ವಿದ್ಯಾರ್ಥಿಗಳು ಶಾಲೆಗೆ ಹೋಗಬಹುದು: ಸರ್ಕಾರ ಅನುಮತಿ
ನವದೆಹಲಿ, ಸೆಪ್ಟೆಂಬರ್ 8: ಕೊರೊನಾ ವೈರಸ್ ಸೋಂಕಿನ ಭೀತಿಯ ನಡುವೆಯೇ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಲು ಸರ್ಕಾರ ಮುಂದಾಗಿದೆ. 9 ರಿಂದ 12ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಸ್ವಯಂ ಇಚ್ಛೆಗೆ ಅನುಗುಣವಾಗಿ ಶಾಲೆಗಳನ್ನು ಭಾಗಶಃ ತೆರೆಯುವ ಸಾಮಾನ್ಯ ಕಾರ್ಯಚರಣಾ ವಿಧಾನವನ್ನು (ಎಸ್ಒಪಿ) ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.
Recommended Video
ಸೆ. 21ರಿಂದ 9 ರಿಂದ 12ನೆಯ ತರಗತಿವರೆಗಿನ ಮಕ್ಕಳು ಸ್ವ ಇಚ್ಛೆಯ ಆಧಾರದಲ್ಲಿ ಶಿಕ್ಷಕರಿಂದ ಮಾರ್ಗದರ್ಶನ ಪಡೆದುಕೊಳ್ಳಲು ಶಾಲೆಗಳಿಗೆ ತೆರಳಲು ಅವಕಾಶ ನೀಡಲಾಗುತ್ತಿದೆ. ಈ ಮೂಲಕ ಶಾಲೆಗಳ ಭಾಗಶಃ ಚಟುವಟಿಕೆಗಳು ಪುನಃ ಆರಂಭವಾಗಲಿವೆ.
ವಿದ್ಯಾರ್ಥಿಗಳು ಶಿಕ್ಷಕರ ಭೇಟಿಗೆ ಬರಲು ಅವಕಾಶ ನೀಡುವ ಶಾಲೆಗಳು ನಿರ್ದಿಷ್ಟ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಅಗತ್ಯವಾಗಿದೆ. ಶಿಕ್ಷಕರು, ಶಾಲೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕೊರೊನಾ ವೈರಸ್ಗೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ. ಮುಂದೆ ಓದಿ.

ನಿಯಮ ಪಾಲನೆ ಕಡ್ಡಾಯ
ಶಾಲೆಗಳಲ್ಲಿ ಕನಿಷ್ಠ ಆರು ಅಡಿ ದೈಹಿಕ ಅಂತರ ಕಾಪಾಡಬೇಕು. ಮಾಸ್ಕ್ ಕಡ್ಡಾಯ. ಶಾಲೆಗಳಲ್ಲಿ ಆಲ್ಕೋಹಾಲ್ ಆಧಾರಿತ ಸ್ಯಾನಿಟೈಸರ್ ಬಳಸಬೇಕು. ಸೋಪ್ ಬಳಸಿ ಕೈಗಳನ್ನು ತೊಳೆದುಕೊಳ್ಳಬೇಕು. ಶಾಲೆಯ ಆವರಣದಲ್ಲಿ ಉಗುಳುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಆರೋಗ್ಯ ಸೇತು ಆಪ್ಅನ್ನು ಅಳವಡಿಸಿಕೊಳ್ಳಬೇಕು. ಆರೋಗ್ಯದ ಕುರಿತು ಸ್ವಯಂ ನಿಗಾ ವಹಿಸುತ್ತಿರಬೇಕು ಸೇರಿದಂತೆ ವಿವಿಧ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಲಾಗಿದೆ.

ಪಾಲಕರ ಒಪ್ಪಿಗೆ ಬೇಕು
ಆನ್ಲೈನ್ ಅಥವಾ ದೂರಶಿಕ್ಷಣ ಕಲಿಕೆಯನ್ನು ಮುಂದುವರಿಸಲು ಅವಕಾಶ ನೀಡಲಾಗಿದೆ. ಶಿಕ್ಷಕರಿಂದ ಸಲಹೆ, ಮಾರ್ಗದರ್ಶನ ಪಡೆದುಕೊಳ್ಳುವ ಸಲುವಾಗಿ 9-12ನೆಯ ತರಗತಿವರೆಗಿನ ವಿದ್ಯಾರ್ಥಿಗಳು ಸ್ವ ಇಚ್ಛೆಯಿಂದ ಶಾಲೆಗೆ ಹೋಗಲು ಅನುಮತಿ ನೀಡಲಾಗಿದೆ. ಆದರೆ ಇದಕ್ಕೆ ವಿದ್ಯಾರ್ಥಿಗಳು ಪಾಲಕರ ಲಿಖಿತ ಒಪ್ಪಿಗೆ ತೆಗೆದುಕೊಂಡು ಹೋಗಬೇಕು. ಇಂತಹ ಭೇಟಿ ಸಂದರ್ಭದಲ್ಲಿ ಶಿಕ್ಷಕ-ವಿದ್ಯಾರ್ಥಿಯ ಮುಖಾಮುಖಿ ಸಂವಾದವನ್ನು ಎಚ್ಚರಿಕೆಯಿಂದ ನಿಭಾಯಿಸಬೇಕು.

