‘ಏ ಮೇರೆ ವತನ್ ಕೆ ಲೋಗೋ…’ ರೂಪುಗೊಂಡದ್ದು ಹೀಗೆ
ಅದು 1963 ರ ದಿನಗಳು. ಕವಿ ಪ್ರದೀಪ್ 'ಏ ಮೇರೆ ವತನ್ ಕೆ ಲೋಗೋ' ಬರೀತಾರೆ, ಈ ಹಾಡಿಗೆ ಮೊದಲು ಕವಿ ಪ್ರದೀಪ್, ಇವರು ಸ್ವತ: ಬಾಂಬೆ ಟಾಕೀಸ್ ನ ಹಾಡುಗಾರ, ಸಂಗೀತಗಾರರಾಗಿದ್ದು, ಅದರ ಟ್ಯೂನ್ ಅಳವಡಿಸಿದ್ದುದನ್ನು, ಸಿ, ರಾಮಚಂದ್ರ ಅವರು ದೆಹಲಿ ಗಣರಾಜ್ಯ ದಿನದ ವಿಶೇಷ ಗೀತೆಯನ್ನಾಗಿ ಪ್ರಸ್ತುತ ಪಡಿಸಲು ರಿಕಂಪೋಸ್ ಮಾಡುತ್ತಾರೆ ವಿಶೇಷವಾಗಿ ಸಜ್ಜುಗೊಳಿಸಲು ಅಣಿಯಾಗುತ್ತಾರೆ,
ಚಿತಲಕರ ನರಹರ್ ರಾಮಚಂದ್ರರು ಮೊದಲು ಯುಗಳ ಗೀತೆಯನ್ನಾಗಿ ಕಂಪೋಸ್ ಮಾಡಿ, ಲತಾಜಿ ಹಾಗೂ ಆಶಾಜಿ ಅವರಿಂದ ಹಾಡಿಸಲು ಎಲ್ಲ ಟ್ಯೂನ್ ರೆಡಿಯಾಗಿ ರಿಹರ್ಸಲ್ ಸುಮಾರು ದಿನ ನಡೆಯುತ್ತದೆ. 'ಏ ಮೇರೆ ವತನ್ ಕೆ ಲೋಗೋ' ಹಾಡಿನ ಮೊದಲ ಸಾಲನ್ನು ಆಶಾಜಿ ಪ್ರಾರಂಭ ಮಾಡಿದರೆ, ಲತಾಜಿ ಅದನ್ನು 'ಝರಾ ಆಂಖ್ ಮೇ ಭರ್ ಲೋ ಪಾನೀ' ಎಂದು ಎರಡನೇ ಲೈನ್ ಹಾಡುವ ಯುಗಳ ಗೀತೆಯಾಗಿ ರಿಹರ್ಸಲ್ ನಡೆಯಿತು.
ಮೂಲವಾಗಿ ಕವಿ ಪ್ರದೀಪ ಅದನ್ನು ಕಂಪೋಸ್ ಮಾಡಿದ್ದು ಸ್ವಲ್ಪ ಸ್ಲೋ ಎನಿಸಿ. ರಾಮಚಂದ್ರರು ದೆಹಲಿಯ ಲೈವ್ ಆಡಿಯನ್ಸ್ ಗೆ ಅದು ಫಾಸ್ಟ್ ಟ್ಯೂನ್ ನಲ್ಲಿ ಇದ್ದರೆ ಚನ್ನ ಎಂದು ಅದರ ಕೆಲವು ಸಾಲುಗಳಿಗೆ ಫಾಸ್ಟ್ ಟ್ಯೂನ್ ನೀಡುತ್ತಾರೆ, ಇನ್ನೇನು ಟ್ಯೂನ್ ಸೆಟ್ ಆಗಿ ರಿಹರ್ಸಲ್ ಮುಂದುವರೆದಾಗ, ಲತಾಜಿ ತಾವೊಬ್ಬರೇ 'ಸೋಲೋ' ಗೀತೆಯನ್ನಾಗಿ ಹಾಡಲು ಇಷ್ಟ ಪಟ್ಟು ಅದನ್ನು ಕವಿ ಪ್ರದೀಪರ ವಿಲೇಪಾರ್ಲೆ ಮನೆಗೆ ಹೋಗಿ ನಿವೇದಿಸಿಕೊಳ್ಳುತ್ತಾರೆ.
ಮೂಲವಾಗಿ ಲತಾಜಿ ಅವರಿಗಾಗಿಯೇ ಬರೆದ ಕವಿ ಪ್ರದೀಪ, ಕೂಡಲೇ ಲತಾಜಿ ಮನದಿಂಗಿತವನ್ನು ರಾಮಚಂದ್ರ ಅವರಿಗೆ ತಿಳಿಸಿ, ಅವರನ್ನು ಒಪ್ಪಿಸುತ್ತಾರೆ, ಮತ್ತೆ ಲತಾಜಿ ಅವರಿಂದ ಸೋಲೋ ಗೀತೆಯ ರಿಹರ್ಸಲ್ ಅಂತಿಮವಾಗಿ, 1963 ರ ಗಣರಾಜ್ಯೋತ್ಸವದಲ್ಲಿ ಲತಾಜಿ ಈ ಹಾಡನ್ನು ಹಾಡುತ್ತಾರೆ. ಹೀಗಾಗಿ ಹಾಡಿನಲ್ಲಿ ಲತಾಜಿ ಹಾಡುವ ಮೊದಲ ಸಾಲುಗಳು ಕವಿ ಪ್ರದೀಪರ ಟ್ಯೂನ್ ನ ಸಾಲುಗಳು, ನಂತರ ಫಾಸ್ಟ್ ಸಾಲುಗಳು ರಾಮಚಂದ್ರರ ಟ್ಯೂನ್ ನ ಸಾಲುಗಳು.

ನೆರೆದ ಸಭಿಕರೆಲ್ಲರ ದೇಶಪ್ರೇಮವನ್ನು ಬಡಿದೆಬ್ಬಿಸಿ, ದೀರ್ಘಕರತಾಡನದೊಂದಿಗೆ, ಇಡೀ ಸಮೂಹದ ಕಣ್ಣೀರು ಧಾರೆಯಾಗಿ ಹರಿದದ್ದು ಇತಿಹಾಸ. ಚೀನಾ ಯುದ್ಧದ ಮಡುಗಟ್ಟಿದ ಹತಾಶೆಯ ದು:ಖ ಕಣ್ಣೀರಾಗಿ ಹೊರಹೊಮ್ಮಿತ್ತೇನೋ! ಲತಾಜಿಯವರ ಕೋಗಿಲೆಯ ಕಂಠದಿಂದ ಹೊರಹೊಮ್ಮಿದ 'ಏ ಮೇರೆ ವತನ್ ಕೆ ಲೋಗೋ' ಗೀತೆ ನೇರವಾಗಿ ಹೀಗೆ ಸಭಿಕರ ಎದೆಯಾಳಕ್ಕೆ ಇಳಿದುಹೋಯಿತು.
1962 ರ ಚೀನಾ ಯುದ್ಧದ ದಟ್ಟ ನೋವಿನಲ್ಲಿದ್ದ ಪ್ರಧಾನಿ ನೆಹರೂ ಅವರು ಕಣ್ಣೀರು ಗರೆಯುತ್ತ ಎದ್ದು ಬಂದು ಲತಾಜಿ ಯವರನ್ನು ಮನದುಂಬಿ ತಬ್ಬಿ ಅಭಿನಂದಿಸಿದರು. ಒಂದೇ ಕ್ಷಣದಲ್ಲಿ ಹಾಡಿಗೊಂದು ರಾಷ್ಟ್ರೀಯ ಸ್ವರೂಪ ಬಂದು ಬಿಟ್ಟಿತು. ಒಂದೇ ಓಟಕ್ಕೆ ಮಾಸ್ಟರ್ ಟೇಪ್ ತೆಗೆದುಕೊಂಡು ಆಕಾಶವಾಣಿಯ ವಿವಿಧಭಾರತಿಯಿಂದ ಕೂಡಲೇ ರಾಷ್ಟ್ರೀಯ ಪ್ರಸಾರದಲ್ಲಿ ದೇಶದ ತುಂಬೆಲ್ಲ ಬಿತ್ತರಿಸಲಾಯಿತು.[ಲತಾಜೀಗೆ ಮೋದಿ ಸನ್ಮಾನ]
ಕೆಲವೇ ಸಮಯದಲ್ಲಿ ಎಚ್ ಎಮ್ ವಿ ಸಂಸ್ಥೆಯಿಂದ ಇದರ ಹಾಡಿನ ಧ್ವನಿಮುದ್ರಣ ದೇಶದ ತುಂಬೆಲ್ಲ ಶರವೇಗದಲ್ಲಿ ವಿತರಿಸಿತು. ಅಂದಿನಿಂದ ಇಂದಿಗೂ ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ಈ ಗೀತೆ ಒಂದು ದೇಶವನ್ನು ಹಿಡಿದಿಡುವ, ಹಿಡಿದಿಟ್ಟ ಅತ್ಯುತ್ತಮ ದೇಶಪ್ರೇಮದ, ದೇಶಭಕ್ತಿಯ ಗೀತೆಯಾಗುಳಿದಿದೆ.
ಯುದ್ಧದ ನಿರಾಶೆ, ದು:ಖದ ಛಾಯೆಯಲ್ಲಿ ನಲುಗಿದ್ದ ದೇಶಕ್ಕೆ, ದೇಶದ ಜರ್ಜರಿತ ಮನಸುಗಳಲ್ಲಿ ಮತ್ತೊಮ್ಮೆ ದೇಶಪ್ರೇಮದ ಬೀಜ ಬಿತ್ತಿದ ಗೀತೆ, 'ಏ ಮೇರೆ ವತನ್ ಕೆ ಲೋಗೋ'.. ಅಂದಿನ ಮುತ್ಸದ್ದಿ, ರಿಸರ್ಚ್ ಬ್ಯಾಂಕ ಆಫ್ ಇಂಡಿಯಾ ಗವರ್ನರ್ ಸಿ. ಡಿ. ದೇಶಮುಖ ಈ ಹಾಡನ್ನು, 'ರಾಷ್ಟ್ರೀಯ ಐಕ್ಯತೆಯ ರಾಗದುಂಬಿದ ಸಂಕೇತ' ವೆಂದು ಕರೆದದ್ದು ಕೂಡ ಐತಿಹಾಸಿಕ.
ಹೀಗೆ ಈ ಹಾಡಿನ ನಿಜ ಶ್ರೇಯಸ್ಸು ಲತಾಜಿ, ಕವಿ ಪ್ರದೀಪ, ಸಿ, ರಾಮಚಂದ್ರ ಅವರಿಗೆ ಸಲ್ಲುತ್ತದೆ. ತೆರೆಯ ಮರೆಯಲ್ಲಿ ತ್ಯಾಗ ಮಾಡಿದ ಆಶಾಜಿ ಯವರಿಗೂ ಸಲ್ಲುತ್ತದಲ್ಲವೇ. ಅಂದಹಾಗೆ ಆ ದಿನ ಕವಿ ಪ್ರದೀಪ ಅವರಿಗೆ ಸಿ. ರಾಮಚಂದ್ರ ಅವರೊಂದಿಗೆ ಟ್ಯೂನ್ ಮಾಡಿದ ತಮ್ಮ ಹಾಡನ್ನು 'ಲೈವ್' ಕೇಳುವ ಅವಕಾಶ ಸಿಗಲಿಲ್ಲ. ಯಾಕೆ ಗೊತ್ತೇ! ಅವರಿಗೆ ಅಲ್ಲಿಗೆ ಬರಲು ಆಹ್ವಾನ ಸಿಕ್ಕಿರಲಿಲ್ಲ.
' ಆವೋ ಬಚ್ಚೋ ತುಮ್ಹೇ ದಿಖಾಯೇ ಝಾಂಕೀ ಹಿಂದುಸ್ತಾನ್ ಕಿ, ಇಸ್ ಮಿಟ್ಟೀ ಸೆ ತಿಲಕ್ ಕರೋಂ ಯೇ ಧರತೀ ಹೈ ಬಲಿದಾನ ಕೀ, ವಂದೇ ಮಾತರಂ, ವಂದೇ ಮಾತರಂ ( ಜಾಗೃತಿ, 1955), ಹಾಗೂ ' ದೂರ ಹಟೋ ದೂರ ಹಟೋ ಏ ದುನಿಯಾ ವಾಲೋಂ ಹಿಂದುಸ್ತಾನ ಹಮಾರಾ ಹೈ (ಕಿಸ್ಮತ್, 1943)' ಮುಂತಾದ ಅನೇಕ ದೇಶಪ್ರೇಮದ ಗೀತೆಗಳಿಂದ ಭಾರತೀಯರನ್ನು ಇಂದಿಗೂ ಒಂದಾಗಿಸಿದ ಕವಿ ಪ್ರದೀಪ, ಹೀಗೆ ವಂಚಿತರಾದದ್ದು ಇತಿಹಾಸ.
ಈ ದೇಶದ ಮನಸ್ಸುಗಳಲ್ಲಿ, ಹೃದಯಗಳಲ್ಲಿ ದೇಶಪ್ರೇಮದ ಬೀಜ ಬಿತ್ತಿದ, 'ಏ ಮೇರೆ ವತನ್ ಕೆ ಲೋಗೋ' ಹಾಡನ್ನು ಮತ್ತೆ ಮತ್ತೆ ಈ ನಾಡು, ನೆಲ ನೆನಸುವಂತಾಗಲಿ.
ಸೂಚನೆ: ಸಂಪದ.ನೆಟ್ ನಲ್ಲಿ ಈ ಮೊದಲು ಇದೇ ಲೇಖನ ಪ್ರಕಟವಾಗಿದೆ. ಇದನ್ನು ಸಾಂದರ್ಭಿಕವಾಗಿ ನಮ್ಮಲ್ಲಿ ಪ್ರಕಟಿಸಲಾಗಿದೆ.












Click it and Unblock the Notifications