ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಅಖಿಲೇಶ್ ರಣತಂತ್ರ
ಲಕ್ನೋ, ಜೂನ್ 11: ತಮ್ಮ ತಮ್ಮಲ್ಲೇ ಕಾದಾಡುವುದಕ್ಕಿಂತ ಸಮಾನ ಎದುರಾಳಿಯನ್ನು ಎದುರಿಸಲು ಒಟ್ಟಾದರೆ ಯಶಸ್ಸಿದೆ ಎಂಬುದನ್ನು ಬಹುಜನ ಸಮಾಜವಾದಿ ಪಕ್ಷ ಮತ್ತು ಸಮಾಜವಾದಿ ಪಕ್ಷಗಳು ಉತ್ತರ ಪ್ರದೇಶದಲ್ಲಿ ನಡೆದ ಚುನಾವಣೆಯಲ್ಲಿ ಕಂಡುಕೊಂಡಿವೆ.
ಕೈರಾನಾ ಲೋಕಸಭೆ ಚುನಾವಣೆಯಲ್ಲಿ ಆರ್.ಎಲ್.ಡಿ ಅಭ್ಯರ್ಥಿಯನ್ನು ಬೆಂಬಲಿಸಿ ಎರಡೂ ಪಕ್ಷಗಳು ಯಶಸ್ವಿಯಾಗಿದ್ದವು. ಅಲ್ಲದೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರ ಗೋರಖ್ ಪುರ ಮತ್ತು ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರ ಫುಲ್ಪುರ ಕ್ಷೇತ್ರದಲ್ಲಿಯೂ ಎಸ್ಪಿ ಅಭ್ಯರ್ಥಿಗಳನ್ನು ಬಿಎಸ್ಪಿ ಬೆಂಬಲಿಸಿದ್ದರಿಂದ ಇಲ್ಲಿ 'ಸೈಕಲ್' ಗೆದ್ದಿತ್ತು.
ಹೊಸ ಭಾಷ್ಯ ಬರೆದಿರುವ ವಿಪಕ್ಷಗಳ ಮೈತ್ರಿ ಬಿಜೆಪಿಗೆ ಎಚ್ಚರಿಕೆ ಗಂಟೆ!
ಇದೇ ಸೂತ್ರವನ್ನು ಲೋಕಸಭೆ ಚುನಾವಣೆಯಲ್ಲೂ ಮುಂದುವರಿಸಿ ಬಿಜೆಪಿಗೆ ಡಿಚ್ಚಿ ನೀಡಲು ಅಖಿಲೇಶ್ ಯಾದವ್ ಮತ್ತು ಮಾಯಾವತಿ ನಿರ್ಧರಿಸಿದ್ದಾರೆ.
"ಬಿಸ್ಪಿ ಜೊತೆಗಿನ ನಮ್ಮ ಮೈತ್ರಿ 2019ರಲ್ಲೂ ಮುಂದುವರಿಯಲಿದೆ. ಒಂದೊಮ್ಮೆ ಕೆಲವು ಸ್ಥಾನಗಳನ್ನು ಬಿಟ್ಟು ಕೊಡಬೇಕಾದರೂ ನಾವು ಬಿಟ್ಟುಕೊಡಲಿದ್ದೇವೆ. ಬಿಜೆಪಿ ಸೋಲನ್ನು ನಾವು ಖಚಿತಪಡಿಸಬೇಕಿದೆ," ಎಂದು ಅಖಿಲೇಶ್ ಯಾದವ್ ಸ್ಪಷ್ಟವಾಗಿ ಹೇಳಿದ್ದಾರೆ.
ಹೀಗಾಗಿ 2019ರಲ್ಲಿ ಆನೆ ಸೈಕಲ್ ಸವಾರಿ ಹೊರಡುವುದು ಬಹುತೇಕ ಖಚಿತವಾಗಿದೆ.
ಬಿಜೆಪಿಗೆ ಪಾಠ ಕಲಿಸಿದ ಜನರಿಗೆ ಧನ್ಯವಾದ: ಅಖಿಲೇಶ್ ಯಾದವ್
ಆದರೆ, ಈ ಮೈತ್ರಿ ಬಗ್ಗೆ ಬಿಜೆಪಿ ಹಗುರವಾಗಿ ಮಾತನಾಡಿದೆ. ತಮ್ಮ ತಮ್ಮಲ್ಲೇ ಕಚ್ಚಾಡಿ ಅಖಿಲೇಶ್ ಯಾದವ್ ಮತ್ತು ಮಾಯಾವತಿ ನಾಶವಾಗಲಿದ್ದಾರೆ. ಇದು ವಿಷಯಾಧಾರಿತ ಮೈತ್ರಿಯಲ್ಲ. ವಿಷಯಾಧಾರವಿಲ್ಲದ ಮೈತ್ರಿ ಉಳಿಯುವುದಿಲ್ಲ. ಚುನಾವಣೆ (2019) ಬರುವ ಮೊದಲೇ ಅವರು ನಾಶವಾಗಲಿದ್ದಾರೆ," ಎಂದು ಉತ್ತರ ಪ್ರದೇಶ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಹೇಳಿದ್ದಾರೆ.