Telangana Assembly Elections: ತೆಲಂಗಾಣದಲ್ಲೂ 6 ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್: ಏನೆಲ್ಲಾ ಇದೆ ನೋಡಿ
ಅಧಿಕಾರಕ್ಕೆ ಬಂದರೆ '5 ಭರವಸೆ'ಗಳನ್ನು ಈಡೇರಿಸುವುದಾಗಿ ಕಾಂಗ್ರೆಸ್ ಭರವಸೆ ನೀಡಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಈಗ ಇದೇ ಫಾರ್ಮುಲಾವನ್ನು ತೆಲಂಗಾಣದಲ್ಲೂ ಪ್ರಯೋಗಿಸಲು ಮುಂದಾಗಿದೆ.
ಕಾಂಗ್ರೆಸ್ನ ಮಾಜಿ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ತೆಲಂಗಾಣ ವಿಧಾನಸಭೆ ಚುನಾವಣೆಗೆ ಮುನ್ನ ತೆಲಂಗಾಣಕ್ಕೆ ಇದೇ ರೀತಿಯ 5 ಗ್ಯಾರಂಟಿಗಳನ್ನು ಭಾನುವಾರ ಘೋಷಿಸಿದ್ದಾರೆ.

"ತೆಲಂಗಾಣ ಜನತೆಯ ಆಕಾಂಕ್ಷೆಯನ್ನು ಈಡೇರಿಸಲು, ನಾವು (ಕಾಂಗ್ರೆಸ್) ಐದು ಭರವಸೆಗಳನ್ನು ಘೋಷಿಸುತ್ತಿದ್ದೇವೆ ಮತ್ತು ಅವುಗಳಲ್ಲಿ ಪ್ರತಿಯೊಂದನ್ನು ಈಡೇರಿಸಲು ನಾವು ಬದ್ಧರಾಗಿದ್ದೇವೆ" ಎಂದು ರಂಗಾರೆಡ್ಡಿ ಜಿಲ್ಲೆಯ ತುಕ್ಕುಗುಡದ ವಿಜಯಭೇರಿ ಸಭಾಭವನದಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಸೋನಿಯಾ ಗಾಂಧಿ ಹೇಳಿದರು.
ತೆಲಂಗಾಣಕ್ಕೆ ಪಕ್ಷದ ಆರು ಭರವಸೆಗಳನ್ನು ಘೋಷಿಸಿದ ರಾಹುಲ್ ಗಾಂಧಿ, ಕಾಂಗ್ರೆಸ್ನ ಸಂಪುಟ ಪ್ರಮಾಣ ವಚನ ಸ್ವೀಕರಿಸಿದ ಮೊದಲ ದಿನವೇ ಈ ಭರವಸೆಗಳನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ಹೇಳಿದರು. "ನಾವು ಕರ್ನಾಟಕದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಿದ್ದೇವೆ" ಎಂದು ಅವರು ಹೇಳಿದರು.
ಏನವು ಗ್ಯಾರಂಟಿಗಳು?
1) ಮಹಾಲಕ್ಷ್ಮಿ ಯೋಜನೆಯನ್ನು ಘೋಷಿಸಲಾಗಿದ್ದು ಈ ಯೋಜನೆಯಂತೆ ಮಹಿಳೆಯರಿಗೆ ಪ್ರತಿ ತಿಂಗಳು 2,500 ರೂಪಾಯಿ ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ. ಇನ್ನು ರಾಜ್ಯದ ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಘೋಷಣೆ ಮಾಡಲಾಗಿದೆ. ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ ಅನ್ನು 500 ರೂಪಾಯಿಗೆ ನೀಡುವುದಾಗಿ ಹೇಳಿದೆ.
