ಸಕಲ ಹಿಂದೂ ಸಮಾಜ ಸಭೆಯ ವಿಡಿಯೋ ಚಿತ್ರಿಕರಿಸಲು 'ಸುಪ್ರೀಂ' ನಿರ್ದೇಶನ: ದ್ವೇಷದ ಭಾಷಣ ತಡೆಯಲು ಪೊಲೀಸರಿಗೆ ಸೂಚನೆ
ಫೆಬ್ರವರಿ 5 ರಂದು ನಡೆಯಲಿರುವ ಸಕಲ ಹಿಂದೂ ಸಮಾಜದ ಸಭೆಯಲ್ಲಿ ಯಾವುದೇ ದ್ವೇಷದ ಭಾಷಣಗಳು ನಡೆಯದಂತೆ ನೋಡಿಕೊಳ್ಳಲು ಪೊಲೀಸರಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ನವದೆಹಲಿ, ಫೆಬ್ರವರಿ 03: ಫೆಬ್ರವರಿ 5 ರಂದು ನಡೆಯಲಿರುವ ಸಕಲ ಹಿಂದೂ ಸಮಾಜದ ಸಭೆಯಲ್ಲಿ ಯಾವುದೇ ದ್ವೇಷದ ಭಾಷಣಗಳು ನಡೆಯದಂತೆ ನೋಡಿಕೊಳ್ಳಲು ಪೊಲೀಸರಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಸಭೆಯನ್ನು ಚಿತ್ರಿಕರಿಸಲು ಮಹಾರಾಷ್ಟ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಫೆಬ್ರವರಿ 3 ರಂದು ಆದೇಶಿಸಿದೆ.
'ಯಾರೂ ಯಾವುದೇ ದ್ವೇಷದ ಭಾಷಣವನ್ನು ಮಾಡಬಾರದು. ಕಾನೂನನ್ನು ಧಿಕ್ಕರಿಸಿ ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರಬಾರದು' ಎಂಬ ಷರತ್ತಿನ ಮೇಲೆ ಮಾತ್ರ ಅನುಮತಿ ನೀಡಲಾಗುವುದು ಎಂದು ನ್ಯಾಯಾಲಯವು ರಾಜ್ಯ ಸರ್ಕಾರದಿಂದ ವಾಗ್ದಾನವನ್ನು ತೆಗೆದುಕೊಂಡಿದೆ.
BBC ಸಾಕ್ಷ್ಯಚಿತ್ರಕ್ಕೆ ನಿರ್ಬಂಧ: ಕೇಂದ್ರಕ್ಕೆ ಸುಪ್ರೀಂ ನೋಟೀಸ್
'Livelaw' ಪ್ರಕಾರ, ಈ ವಿಚಾರಣೆಯು ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಅವರ ದ್ವಿಸದಸ್ಯ ಪೀಠದ ಮುಂದೆ ಬಂದಿತು. ಮುಂಬರುವ ಸಭೆಯನ್ನು ನಿಷೇಧಿಸುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದಾಗಿತ್ತು. ಜೋಸೆಫ್ ಮತ್ತು ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಅವರು ಈ ವಿಚಾರಣೆಯನ್ನು ಕೈಗೆತ್ತಿಕೊಂಡಿದರು. ಜನವರಿ 29 ರಂದು ಮುಂಬೈನಲ್ಲಿ ಇದೇ ಹಿಂದುತ್ವ ಸಂಘಟನೆ ನಡೆಸಿದ ಕಾರ್ಯಕ್ರಮವನ್ನು ಉಲ್ಲೇಖಿಸಿ ಅರ್ಜಿದಾರರಾದ ಶಾಹೀನ್ ಅಬ್ದುಲ್ಲಾ, ಸಂಘಟಕರು ಮುಸ್ಲಿಂ ವಿರೋಧಿ ದ್ವೇಷ ಭಾಷಣಗಳನ್ನು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಮುಂಬರುವ ಕಾರ್ಯಕ್ರಮಕ್ಕೆ ಅನುಮತಿ ನೀಡಿದರೆ ಮತ್ತೊಮ್ಮೆ ದ್ವೇಷದ ಭಾಷಣಗಳಿಗೆ ಕಾರಣವಾಗುತ್ತದೆ ಎಂದು ಅವರ ಅರ್ಜಿಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್, ಸೆಕ್ಷನ್ 151 ರ ಪ್ರಕಾರ, ಸಂಘಟಕರ ವಿರುದ್ಧ ಪ್ರಕರಣವನ್ನು ದಾಖಲಿಸಲು ಸೂಚಿಸಬೇಕೆಂದು ನ್ಯಾಯಾಲಯವನ್ನು ಒತ್ತಾಯಿಸಿದರು. ಯಾವುದೇ ಅಪರಾಧವನ್ನು ತಡೆಗಟ್ಟಲು ಸಲುವಾಗಿ ವ್ಯಕ್ತಿಗಳನ್ನು ಬಂಧಿಸಲು ಪೊಲೀಸರಿಗೆ ಅಧಿಕಾರ ಈ ಸೆಕ್ಷನ್ ನೀಡುತ್ತದೆ. ಮಹಾರಾಷ್ಟ್ರದ ಪರ ವಕೀಲರು, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಅರ್ಜಿದಾರರ ಮನವಿಯನ್ನು ವಿರೋಧಿಸಿದರು.
ಈ ಹಂತದಲ್ಲಿ, ನ್ಯಾಯಾಲಯವು, 'ಸೆಕ್ಷನ್ 151 ರ ಅಡಿಯಲ್ಲಿ ಆದೇಶವನ್ನು ಅನ್ವಯಿಸುವುದು ಸಂಬಂಧಪಟ್ಟ ಅಧಿಕಾರಿಗಳ ಕರ್ತವ್ಯವಾಗಿರುತ್ತದೆ' ಎಂದು ಹೇಳಿತು.
ಈ ಘಟನೆಯನ್ನು ವಿಡಿಯೋದಲ್ಲಿ ರೆಕಾರ್ಡ್ ಮಾಡಬೇಕು ಮತ್ತು ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಬೇಕು ಎಂಬ ಸಿಬಲ್ ಮನವಿಯನ್ನು ನ್ಯಾಯಾಲಯ ಒಪ್ಪಿದೆ. ಕಾರ್ಯಕ್ರಮ ನಡೆಯುವ ಪ್ರದೇಶದ ಸ್ಥಳೀಯ ಪೊಲೀಸ್ ನಿರೀಕ್ಷಕರಿಗೆ ಈ ಬಗ್ಗೆ ನಿರ್ದೇಶನ ನೀಡಲಾಗಿದೆ.
ಜನವರಿ 29 ರ ಘಟನೆಯ ಬಗ್ಗೆ ಅರ್ಜಿದಾರರು ಮಾಡಿರುವ ಆರೋಪಗಳ ಕುರಿತು ರಾಜ್ಯ ಸರ್ಕಾರದಿಂದ ಮಾಹಿತಿ ಪಡೆಯಲು ಸಾಲಿಸಿಟರ್ ಜನರಲ್ ಮೆಹ್ತಾ ಅವರಿಗೆ ನ್ಯಾಯಾಲಯ ಸೂಚನೆ ನೀಡಿತು.
ಅರ್ಜಿದಾರರು ಕೇರಳದವರು ಎಂಬುದಕ್ಕೆ ಮೆಹ್ತಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಕಾರ್ಯಕ್ರಮವನ್ನು ನಿಷೇಧಿಸುವಂತೆ ಕೋರುವುದರ ಹಿಂದಿನ ಉದ್ದೇಶವನ್ನು ಪ್ರಶ್ನಿಸಿದ್ದಾರೆ. ಅರ್ಜಿದಾರರ ಪ್ರಕಾರ, ಭಾಷಣಕಾರರು ಮುಸ್ಲಿಮರ ಸಾಮಾಜಿಕ ಮತ್ತು ಆರ್ಥಿಕ ಬಹಿಷ್ಕಾರಕ್ಕೆ ಕರೆ ನೀಡಿದ್ದರು.
ಸಿಬಲ್ ಅವರ ವಾದವನ್ನು ಸರ್ಕಾರದ ವಕೀಲರು ವಿರೋಧಿಸಿದರು. 'ಅರ್ಜಿದಾರರು ಭಾಷಣ ಪೂರ್ವ ಸೆನ್ಸಾರ್ಶಿಪ್ಗೆ ಮಾತ್ರವಲ್ಲದೆ ಭಾಷಣದ ಪೂರ್ವ ಬಂಧನವನ್ನೂ ಬಯಸುತ್ತಿದ್ದಾರೆ' ಎಂದು ಮೆಹ್ತಾ ಹೇಳಿದರು, ಸೆಕ್ಷನ್ 151 ಅನ್ನು ಅನ್ವಯಿಸುವ ತಾರ್ಕಿಕತೆಯನ್ನು ಪ್ರಶ್ನಿಸಿದರು.
ಭಾಷಣಕ್ಕೂ ಪೂರ್ವ ನಿರ್ಧಾರಕ್ಕೆ ಬರುವುದುಸರಿಯಲ್ಲ ಎಂದು ಹೇಳಿದ ಮೆಹ್ತಾ, ಸಭೆಯನ್ನು ವೀಡಿಯೊಗ್ರಾಫ್ ಮಾಡುವ ನ್ಯಾಯಾಲಯದ ನಿರ್ಧಾರವನ್ನು ಒಪ್ಪಿಕೊಂಡರು.