ಪದ್ಮಾವತಿ ಬಿಡುಗಡೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರಿಂ
ನವದೆಹಲಿ, ನವೆಂಬರ್ 10: ಭಾರೀ ಸದ್ದು ಮಾಡುತ್ತಿರುವ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಸಿನಿಮಾ ಬಿಡುಗಡೆಗೆ ತಡೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರಿಂ ಕೋರ್ಟ್ ತಿರಸ್ಕರಿಸಿದೆ.
ಅರ್ಜಿ ತಿರಸ್ಕರಿಸಿದ ಸುಪ್ರಿಂ ಕೋರ್ಟ್, ಇನ್ನೂ ಸೆನ್ಸಾರ್ ಮಂಡಳಿ ಪದ್ಮಾವತಿಗೆ ಪ್ರಮಾಣಪತ್ರ ನೀಡಿಲ್ಲ. ಸೆನ್ಸಾರ್ ಮಂಡಳಿ ಒಂದು ಸ್ವತಂತ್ರ ಸಂಸ್ಥೆಯಾಗಿದ್ದು ಅವರ ಪರಿಮಿತಿಯೊಳಗೆ ಸುಪ್ರಿಂ ಕೋರ್ಟ್ ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿದೆ.
ದೀಪಿಕಾ ಪಡುಕೋಣೆ ಅಭಿನಯದ ಈ ಚಿತ್ರದಲ್ಲಿ ಇತಿಹಾಸವನ್ನು ತಿರುಚಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.

ಜತೆಗೆ ಈ ಹಿಂದೆ, ಗುಜರಾತಿನಲ್ಲಿ ವಿಧಾನಸಭೆ ಚುನಾವಣೆ ಮುಗಿಯುವ ತನಕ ಪದ್ಮಾವತಿ ಚಿತ್ರದ ಪ್ರದರ್ಶನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಬಿಜೆಪಿ ಮನವಿ ಮಾಡಿತ್ತು. ಕೇಂದ್ರ ಮುಖ್ಯ ಚುನಾವಣಾಧಿಕಾರಿಗಳಿಗೆ ಈ ಬಗ್ಗೆ ಪತ್ರ ಬರೆದಿದ್ದು, ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುವುದಕ್ಕೂ ಮುನ್ನ ರಜಪೂತ ಸಮುದಾಯದ ಪ್ರತಿನಿಧಿಗಳ ಮುಂದೆ ಚಿತ್ರ ಪ್ರದರ್ಶನಕ್ಕೆ ಅನುವು ಮಾಡಿಕೊಡುವಂತೆ ಕೋರಲಾಗಿತ್ತು.
ರಜಪೂತರು, ಕ್ಷತ್ರೀಯ ಸಮುದಾಯದವರು ಈ ಚಿತ್ರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇತಿಹಾಸವನ್ನು ತಿರುಚಲಾಗಿದ್ದು, ರಾಣಿ ಪದ್ಮಾವತಿಯ ಬಗ್ಗೆ ಆಕ್ಷೇಪಾರ್ಹ ಸನ್ನಿವೇಶಗಳಿವೆ. ಅಲ್ಲಾದ್ದೀನ್ ಖಿಲ್ಜಿಯನ್ನು ಪದ್ಮಾವತಿ ಒಮ್ಮೆ ಕೂಡಾ ಭೇಟಿ ಮಾಡಿರಲಿಲ್ಲ. ಹೀಗಿದ್ದೂ ಚಿತ್ರದಲ್ಲಿ ಈ ಬಗ್ಗೆ ದೃಶ್ಯಗಳಿವೆ. ಸಮುದಾಯದ ಭಾವನೆಗೆ ಧಕ್ಕೆ ಉಂಟಾಗುವ ದೃಶ್ಯಗಳಿಗೆ ಕಡಿವಾಣ ಬಿದ್ದಿಲ್ಲ. ಹೀಗಾಗಿ, ಚಿತ್ರಮಂದಿರಗಳಲ್ಲಿ ಬಿಡುಗಡೆಗೂ ಮುನ್ನ ಸಮುದಾಯದವರ ಮುಂದೆ ಪ್ರದರ್ಶನಗೊಳ್ಳಲಿ ಎಂದು ಗುಜರಾತ್ ಬಿಜೆಪಿ ವಕ್ತಾರ ಜಡೇಜ ಅವರು ಹೇಳಿದ್ದರು.
ಈ ಚಿತ್ರದ ಬಿಡುಗಡೆ ದಿನಾಂಕ ಡಿಸೆಂಬರ್ 01 ಎಂದು ಹೇಳಲಾಗಿದೆ. ಡಿಸೆಂಬರ್ 9 ಹಾಗೂ 14ರಂದು ಗುಜರಾತ್ ವಿಧಾನಸಭೆ ಚುನಾವಣೆಗೆ ಮತದಾನ ನಡೆಯಲಿದೆ. ಹೀಗಾಗಿ ಚುನಾವಣೆ ಮುಗಿಯುವ ತನಕ ಚಿತ್ರದ ಬಿಡುಗಡೆ ಸ್ಥಗಿತಗೊಳಿಸುವುದು ಉತ್ತಮ ಎಂದು ಜಡೇಜ ಹೇಳಿದರು.
ಇದೀಗ ಸುಪ್ರಿಂ ಕೋರ್ಟ್ ಬಿಡುಗಡೆಗೆ ತಡೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ತಿರಸ್ಕರಿಸಿರುವುದರಿಂದ ಪದ್ಮಾವತಿ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ.












Click it and Unblock the Notifications