ಐದು ಸಹ ಸೈನಿಕರಿಗೆ ಗುಂಡಿಟ್ಟು ತಾನೂ ಸತ್ತ ಸೈನಿಕ

13ನೆ ರಾಷ್ಟ್ರೀಯ ರೈಫಲ್ಸ್ ಪಡೆಗೆ ಸೇರಿದ ಯೋಧ ಈ ಕುಕೃತ್ಯವೆಸಗಿದ್ದಾನೆ. ಆದರೆ ಯೋಧನ ಹೆಸರು ವಿವರಗಳನ್ನು ಸೇನಾ ಪಡೆ ಬಹಿರಂಗಪಡಿಸಿಲ್ಲ. ಇತರೆ ಮೃತ ಯೋಧರ ಹೆಸರುಗಳನ್ನೂ ಪ್ರಕಟಿಸಿಲ್ಲ. ಬೆಳಗಿನ ಜಾವ ಸುಮಾರು 2 ಗಂಟೆಯ ಸಮಯದಲ್ಲಿ ಗಾಢ ನಿದ್ರೆಯಲ್ಲಿದ್ದ ತನ್ನ ಐವರು ಸಹೋದ್ಯೋಗಿಗಳ ತಲೆಗೆ ಗುಂಡು ಹಾರಿಸಿ ಕೊಂದಿದ್ದಾನೆ ಎಂದು ತಿಳಿದುಬಂದಿದೆ.
ಸಹೋದ್ಯೋಗಿ ಸೈನಿಕರನ್ನು ಕೊಂದ ಬಳಿಕ ತಾನೇ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾನೆ. ಘಟನೆ ನಡೆಯುತ್ತಿದ್ದಂತೆ ಸೇನೆ ಉನ್ನತ ತನಿಖೆಗೆ ಆದೇಶಿಸಿದೆ.
ಇದು ಇಲ್ಲಿಯ ನಿಜವಾದ ದುರಂತ:
ಕಾಶ್ಮೀರ ಮತ್ತಿತರ ದುರ್ಗಮ ಸ್ಥಳಗಳಲ್ಲಿ ಸೇವೆಗೆ ನಿಯೋಜನೆಗೊಳ್ಳುವ ಯೋಧರು ಅತ್ಯಂತ ಕಠಿಣ ವಾತಾವರಣದಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಪ್ರತಿಕೂಲ ಪ್ರಕೃತಿ ವಾತಾವರಣದಲ್ಲಿ ದೇಶದ ಗಡಿಯನ್ನು ಕಾಯಬೇಕಾಗುತ್ತದೆ.
ಇಂತಹ ಸಂದರ್ಭಗಳಲ್ಲಿ ಯೋಧರು ಸಹಜವಾಗಿಯೇ ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಾರೆ. ತಮ್ಮ ಆಪ್ತರು, ಕುಟುಂಬ ವರ್ಗದವರಿಂದ ಬೇರ್ಪಟ್ಟು ದೀರ್ಘ ಕಾಲದವರೆಗೂ ಏಕಾಂಗಿ ಜೀವನ ನಡೆಸಬೇಕಾಗುತ್ತದೆ. ಮನರಂಜನೆ ಎಂಬುದು ಅವರಿಗೆ ಗಗನಕುಸುಮವಾಗಿರುತ್ತದೆ.
ಒಂಟಿ ಬಾಳು ಹಣ್ಣುಗಾಯಿ ನೀರುಗಾಯಿಯನ್ನಾಗಿಸಿರುತ್ತದೆ. ಅವರ ಬದುಕನ್ನು ಸಹನೀಯವಾಗಿಸುವ ಜರೂರತ್ತು ಬಹಳಷ್ಟಿರುತ್ತದೆ ಎಂಬುದನ್ನು ಮನಶ್ಶಾಸ್ತ್ರಜ್ಞರು ಆಗಾಗ ದೇಶದ ಭದ್ರತಾ ಪಡೆಗಳ ಗಮನಕ್ಕೆ ತರುತ್ತಾರೆ. ಆದರೆ ಸಂಬಂಧಪಟ್ಟವರು ಇದರ ಬಗ್ಗೆ ಗಮನಹರಿಸುವುದಿಲ್ಲ. ಅದು ಇಲ್ಲಿಯ ನಿಜವಾದ ದುರಂತ.












Click it and Unblock the Notifications