ಯಾವುದೇ ಭೂಮಿಯನ್ನು ಹೆದ್ದಾರಿಯೆಂದು ಘೋಷಿಸುವ ಅಧಿಕಾರ ಕೇಂದ್ರಕ್ಕಿದೆ: ಸುಪ್ರೀಂಕೋರ್ಟ್
ನವದೆಹಲಿ, ಡಿಸೆಂಬರ್ 8: ಒಂದು ಪ್ರದೇಶದ ಜನರ ಪ್ರಗತಿಗಾಗಿ ಯಾವುದೇ ಭೂಮಿಯನ್ನು ಹೆದ್ದಾರಿಯೆಂದು ಅಥವಾ ಹೊಸ ಹೆದ್ದಾರಿ ನಿರ್ಮಾಣ ಮಾಡುವ ಭೂಮಿ ಎಂದು ಅಧಿಸೂಚನೆ ಹೊರಡಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
10 ಸಾವಿರ ಕೋಟಿ ರೂ ವೆಚ್ಚದ ಎಂಟು ಮಾರ್ಗಗಳ ಚೆನ್ನೈ-ಸೇಲಂ ಹಸಿರು ಕಾರಿಡಾರ್ ಯೋಜನೆಗೆ ಮಂಗಳವಾರ ಹಸಿರು ನಿಶಾನೆ ತೋರಿಸಿರುವ ಸುಪ್ರೀಂಕೋರ್ಟ್, ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೆದ್ದಾರಿ ನಿರ್ಮಾಣಕ್ಕಾಗಿ ಭೂ ಸ್ವಾಧೀನ ಪ್ರಕ್ರಿಯೆ ಮುಂದುವರಿಸಲು ಅನುಮತಿ ನೀಡಿದೆ. ಹೆದ್ದಾರಿ ಯೋಜನೆಗೆ ತಮ್ಮ ಭೂಮಿಗಳನ್ನು ಸ್ವಾಧೀನಪಡಿಸಿಕೊಳ್ಳುವುದರ ವಿರುದ್ಧ ಭೂಮಾಲೀಕರು ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ನೂತನ ಸಂಸತ್ ಭವನ ಕಟ್ಟಡ: ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ತರಾಟೆ
ಪ್ರಸ್ತುತ ಇರುವ ರಸ್ತೆ ಅಥವಾ ಹೆದ್ದಾರಿಯಲ್ಲದೆ ಹೊಸದಾಗಿ ಹೆದ್ದಾರಿ ನಿರ್ಮಿಸಲು ಯಾವುದೇ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಸಲುವಾಗಿ ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಅಧಿಕಾರವಿದೆ ಎಂದಿರುವ ನ್ಯಾಯಮೂರ್ತಿಗಳಾದ ಎಂ.ಎಂ. ಖಾನ್ವಿಲ್ಕರ್, ಬಿಆರ್ ಗವಾಯಿ ಮತ್ತು ಕೃಷ್ಣ ಮುರಾರಿ ಅವರನ್ನು ಒಳಗೊಂಡ ನ್ಯಾಯಪೀಠ, ಹೆದ್ದಾರಿ ನಿರ್ಮಾಣಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆಗೆ ಹೊರಡಿಸಲಾಗಿದ್ದ ಅಧಿಸೂಚನೆಯನ್ನು ರದ್ದುಪಡಿಸಿದ್ದ ಮದ್ರಾಸ್ ಹೈಕೋರ್ಟ್ನ 2019ರ ಆದೇಶವನ್ನು ರದ್ದುಗೊಳಿಸಿದೆ.
1956ರ ರಾಷ್ಟ್ರೀಯ ಹೆದ್ದಾರಿ ಕಾಯ್ದೆ ಅನ್ವಯ, ಯೋಜನೆಗೂ ಮುನ್ನ ಪರಿಸರ ಇಲಾಖೆಯಿಂದ ಅನುಮತಿ ಪಡೆಯುವ ಅಗತ್ಯವಿಲ್ಲ. ಹಾಗಿದ್ದರೂ ಭೂಸ್ವಾಧೀನ ಪ್ರಕ್ರಿಯೆ ಜತೆಗೆ ಪರಿಸರ ಇಲಾಖೆಗೆ ಕೂಡ ನಿರಾಕ್ಷೇಪಣಾ ಅರ್ಜಿ ಸಲ್ಲಿಸುವಂತೆ ಹೆದ್ದಾರಿ ಪ್ರಾಧಿಕಾರಕ್ಕೆ ಪೀಠ ಸೂಚಿಸಿದೆ.
'ಹೆದ್ದಾರಿ ಹಾದುಹೋಗುವ ಪ್ರದೇಶದ ಜನರ ಉನ್ನತಿಗಾಗಿ ಮತ್ತು ಹೊಸ ಆರ್ಥಿಕ ಅವಕಾಶಗಳನ್ನು ರೂಪಿಸುವುದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಯಾವುದೇ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸುವ ಅಧಿಕಾರವಿದೆ. ರಾಜ್ಯವೊಂದರ ಹೆದ್ದಾರಿಯು ಸುಸ್ಥಿರ ಅಭಿವೃದ್ಧಿಗೆ ಹಾದಿಯಾಗುತ್ತದೆ. ಇದರಿಂದ ಜನರಿಗೂ ಅನುಕೂಲವಾಗಲಿದೆ' ಎಂದು ಸುಪ್ರೀಂಕೋರ್ಟ್ ಹೇಳಿದೆ.