2) 'ರೈತು ಭರೋಸಾ' ಯೋಜನೆಯಡಿ, ಪಕ್ಷವು ವಾರ್ಷಿಕವಾಗಿ ಪ್ರತಿ ಎಕರೆಗೆ 15 ಸಾವಿರ ರೂಪಾಯಿ ಬೆಳೆ ಬೆಂಬಲವನ್ನು ಮತ್ತು ಗೇಣಿದಾರ ರೈತರು ಮತ್ತು ಕೃಷಿ ಕಾರ್ಮಿಕರಿಗೆ 12000 ರೂಪಾಯಿ ನೀಡುವುದಾಗಿ ಭರವಸೆ ನೀಡಿತು. ಎಂಎಸ್ಪಿ ಹೊರತುಪಡಿಸಿ ಭತ್ತದ ಬೆಳೆಗೆ ಪ್ರತಿ ಕ್ವಿಂಟಾಲ್ಗೆ ಹೆಚ್ಚುವರಿಯಾಗಿ 500 ರೂಪಾಯಿಗಳನ್ನು ನೀಡಲಾಗುವುದು ಎಂದು ಕಾಂಗ್ರೆಸ್ ಘೋಷಣೆ ಮಾಡಿದೆ.
3) 'ಗೃಹ ಜ್ಯೋತಿ' ಯೋಜನೆಯಡಿ ಪ್ರತಿ ಮನೆಗೆ 200 ಯೂನಿಟ್ಗಳವರೆಗೆ ಉಚಿತ ವಿದ್ಯುತ್ ನೀಡುವುದಾಗಿ ಪಕ್ಷ ಭರವಸೆ ನೀಡಿದೆ.
4) 'ಇಂದಿರಮ್ಮ ಇಂಡ್ಲು' (ವಸತಿ) ಯೋಜನೆಯಡಿ ನಿವೇಶನ ರಹಿತರಿಗೆ ನಿವೇಶನ, ವಸತಿ ರಹಿತರಿಗೆ ಮನೆ ನಿರ್ಮಾಣಕ್ಕೆ 5 ಲಕ್ಷ ನೆರವು, ತೆಲಂಗಾಣ ಹೋರಾಟಗಾರರಿಗೆ 250 ಚದರ ಭೂಮಿಯನ್ನು ನೀಡುವುದಾಗಿ ಘೋಷಿಸಲಾಗಿದೆ.
5) 'ಯುವ ವಿಕಾಸಂ' ಯೋಜನೆಯಡಿ ವಿದ್ಯಾರ್ಥಿಗಳಿಗೆ 5 ಲಕ್ಷ ರೂಪಾಯಿ ಮೌಲ್ಯದ 'ವಿದ್ಯಾ ಭರೋಸಾ' ಕಾರ್ಡ್ಗಳು, ಕೋಚಿಂಗ್ ಶುಲ್ಕಕ್ಕಾಗಿ ನೆರವು ಮತ್ತು ಮಂಡಲಕ್ಕೆ ತೆಲಂಗಾಣ ಅಂತರರಾಷ್ಟ್ರೀಯ ಶಾಲೆಗಳನ್ನು ಸ್ಥಾಪಿಸಲಾಗುವುದು ಎಂದು ಕಾಂಗ್ರೆಸ್ ಹೇಳಿದೆ.
6) 'ಚೇಯುತ' ಯೋಜನೆಯಡಿ ಹಿರಿಯ ನಾಗರಿಕರಿಗೆ ಮಾಸಿಕ 4000 ಪಿಂಚಣಿ ಮತ್ತು 'ರಾಜೀವ್ ಆರೋಗ್ಯಶ್ರೀ' ಯೋಜನೆಯಡಿ 10 ಲಕ್ಷ ಮೌಲ್ಯದ ವೈದ್ಯಕೀಯ ವಿಮೆಯನ್ನು ವಿತರಿಸಲಾಗುವುದು ಎಂದು ತಿಳಿಸಿದೆ.
ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಕಾಣುವುದು ನನ್ನ ಕನಸು, ಅದು ಸಮಾಜದ ಎಲ್ಲಾ ವರ್ಗಗಳಿಗೆ ಕೆಲಸ ಮಾಡುತ್ತದೆ ಎಂದು ಸೋನಿಯಾ ಗಾಂಧಿ ಹೇಳಿದರು.












Click it and Unblock the Notifications