ಮುಂದಿನ ಆದೇಶದವರೆಗೂ ದೇಶದ್ರೋಹ ಕಾಯ್ದೆಗೆ ಸುಪ್ರೀಂ ತಡೆ
ನವದೆಹಲಿ, ಮೇ 11: ಕೇಂದ್ರ ಸರಕಾರ ದೇಶದ್ರೋಹ ಪ್ರಕರಣದ (Sedition Law) ಪುನರ್ಪರಿಶೀಲನೆಗೆ ಒಪ್ಪಿಕೊಂಡ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಬುಧವಾರ ದೇಶಾದ್ಯಂತ ಈ ಪ್ರಕರಣಗಳಿಗೆ ತಡೆ ನೀಡಿದೆ. ನ್ಯಾಯಾಲಯದಿಂದ ಮುಂದಿನ ಆದೇಶ ಬರುವವರೆಗೂ ಐಪಿಸಿಯ ಸೆಕ್ಷನ್ 124A ಅಡಿಯಲ್ಲಿ ಯಾವುದೇ ಹೊಸ ಪ್ರಕರಣಗಳನ್ನು ದಾಖಲಿಸಬಾರದು ಎಂದು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಆದೇಶ ಮಾಡಿದೆ. ಹಾಗೆಯೇ, ಈಗ ಹಾಲಿ ಇರುವ ದೇಶದ್ರೋಹ ಪ್ರಕರಣಗಳಿಗೂ ಸರ್ವೋಚ್ಚ ನ್ಯಾಯಾಲಯ ತಡೆ ನೀಡಿದೆ.
ದೇಶದ್ರೋಹ ಕಾನೂನಿನ ಅವಶ್ಯಕತೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ಬುಧವಾರ ಮಧ್ಯಂತರ ಆದೇಶದಲ್ಲಿ ಈ ಪ್ರಕರಣಗಳಿಗೆ ತಾತ್ಕಾಲಿಕವಾಗಿ ತಡೆ ನೀಡಿದೆ. "ಈ ಕಾಯ್ದೆಯ ಅಂಶವನ್ನು ತಡೆಯಲ್ಲಿಡುವುದು ಸೂಕ್ತ" ಎಂದು ಸುಪ್ರೀಂ ನ್ಯಾಯಪೀಠ ತಿಳಿಸಿದೆ.
ಜೈಲಿನಲ್ಲಿದ್ದವರಿಗೆ ನಿರಾಳ: ದೇಶದ್ರೋಹ ಕಾನೂನು ಇರುವ ಐಪಿಸಿ ಸೆಕ್ಷನ್ 124-A ಅಡಿ ಬಂಧಿತರಾಗಿರುವ ವ್ಯಕ್ತಿಗಳಿಗೆ ಸುಪ್ರೀಂ ಕೋರ್ಟ್ ಆದೇಶ ನಿರಾಳತೆ ತಂದಿದೆ. ಇವರು ಜಾಮೀನಿಗಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಕೋರ್ಟ್ ಹೇಳಿದೆ.

ಇದೇ ವೇಳೆ, ಕೇಂದ್ರ ಸರಕಾರ ವಿವಾದಿತ ದೇಶದ್ರೋಹ ಕಾಯ್ದೆಯಲ್ಲಿ ಮಾರ್ಪಾಡು ತರಲು ಒಪ್ಪಿಕೊಂಡು ಕೋರ್ಟ್ಗೆ ಪ್ರಮಾಣ ಪತ್ರ ಸಲ್ಲಿಸಿತ್ತು. ಜೊತೆಗೆ, ತಾನು ತಿದ್ದುಪಡಿ ಕಾನೂನು ತರುವವರೆಗೂ ಹಾಲಿ ದೇಶದ್ರೋಹ ಕಾಯ್ದೆ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಮುಂದೂಡುವಂತೆಯೂ ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ಅಂದರೆ, ಈಗ ಚಾಲ್ತಿಯಲ್ಲಿರುವ ಕಾನೂನು ಸದ್ಯಕ್ಕೆ ಮುಂದುವರಿದುಕೊಂಡು ಹೋಗಲಿ ಎಂಬುದು ಸರಕಾರದ ನಿಲುವು.

ಸರಕಾರದ ಈ ಮನವಿಯನ್ನು ಅರ್ಜಿದಾರರ ಪರ ವಕೀಲರು ಬಲವಾಗಿ ವಿರೋಧಿಸಿದರು. ಈಗಿರುವ ದೇಶದ್ರೋಹ ಪ್ರಕರಣಗಳನ್ನು ಮುಂದುವರಿಸಿದಂತೆ ತಡೆ ನೀಡಬೇಕೆಂದು ಹಿರಿಯ ವಕೀಲ ಕಪಿಲ್ ಸಿಬಲ್ ಕೇಳಿಕೊಂಡರು. ಅರ್ಜಿದಾರರ ವಾದ ಪುರಸ್ಕರಿಸಿದ ಸರ್ವೋಚ್ಚ ನ್ಯಾಯಾಲಯ, ಯಾವುದೇ ಹೊಸ ದೇಶದ್ರೋಹ ಪ್ರಕರಣ ದಾಖಲು ಮಾಡುವಂತಿಲ್ಲ, ಹಾಲಿ ಪ್ರಕರಣಗಳನ್ನು ಮುಂದುವರಿಸುವಂತಿಲ್ಲ ಎಂದು ಆದೇಶ ಮಾಡಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications