರಡಿಸುವುದಿಲ್ಲ ಎಂದು ಕಳೆದ ವರ್ಷದ ಆಗಸ್ಟ್ 7ರಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿತ್ತು.

ಇಟಲಿಯ ನಾವಿಕರ ಪ್ರಕರಣವನ್ನು ಮುಕ್ತಾಯಗೊಳಿಸುವ ತನ್ನ ಅರ್ಜಿಯ ವಿರುದ್ಧ ಸಂತ್ರಸ್ತರ ಕುಟುಂಬದ ಸದಸ್ಯರನ್ನು ಎದುರಾಳಿಗಳನ್ನಾಗಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿತ್ತು. ನಾವಿರಕನ್ನು ತನ್ನ ನೆಲದ ಕಾನೂನಿಗೆ ಅನುಗುಣವಾಗಿ ವಿಚಾರಣೆಗೆ ಒಳಪಡಿಸಲಾಗುವುದು ಮತ್ತು ಸಂತ್ರಸ್ತರ ಕುಟುಂಬದವರಿಗೆ ಗರಿಷ್ಠ ಪರಿಹಾರ ನೀಡಲಾಗುವುದು ಎಂದು ಇಟಲಿ ಸರ್ಕಾರವು ಭಾರತ ಸರ್ಕಾರಕ್ಕೆ ಭರವಸೆ ನೀಡಿದೆ ಎಂದು ಕೇಂದ್ರ ತಿಳಿಸಿತ್ತು.

ಈ ನಾವಿಕರನ್ನು ವಿಚಾರಣೆಗೆ ಒಳಪಡಿಸಲು ಇಟಲಿ ತೆಗೆದುಕೊಂಡ ಕ್ರಮಗಳು ಶ್ಲಾಘನಾರ್ಹ ಎಂದಿದ್ದ ನ್ಯಾಯಾಲಯ, ಸಂತ್ರಸ್ತರ ಕುಟುಂಬದವರಿಗೆ ಸೂಕ್ತ ಪರಿಹಾರ ಒದಗಿಸುವ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು.

ವಿಶೇಷ ನ್ಯಾಯಾಲಯದಲ್ಲಿ ನಾವಿಕರ ವಿರುದ್ಧದ ಪ್ರಕರಣ ಬಾಕಿ ಇದೆ. ಈ ಪ್ರಕರಣದ ವಿಚಾರಣೆಯನ್ನು ಹಿಂದಕ್ಕೆ ಪಡೆದುಕೊಳ್ಳಲು ಅರ್ಜಿ ಸಲ್ಲಿಸದೆಯೇ ಪ್ರಕರಣವನ್ನು ಅಂತ್ಯಗೊಳಿಸುವಂತೆ ತನ್ನನ್ನು ಸಂಪರ್ಕಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿತ್ತು.

2012ರ ಫೆಬ್ರವರಿಯಲ್ಲಿ ಇಟಲಿಯ ತೈಲ ಟ್ಯಾಂಕರ್ ಎಂವಿ ಎನ್ರಿಕಾ ಲೆಕ್ಸಿಯಲ್ಲಿ ಬಂದಿದ್ದ ಇಟಲಿಯ ನಾವಿಕರಾದ ಸಾಲ್ವಟೊರ್ ಗಿರೊನ್ ಮತ್ತು ಮಾಸ್ಸಿಮಿಲಿಯಾನೊ ಲಾಟೊರ್ರೆ, ಭಾರತದ ಪ್ರತ್ಯೇಕ ಆರ್ಥಿಕ ವಲಯದಲ್ಲಿ (ಇಇಝೆಡ್) ದೋಣಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಇಬ್ಬರು ಮೀನುಗಾರರನ್ನು ಹತ್ಯೆ ಮಾಡಿದ್ದರು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಒಳಗಾಗಿತ್ತು.

ಸಾಲ್ವೊಟೊರ್ ಗಿರೋನ್ 2014ರ ಆಗಸ್ಟ್ 31ರಂದು ಬ್ರೈನ್ ಸ್ಟ್ರೋಕ್‌ಗೆ ಒಳಗಾಗಿದ್ದರು. ಹೀಗಾಗಿ ಅವರಿಗೆ ಜಾಮೀನು ನೀಡಿ ಇಟಲಿಗೆ ತೆರಳಲು ಅವಕಾಶ ನೀಡಲಾಗಿತ್ತು. ಇಟಲಿಯಲ್ಲಿ ಅವರು ಹೃದಯ ಚಿಕಿತ್ಸೆಗೆ ಕೂಡ ಒಳಗಾಗಿದ್ದರು. 2016ರ ಮೇ 26ರಂದು ಮಾಸ್ಸಿಮಿಲಿಯಾನೊ ಲಾಟೊರ್ರೆಗೆ ಜಾಮೀನು ನೀಡಿದ್ದ ನ್ಯಾಯಾಲಯ, ಅವರನ್ನೂ ಇಟಲಿಗೆ ಮರಳಲು ಅವಕಾಶ ನೀಡಿತ್ತು.

'ಇಟಲಿಯ ನಾವಿಕರು ನಮ್ಮ ಮೀನುಗಾರರನ್ನು ಕರುಣೆಯಿಲ್ಲದೆ ಕೊಲೆ ಮಾಡಿದ್ದಾರೆ. ಮೇಡಂ (ಸೋನಿಯಾ ಗಾಂಧಿ) ದೇಶಭಕ್ತರಾಗಿದ್ದರೆ ಈ ನಾವಿಕರನ್ನು ಯಾವ ಜೈಲಿನಲ್ಲಿ ಇರಿಸಲಾಗಿದೆ ಎಂಬುದನ್ನು ನಮಗೆ ತಿಳಿಸಬಲ್ಲರೇ?' ಎಂದು 2014ರ ಮಾರ್ಚ್ ತಿಂಗಳಲ್ಲಿ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಅನ್ನು ಈಗ ಹಂಚಿಕೊಳ್ಳುತ್ತಿರುವ ಬಿಜೆಪಿ ವಿರೋಧಿಗಳು, ಈಗಿನ ಸರ್ಕಾರದ ನಡೆಯನ್ನು ಪ್ರಶ್ನಿಸಿದ್ದಾರೆ.

English summary
Supreme Court will hear on April 9 Centre's plea seeking closure of cases against Italian marines accused of killing two Indian fishermen in 2012.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X