ಪ್ರತಿಜ್ಞೆ ತೆಗೆದುಕೊಳ್ಳಿ: ವಾಟ್ಸಾಪ್ಗೆ ಸುಪ್ರೀಂಕೋರ್ಟ್ ತಾಕೀತು
ನವದೆಹಲಿ, ಫೆಬ್ರವರಿ 15: ಬಳಕೆದಾರರ ದತ್ತಾಂಶಗಳನ್ನು ಯಾವುದೇ ಮೂರನೇ ವ್ಯಕ್ತಿ ಜತೆ ಹಂಚಿಕೊಳ್ಳುವುದಿಲ್ಲ ಎಂದು ಪ್ರತಿಜ್ಞೆ ತೆಗೆದುಕೊಳ್ಳುವಂತೆ ವಾಟ್ಸಾಪ್ ಸಂಸ್ಥೆಗೆ ಸುಪ್ರೀಂಕೋರ್ಟ್ ಸೋಮವಾರ ಸೂಚಿಸಿದೆ.
ಖಾಸಗಿತನದ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ, ವಾಟ್ಸಾಪ್ ಮತ್ತು ಫೇಸ್ಬುಕ್ಗೆ ನೋಟಿಸ್ ನೀಡಿರುವ ನ್ಯಾಯಾಲಯ, ಪ್ರಕರಣದ ವಿಚಾರಣೆಯನ್ನು ನಾಲ್ಕು ವಾರ ಮುಂದೂಡಿದೆ.
ಮುಖ್ಯ ನ್ಯಾಯಮೂರ್ತಿ ಎಸ್ಎ ಬೊಬ್ಡೆ ನೇತೃತ್ವದ ಮೂವರು ಸದಸ್ಯರ ನ್ಯಾಯಪೀಠವು ವಾಟ್ಸಾಪ್ ಖಾಸಗಿತನದ ಕುರಿತು ಉಂಟಾಗಿರುವ ವಿವಾದದ ಪ್ರಕರಣವನ್ನು ಸೋಮವಾರ ವಿಚಾರಣೆ ನಡೆಸಿತು. 'ಖಾಸಗಿತನ ಕಳೆದುಕೊಳ್ಳುವುದರ ಬಗ್ಗೆ ಜನರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ನಿಮ್ಮದು (ವಾಟ್ಸಾಪ್) ಎರಡು ಟ್ರಿಲಿಯನ್ ಅಥವಾ ಮೂರು ಟ್ರಿಲಿಯನ್ ಕಂಪೆನಿ ಇರಬಹುದು. ಆದರೆ ನಿಮ್ಮ ಹಣಕ್ಕಿಂತಲೂ ಜನರು ತಮ್ಮ ಖಾಸಗಿತನಕ್ಕೆ ಮೌಲ್ಯ ನೀಡುತ್ತಾರೆ. ಜನರ ಖಾಸಗಿತನ ರಕ್ಷಿಸುವುದು ನಿಮ್ಮ ಕರ್ತವ್ಯ' ಎಂದು ನ್ಯಾಯಪೀಠ ಹೇಳಿತು.

ಪ್ರತಿಜ್ಞಾವಿಧಿ ತೆಗೆದುಕೊಳ್ಳಿ
'ನೀವು ಪ್ರಮಾಣವಚನ ತೆಗೆದುಕೊಳ್ಳುವ ಬಗ್ಗೆ ಹೇಳಿಕೆ ನೀಡಿ. ಭಾರತೀಯರ ದತ್ತಾಂಶಗಳನ್ನು ಹಂಚಿಕೆ ಮಾಡುವುದರಿಂದ ಅದು ಸಾಧ್ಯವಿಲ್ಲ. ಎ ಇಂದ ಬಿ ಗೆ ಸಂದೇಶವು ರವಾನೆಯಾದರೆ ಆ ಸಂದೇಶ ಯಾರಿಗೆ ರವಾನೆಯಾಗಿದೆ ಎಂಬ ಇಡೀ ಮಾಹಿತಿ ಫೇಸ್ಬುಕ್/ವಾಟ್ಸಾಪ್ಗೆ ಗೊತ್ತಾಗುತ್ತದೆ ಎಂಬ ಅತಂಕ ಜನರಲ್ಲಿ ಮೂಡಿದೆ ಎಂಬುದನ್ನು ನಾವು ಮಾಧ್ಯಮಗಳಲ್ಲಿ ಓದಿದ್ದೇವೆ ಮತ್ತು ಕೇಳಿದ್ದೇವೆ' ಎಂದು ಸಿಜೆಐ ಬೊಬ್ಡೆ ಹೇಳಿದರು.

2016ರ ಪ್ರಕರಣ
ವಾಟ್ಸಾಪ್ 2016ರಲ್ಲಿ ತನ್ನ ಖಾಸಗಿತನ ನೀತಿ ಪ್ರಕಟಿಸಿದ್ದಾಗ ಕರ್ಮಣ್ಯ ಸಿಂಗ್ ಸರೀನ್ ಎಂಬುವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಫೇಸ್ಬುಕ್ನೊಂದಿಗೆ ದತ್ತಾಂಶ ಹಂಚಿಕೊಳ್ಳುವುದಾಗಿ ತಿಳಿಸಿದ್ದ ವಾಟ್ಸಾಪ್, ಬಳಿಕ ಅದರಿಂದ ಹಿಂದೆ ಸರಿದಿತ್ತು. ಈ ಪ್ರಕರಣ ಸಂವಿಧಾನ ಪೀಠದಲ್ಲಿ ವಿಚಾರಣೆಗೆ ಬಾಕಿ ಇದೆ.

ದತ್ತಾಂಶ ಹಂಚಿಕೊಳ್ಳುತ್ತಿಲ್ಲ
ವಾಟ್ಸಾಪ್ ಪರ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್, ಕಂಪೆನಿಯು ಯಾವುದೇ ಖಾಸಗಿ ಸೂಕ್ಷ್ಮ ದತ್ತಾಂಶವನ್ನು ಹಂಚಿಕೊಳ್ಳುತ್ತಿದೆ ಎಂಬ ಆರೋಪವನ್ನು ನಿರಾಕರಿಸಿದರು. ಈ ಪ್ರಕರಣ ದೆಹಲಿ ಹೈಕೋರ್ಟ್ನಲ್ಲಿ ಬಾಕಿ ಇದೆ ಎಂದು ಹೇಳಿದರು.

ಖಾಸಗಿತನ ಹಕ್ಕು
'ಅದಕ್ಕೆ ಕಾನೂನು ಇದೆಯೋ ಇಲ್ಲವೋ ಎನ್ನುವುದಕ್ಕಿಂತ ಖಾಸಗಿತನದ ಹಕ್ಕು ಮೂಲಭೂತ ಹಕ್ಕುಗಳ ಭಾಗ ಎನ್ನುವುದನ್ನು ಗಮನಿಸಬೇಕು. ವಾಟ್ಸಾಪ್ ಖಾಸಗಿತನದ ಹಕ್ಕನ್ನು ರಕ್ಷಿಸಬೇಕು. ಅವರು ದತ್ತಾಂಶ ಹಂಚಿಕೊಳ್ಳಬಾರದು' ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದಿಸಿದರು.












Click it and Unblock the Notifications