ಆತ್ಮಹತ್ಯೆ ಯತ್ನಕ್ಕೆ ಆಪ್ತ ಸಲಹೆಯೇ ಪರಿಹಾರ : ಮೋದಿ
ಕಥುವಾ, ಡಿ. 13: "ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಗೆ ಆಪ್ತ ಸಲಹೆ ನೀಡಿ ಸಮಾಧಾನ ಮಾಡಬೇಕು, ಧೈರ್ಯ ತುಂಬಬೇಕು. ಅದು ಬಿಟ್ಟು ಶಿಕ್ಷೆ ವಿಧಿಸುವುದು ಸರ್ವಥಾ ಸರಿಯಲ್ಲ."
ಕೇಂದ್ರ ಸರ್ಕಾರ ಆತ್ಮಹತ್ಯೆ ಕುರಿತ ಕಾಯ್ದೆಗೆ ತಂದಿರುವ ತಿದ್ದುಪಡಿಯನ್ನು ಪ್ರಧಾನಿ ನರೇಂದ್ರ ಮೋದಿ ಹೀಗೆ ಸಮರ್ಥಿಸಿಕೊಂಡಿದ್ದಾರೆ. ಅದೂ ಜಮ್ಮು ಕಾಶ್ಮೀರದ ಕಥುವಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಕೈಗೊಂಡ ಚುನಾವಣೆ ಪ್ರಚಾರ ಸಂದರ್ಭದಲ್ಲಿ. [ಆತ್ಮಹತ್ಯೆಗೆ ಯತ್ನ ಇನ್ನು ಅಪರಾಧವಲ್ಲ]
"ಓರ್ವ ವ್ಯಕ್ತಿ ತನ್ನ ಜೀವನವನ್ನೇ ಕೊನೆಗೊಳಿಸಿಕೊಳ್ಳಲು ಯತ್ನಿಸುತ್ತಾನೆ ಎಂದರೆ ಆತನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಆತನಿಗೆ ಪಾಲಕರು, ಸಹೋದರರು, ಸಹೋದರಿಯರು ಮತ್ತು ವೈದ್ಯರು ಆಪ್ತ ಸಲಹೆ ನೀಡಬೇಕು. ಇದೇ ಸರಿಯಾದ ಮಾರ್ಗ" ಎಂದು ಮೋದಿ ಪ್ರತಿಪಾದಿಸಿದರು.
"ಆತ್ಮಹತ್ಯೆಗೆ ಪ್ರಯತ್ನಿಸಬೇಡಿ. ಅದರಿಂದ ನಿಮ್ಮ ಸಮಸ್ಯೆಗೆ ಪರಿಹಾರವಾಗುವುದಿಲ್ಲ" ಎಂದು ಪ್ರಧಾನಿ ನರೇಂದ್ರ ಮೋದಿ ಯುವಜನತೆಗೆ ಕರೆ ನೀಡಿದ್ದಾರೆ. [ಬಸ್ ಕಂಡಕ್ಟರ್ ಆತ್ಮಹತ್ಯೆ]
"ಅಪರಾಧ ಮಾಡಿದವರಿಗೆ ಶಿಕ್ಷೆ ವಿಧಿಸುವುದು ಸರಿ. ಆದರೆ, ಓರ್ವ ವ್ಯಕ್ತಿ ಜೀವನದಲ್ಲಿ ಜಿಗುಪ್ಸೆಗೊಂಡು ತನ್ನನ್ನು ತಾನೇ ಶಿಕ್ಷಿಸಿಕೊಳ್ಳಲು (ಆತ್ಮಹತ್ಯೆಗೆ) ಯತ್ನಿಸಿ ವಿಫಲರಾದರೆ ನಂತರವೂ ಆತನನ್ನು ಕಾನೂನು ಮೂಲಕ ಶಿಕ್ಷಿಸಲಾಗುತ್ತದೆ. ಆದ್ದರಿಂದ ಈ ಕುರಿತು ನಾವು ಎಲ್ಲ ರಾಜ್ಯಗಳೊಂದಿಗೆ ಚರ್ಚಿಸಿದೆವು. ನಂತರ ಈ ಕಾನೂನನ್ನು ರದ್ದುಗೊಳಿಸಲು ನಿರ್ಧರಿಸಿದೆವು" ಎಂದು ಹೇಳಿದರು.
"ಆತ್ಮಹತ್ಯೆಗೆ ಯತ್ನಿಸಿದವರಿಗೆ ಶಿಕ್ಷೆ ವಿಧಿಸುವಂತಹ ಕಾನೂನನ್ನು ಮುಂದುವರಿಯಲು ಬಿಡುವುದಿಲ್ಲ. ಇಂತಹ ವಿಷಯಗಳೇ ದೊಡ್ಡ ಬದಲಾವಣೆ ತರಲು ಕಾರಣವಾಗುತ್ತವೆ" ಎಂದು ನರೇಂದ್ರ ಮೋದಿ ಪ್ರಚಾರ ಸಭೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.