ಕಂಟೇನ್ಮೆಂಟ್ ವಲಯಕ್ಕೆ ಅವಕಾಶವಿಲ್ಲ
ಕಂಟೇನ್ಮೆಂಟ್ ವಲಯದಿಂದ ಆಚೆಗಿರುವ ಶಾಲೆಗಳನ್ನು ಮಾತ್ರವೇ ತೆರೆಯಲು ಅವಕಾಶ ನೀಡಲಾಗುತ್ತದೆ. ಹಾಗೆಯೇ ಕಂಟೇನ್ಮೆಂಟ್ ವಲಯದಲ್ಲಿರುವ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಉದ್ಯೋಗಿಗಳು ಶಾಲೆಗೆ ಹಾಜರಾಗಲು ಅನುಮತಿಯಿಲ್ಲ. ಕ್ವಾರೆಂಟೈನ್ ಕೇಂದ್ರಗಳಾಗಿ ಬಳಕೆಯಾಗಿದ್ದ ಶಾಲೆಗಳನ್ನು ಸೂಕ್ತವಾಗಿ ಸ್ಯಾನಿಟೈಸ್ ಮಾಡಬೇಕು.

ಶೇ 50ರಷ್ಟು ಸಿಬ್ಬಂದಿ
ಶಾಲೆಯ ಶೇ 50ರಷ್ಟು ಸಿಬ್ಬಂದಿಯನ್ನು ಮಾತ್ರ ಆನ್ಲೈನ್ ಟೀಚಿಂಗ್, ಟೆಲಿ ಕೌನ್ಸೆಲಿಂಗ್ ಹಾಗೂ ಸಂಬಂಧಿತ ಕೆಲಸಗಳಿಗೆ ಕರೆಯಿಸಬೇಕು. ಬಯೋಮೆಟ್ರಿಕ್ ಹಾಜರಾತಿಯ ಬದಲು ಸಂಪರ್ಕರಹಿತ ಹಾಜರಾತಿ ತೆಗೆದುಕೊಳ್ಳುವ ಪರ್ಯಾಯ ವ್ಯವಸ್ಥೆಯನ್ನು ಶಾಲೆ ಆಡಳಿತ ಕಲ್ಪಿಸಬೇಕು. ಹವಾಮಾನ ಪೂರಕವಾಗಿದ್ದರೆ ಶಾಲೆಯ ಆವರಣದಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಸಂವಾದ ಮಾಡಬಹುದು. ಪ್ರತಿ ಹಂತದಲ್ಲಿಯೂ, ಪ್ರತಿ ಸ್ಥಳದಲ್ಲಿಯೂ ದೈಹಿಕ ಅಂತರ, ಸ್ವಚ್ಛತೆ ಕಾಪಾಡಬೇಕು.

ರೋಗ ಲಕ್ಷಣ ಇಲ್ಲದವರಿಗೆ ಮಾತ್ರ ಪ್ರವೇಶ
ಸಭೆ, ಕ್ರೀಡೆಯಂತಹ ಗುಂಪುಗೂಡುವ ಚಟುವಟಿಕೆಗಳಿಗೆ ಅವಕಾಶವಿಲ್ಲ. ವಯಸ್ಸಾದವರು, ಗರ್ಭಿಣಿಯರು ಮತ್ತು ಆರೋಗ್ಯ ಸಮಸ್ಯೆಯುಳ್ಳುವರು ಹೆಚ್ಚುವರಿ ಎಚ್ಚರಿಕೆ ವಹಿಸಬೇಕು. ಶಿಕ್ಷಕರು ಹಾಗೂ ಇತರೆ ಸಿಬ್ಬಂದಿಗೆ ಆಡಳಿತ ಮಂಡಳಿ ಮಾಸ್ಕ್, ವೈಸರ್, ಹ್ಯಾಂಡ್ ಸ್ಯಾನಿಟೈಸರ್ಗಳಂತಹ ಸುರಕ್ಷತಾ ಸಾಮಗ್ರಿಗಳನ್ನು ಒದಗಿಸಬೇಕು. ಯಾವ ರೋಗ ಲಕ್ಷಣಗಳೂ ಇಲ್ಲದವರಿಗೆ ಮಾತ್ರ ಶಾಲೆಗೆ ಪ್ರವೇಶ ನೀಡಬೇಕು. ಕ್ಯಾಂಟೀನ್, ಮೆಸ್ಗಳನ್ನು ತೆರೆಯುವಂತಿಲ್ಲ ಎಂದು ಸರ್ಕಾರ ಸೂಚಿಸಿದೆ. ಒಟ್ಟು ಐದು ಪುಟಗಳ ಸೂಚನೆಯನ್ನು ಸರ್ಕಾರ ಹೊರಡಿಸಿದೆ.












Click it and Unblock the Notifications