Hijab Verdict: ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ನಿಷೇಧ; ಅ.13 ರಂದು ಸುಪ್ರೀಂ ಕೋರ್ಟ್ ತೀರ್ಪು
ನವದೆಹಲಿ, ಅ.12: ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಕೆಲವು ಮುಸ್ಲಿಂ ವಿದ್ಯಾರ್ಥಿನಿಯರು ಧರಿಸುವ ಹಿಜಾಬ್ ಮೇಲಿನ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಬಹು ನಿರೀಕ್ಷಿತ ತೀರ್ಪನ್ನು ಸುಪ್ರೀಂ ಕೋರ್ಟ್ ಗುರುವಾರ ಅ.13ರಂದು ನೀಡುವ ನಿರೀಕ್ಷೆಯಿದೆ.
ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರ ಪೀಠವು 10 ದಿನಗಳ ವಾದಗಳನ್ನು ಆಲಿಸಿದ ನಂತರ ಸೆಪ್ಟೆಂಬರ್ 22 ರಂದು ತೀರ್ಪನ್ನು ಕಾಯ್ದಿರಿಸಿತ್ತು.
ಕರ್ನಾಟಕ ಹಿಜಾಬ್ ವಿವಾದ; ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್
ರಾಜ್ಯ ಸರ್ಕಾರ ಶಾಲಾ- ಕಾಲೇಜುಗಳಲ್ಲಿ ಹಿಜಾಬ್ ಮೇಲೆ ನಿಷೇಧ ಹೇರಿದ್ದು, ನಿಷೇಧವನ್ನು ತೆಗೆದುಹಾಕಲು ನಿರಾಕರಿಸಿದ ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ಹಲವಾರು ಅರ್ಜಿಗಳನ್ನು ಸುಪ್ರೀಂ ಕೋಟ್್ನಲ್ಲಿ ಸಲ್ಲಿಸಲಾಗಿತ್ತು. ಅರ್ಜಿಗಲ ವಿಚಾರನೆ ನಡೆಸಿದ್ದ ನ್ಯಾಯಪೀಠ ತೀರ್ಪನ್ನು ಕಾಯ್ದಿರಿಸಿತ್ತು.
ಪೀಠದ ನೇತೃತ್ವದ ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರು ಭಾನುವಾರ ನಿವೃತ್ತರಾಗಲಿರುವ ಕಾರಣ ಈ ವಾರ ಈ ಅರ್ಜಿಗಳ ತೀರ್ಪು ನಿರೀಕ್ಷಿಸಲಾಗಿದೆ.
ಗುರುವಾರ ಹಿಜಾಬ್ ನಿಷೇಧದ ತೀರ್ಪು ಸಾಧ್ಯತೆ
ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ಸಮಯದಲ್ಲಿ, ಅರ್ಜಿದಾರರ ಪರ ಹಾಜರಾದ ವಕೀಲರು, ಮುಸ್ಲಿಂ ಹುಡುಗಿಯರು ತರಗತಿಗೆ ಹಿಜಾಬ್ ಧರಿಸುವುದನ್ನು ತಡೆಯುವುದರಿಂದ ಅವರ ಶಿಕ್ಷಣಕ್ಕೆ ತೊಂದರೆಯಾಗುತ್ತದೆ ಎಂದು ವಾದಿಸಿದ್ದರು. ಜೊತೆಗೆ ಈ ಕ್ರಮವು ಅವರು ತರಗತಿಗಳಿಗೆ ಹಾಜರಾಗುವುದನ್ನು ನಿಲ್ಲಿಸಬಹುದು ಎಂದು ಒತ್ತಿ ಹೇಳಿದ್ದರು.
ಸುಪ್ರೀಂ ಕೋರ್ಟ್ನಲ್ಲಿ ಮುಸ್ಲಿಂ ಅರ್ಜಿದಾರರನ್ನು ಪ್ರತಿನಿಧಿಸುವ ಹಿರಿಯ ವಕೀಲ ದುಷ್ಯಂತ್ ದಾವೆ, "ನಂಬಿಗಸ್ತರಿಗೆ ಇದು (ಹಿಜಾಬ್) ಅತ್ಯಗತ್ಯ. ನಂಬಿಕೆಯಿಲ್ಲದವರಿಗೆ ಇದು ಅನಿವಾರ್ಯವಲ್ಲ" ಎಂದಿದ್ದರು.
