ಅಕ್ರಮ ಆಸ್ತಿ ಹೊಂದಿರುವ ಜನಪ್ರತಿನಿಧಿಗಳಿಗೆ ಎದುರಾಗಿದೆ ಭೀತಿ
ನವದೆಹಲಿ, ನವೆಂಬರ್ 27: ಅಕ್ರಮ ಆಸ್ತಿ ಹೊಂದಿರುವ ಎಲ್ಲಾ ಸ್ತರ ಜನಪ್ರತಿನಿಧಿಗಳು ಬೆಚ್ಚಿ ಬೀಳುವಂಥ ಕಾನೂನೊಂದನ್ನು ರೂಪಿಸಲು ಬಿಜೆಪಿ ನೇತೃತ್ವದ ಮೋದಿ ಸರ್ಕಾರ ಸಜ್ಜಾಗಿದೆ. ಸಂಸದರು, ಶಾಸಕರ ಘೋಷಿತ ಆಸ್ತಿ ಪ್ರಮಾಣದಲ್ಲಿ ಗಣನೀಯ ಮಟ್ಟದಲ್ಲಿ ಏರಿಕೆ ಕಂಡು ಬಂದರೆ ಅಂಥ ಜನಪ್ರತಿನಿಧಿಗಳನ್ನು ಅನರ್ಹಗೊಳಿಸುವ ಅಸ್ತ್ರ ಪ್ರಯೋಗಿಸಲು ಸರ್ಕಾರ ಮುಂದಾಗಿದೆ.
ಸಂಸತ್ತಿನ ಉಭಯ ಸದನಗಳ ಹಿರಿಯ ಅಧಿಕಾರಿಗಳು, ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳು ಸೇರಿದಂತೆ ಜನಪ್ರತಿನಿಧಿಗಳ ಜತೆ ಕೂಡಾ ಮಹತ್ವದ ಸಭೆಯನ್ನು ಮೋದಿ ಸರ್ಕಾರ ನಡೆಸಿದೆ.
ಜನಪ್ರತಿನಿಧಿಗಳ ಅಕ್ರಮ ಆಸ್ತಿ ಗಳಿಕೆ ಕುರಿತಂತೆ ನಿಗಾ ವಹಿಸಲು ಶಾಶ್ವತವಾದ ಮಾರ್ಗೋಪಾಯವನ್ನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.

ಚುನಾವಣೆ ಸಂದರ್ಭದಲ್ಲಿ ಜನಪ್ರತಿನಿಧಿಗಳು ತಮ್ಮ ಆಸ್ತಿ-ಸಾಲ ವಿವರಗಳ ಅಫಿಡವಿಟ್ ಸಲ್ಲಿಸುತ್ತಾರೆ. ಆಸ್ತಿ ಪ್ರಮಾಣದಲ್ಲಿ ಏರಿಕೆ ಕಂಡು ಬಂದರೆ ಅಕ್ರಮ ಆಸ್ತಿ ಗಳಿಕೆ ಎಂಬ ಆರೋಪ ಹೊರೆಸಿ ಆಯೋಗ, ಲೋಕಾಯುಕ್ತ, ಜಾರಿ ನಿರ್ದೇಶಾಲಯಕ್ಕೆ ದೂರು ನೀಡಬಹುದು. ಆದರೆ, ಶಾಸಕತ್ವ ಅನರ್ಹಗೊಳಿಸಲು ಸಾಧ್ಯವಿಲ್ಲ.
1951ರ ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಅಕ್ರಮ ಆಸ್ತಿ ಹೊಂದಿರುವವರನ್ನು ಜನಪ್ರತಿನಿಧಿ ಸ್ಥಾನದಿಂದ ಅನರ್ಹಗೊಳಿಸಲು ಸರ್ಕಾರ ಮುಂದಾಗಿದೆ.












Click it and Unblock the Notifications