ಕ್ರಿಮಿನಲ್ ಆರೋಪಿ ಅಭ್ಯರ್ಥಿಗಳ ಅನರ್ಹತೆ: ಸಂಸತ್ತಿಗೆ ಹೊಣೆ ಹೊರಿಸಿದ ಸುಪ್ರೀಂಕೋರ್ಟ್
ನವದೆಹಲಿ, ಸೆಪ್ಟೆಂಬರ್ 25: ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರುವ ರಾಜಕಾರಣಿಗಳು ಚುನಾವಣೆಗೆ ಸ್ಪರ್ಧಿಸುವುದರ ವಿರುದ್ಧ ತಾನು ನಿರ್ಬಂಧ ವಿಧಿಸಲು ಸಾಧ್ಯವಿಲ್ಲ. ಅವರ ಅನರ್ಹತೆಗೆ ಸಂಬಂಧಿಸಿದಂತೆ ಸಂಸತ್ ಕಾನೂನು ರೂಪಿಸಬೇಕು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
'ಸುಪ್ರೀಂ ಕೋರ್ಟ್ 'ನರಭಕ್ಷಕ ಹುಲಿಯಲ್ಲ', ಸರಕಾರಗಳು ಹೆದರಬಾರದು'
ಅಭ್ಯರ್ಥಿಗಳ ವಿರುದ್ಧದ ಚಾರ್ಜ್ಶೀಟ್ ಆಧಾರದಲ್ಲಿ ಅವರನ್ನು ಚುನಾವಣೆಗೆ ಸ್ಪರ್ಧಿಸುವುದರಿಂದ ಅನರ್ಹಗೊಳಿಸಲು ಸುಪ್ರೀಂಕೋರ್ಟ್ಗೆ ಸಾಧ್ಯವಿಲ್ಲ. ಅನರ್ಹಗೊಳಿಸುವುದು ಇದಕ್ಕೆ ಮಾನದಂಡವಾಗಲಾರದು ಎಂದು ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ನೇತೃತ್ವದ ನ್ಯಾಯಪೀಠ ತೀರ್ಪಿನಲ್ಲಿ ಹೇಳಿದೆ.
ಮತದಾರರಿಗೆ ಕ್ರಿಮಿನಲ್ ಅಭ್ಯರ್ಥಿಗಳ ಬಗ್ಗೆ ರಾಜಕೀಯ ಪಕ್ಷಗಳೇ ಮಾಹಿತಿ ನೀಡಬೇಕು. ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಜನರಿಗೆ ತಿಳಿವಳಿಕೆ ಮೂಡಿಸಬೇಕು. ಜನರೇ ಕ್ರಿಮಿನಲ್ ಆರೋಪಿ ರಾಜಕಾರಣಿಗಳ ಹಣೆಬರಹ ನಿರ್ಧರಿಸಬೇಕು. ಈ ಸಂಬಂಧ ಸಂಸತ್ನಲ್ಲಿ ಕಾನೂನು ರೂಪಿಸುವುದು ಸರ್ಕಾರದ ಜವಾಬ್ದಾರಿ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಭ್ರಷ್ಟಾಚಾರ ಎನ್ನುವುದು ರಾಷ್ಟ್ರೀಯ ಭಯೋತ್ಪಾದನೆ. ಅಭ್ಯರ್ಥಿಗಳು ತಮ್ಮ ಮೇಲಿರುವ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿಕೊಳ್ಳಬೇಕು ಎಂದು ಅದು ತೀರ್ಪಿನಲ್ಲಿ ತಿಳಿಸಿದೆ.
ಸಿಜೆಐ ದೀಪಕ್ ಮಿಶ್ರಾ ತೀರ್ಪು ನೀಡಲಿರುವ 7 ಪ್ರಮುಖ ಪ್ರಕರಣಗಳು
ಕ್ರಿಮಿನಲ್ ಪ್ರರಕಣ ಎದುರಿಸುತ್ತಿರುವ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸದಂತೆ ಅವರನ್ನು ಅನರ್ಹಗೊಳಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಐವರು ನ್ಯಾಯಮೂರ್ತಿಗಳ ನ್ಯಾಯಪೀಠ ವಿಚಾರಣೆ ನಡೆಸಿತ್ತು.
ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಹೇಳಿದ ಅಂಶಗಳು
* ತನ್ನ ವಿರುದ್ಧ ಬಾಕಿ ಉಳಿದಿರುವ ಕ್ರಿಮಿನಲ್ ಪ್ರಕರಣಗಳ ಕುರಿತು ಪಕ್ಷಕ್ಕೆ ಅಭ್ಯರ್ಥಿ ಮಾಹಿತಿ ನೀಡಬೇಕು.
* ರಾಜಕೀಯ ಪಕ್ಷಗಳು ಕ್ರಿಮಿನಲ್ ಆರೋಪಿ ಅಭ್ಯರ್ಥಿಗಳ ವಿವರವನ್ನು ವೆಬ್ಸೈಟ್ನಲ್ಲಿ ಪ್ರಕಟಿಸಬೇಕು.
* ಅಭ್ಯರ್ಥಿಗಳ ಪೂರ್ವಾಪರಗಳ ಬಗ್ಗೆ ರಾಜಕೀಯ ಪಕ್ಷಗಳು ವ್ಯಾಪಕ ಪ್ರಚಾರ ನೀಡಬೇಕು. ಇದನ್ನು ನಾಮಪತ್ರ ಭರ್ತಿ ಮಾಡಿದ ಬಳಿಕ ಕನಿಷ್ಠ ಮೂರು ಬಾರಿಯಾದರೂ ಮಾಡಬೇಕು.
* ಅಪರಾಧ ಪ್ರಕರಣ ಎದುರಿಸುತ್ತಿರುವ ವ್ಯಕ್ತಿಗಳು ರಾಜಕೀಯಕ್ಕೆ ಬಾರದಂತೆ ತಡೆಯಲು ಸಂಸತ್ ಸೂಕ್ತ ಕಾನೂನು ರೂಪಿಸಲೇಬೇಕಾದ ಕಾಲ ಬಂದಿದೆ.
* ರಾಜಕಾರಣಿಗಳ ಮೇಲೆ ಸುಳ್ಳು ಪ್ರಕರಣಗಳನ್ನು ಹೂಡಲಾಗುತ್ತದೆ ಎನ್ನುವುದು ಸತ್ಯ. ಆದರೆ, ಅದಕ್ಕೆ ಅನುಗುಣವಾಗಿ ಸಂಸತ್ ಕಾನೂನು ರೂಪಿಸಬೇಕು.
* ರಾಜಕೀಯದಲ್ಲಿ ಶುದ್ಧತೆಯ ಸಂಸ್ಕೃತಿ ಬೆಳೆಸಲು ಆಡಳಿತ ವರ್ಗ ಕಾನೂನು ಮತ್ತು ಈ ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸಬೇಕು.
* ಉತ್ತಮ ಜನರಿಂದ ಆಡಳಿತಕ್ಕೆ ಒಳಪಡುವುದು ಸಮಾಜದ ಹಕ್ಕು. ಹೀಗಾಗಿ ಅಪರಾಧ ಪ್ರಕರಣ ಹೊಂದಿರುವವರನ್ನು ದೂರವೇ ಇರಿಸಬೇಕು.