ಒಂದು ಸಮುದಾಯವನ್ನು ಗುರಿಯಾಗುಸಲಾಗುತ್ತಿದೆ; ಆರೋಪ
ಶಾಲೆಗಳು ಮತ್ತು ಕಾಲೇಜುಗಳಲ್ಲಿ ಸಮಾನತೆ, ಸಮಗ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ ಬಟ್ಟೆಗಳನ್ನು ಧರಿಸುವುದನ್ನು ನಿಷೇಧಿಸಿದ್ದ ರಾಜ್ಯ ಸರ್ಕಾರದ ಫೆಬ್ರುವರಿ 5, 2022 ರ ಆದೇಶ ಹೊರಡಿಸಿತ್ತು. ಸರ್ಕಾರದ ಆದೇಶಕ್ಕೂ ಮುನ್ನ ರಾಜ್ಯದ ಹಲವು ಕಾಲೇಜುಗಳಲ್ಲಿ ಘರ್ಷಣೆಗಳು ನಡೆದಿದ್ದವು, ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದಾದರೇ ನಾವು ಕೇಸರಿ ಶಾಲು ಧರಿಸುವುದಾಗಿ ಹಲವು ಹಿಂದೂ ವಿದ್ಯಾರ್ಥಿಗಳು ಗಲಾಟೆ ನಡೆಸಿದ್ದರು.
ವಿಚಾರಣೆ ವೇಳೆ ವಕೀಲರು ವಿವಿಧ ಅಂಶಗಳನ್ನು ಎತ್ತಿದ್ದ. ಹಿಜಾಬ್ ಅನ್ನು ಹಿಂದೂಗಳು ಧರಿಸುವ ದುಪ್ಪಟ್ಟ ಅಥವಾ ಬಿಂದಿಗೆ ಮತ್ತು ಸಿಖ್ಖರ ಪೇಟಕ್ಕೆ ಹೋಲಿಸಿದ್ದರು.
ಕರ್ನಾಟಕ ಸರ್ಕಾರದ ಆದೇಶ ಧರ್ಮ ತಟಸ್ಥವಾಗಿದೆ!
ಕೆಲವು ವಕೀಲರು ಈ ವಿಷಯವನ್ನು ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠಕ್ಕೆ ಉಲ್ಲೇಖಿಸಬೇಕು ಎಂದು ವಾದಿಸಿದ್ದರು. ಈ ವೇಳೆ ವಿವಾದ ಹುಟ್ಟುಹಾಕಿರುವ ಕರ್ನಾಟಕ ಸರ್ಕಾರದ ಆದೇಶ ಧರ್ಮ ತಟಸ್ಥವಾಗಿದೆ ಎಂದು ರಾಜ್ಯದ ಪರ ಹಾಜರಾದ ವಕೀಲರು ವಾದಿಸಿದ್ದರು.
ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದನ್ನು ಬೆಂಬಲಿಸುವ ಆಂದೋಲನವು ಕೆಲವು ವ್ಯಕ್ತಿಗಳ ಸರಳ ಕೃತ್ಯವಲ್ಲ ಎಂದು ವಾದಿಸಿದ್ದ ರಾಜ್ಯದ ವಕೀಲರು, ಸರ್ಕಾರವು ಒಂದು ವೇಳೆ ಹಾಗೆ ನಡೆದುಕೊಂಡಿಲ್ಲದಿದ್ದರೇ, ಸಾಂವಿಧಾನಿಕ ಕರ್ತವ್ಯದ ಲೋಪ ಉಂಟಾಗುತ್ತಿತ್ತು ಎಂದು ಸುಪ್ರೀಂ ಕೋರ್ಟ್ನಲ್ಲಿ ವಾದಿಸಿದ್ದರು.
ಹಿಜಾಬ್ ಅಗತ್ಯ ಧಾರ್ಮಿಕ ಆಚರಣೆಯ ಭಾಗವಲ್ಲ -ಹೈಕೋರ್ಟ್
ಮಾರ್ಚ್ 15 ರಂದು, ಉಡುಪಿಯ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರ ಒಂದು ವಿಭಾಗವು ತರಗತಿಯೊಳಗೆ ಹಿಜಾಬ್ ಧರಿಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಇಸ್ಲಾಮಿಕ್ ನಂಬಿಕೆ ಪ್ರಕಾರ ಇದು ಅಗತ್ಯ ಧಾರ್ಮಿಕ ಆಚರಣೆಯ ಭಾಗವಲ್ಲ ಎಂದು ತೀರ್ಪು ನೀಡಿತ್ತು.
ಫೆಬ್ರವರಿ 5, 2022 ರ ರಾಜ್ಯ ಸರ್ಕಾರದ ಆದೇಶವನ್ನು ಕೆಲವು ಮುಸ್ಲಿಂ ಹುಡುಗಿಯರು ಹೈಕೋರ್ಟ್ನಲ್ಲಿ ಪ್ರಶ್ನಿಸಿದರು. ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ.