ನನ್ನ ಪುತ್ರ ರಾಜಿನಾಮೆ ನೀಡುವುದಿಲ್ಲ: ಲಾಲೂ ಸ್ಪಷ್ಟನೆ
ಬಿಹಾರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ತಮ್ಮ ಪುತ್ರ ತೇಜಸ್ವಿ ಯಾದವ್ ರಾಜಿನಾಮೆ ಕೊಡುವುದಿಲ್ಲ. ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಸ್ಪಷ್ಟನೆ.
ಪಾಟ್ನಾ, ಜುಲೈ 13: ಬಿಹಾರದ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ತಮ್ಮ ಪುತ್ರ ತೇಜಸ್ವಿ ಯಾದವ್ ಅವರು ರಾಜಿನಾಮೆ ಸಲ್ಲಿಸುವುದಿಲ್ಲ ಎಂದು ಲಾಲು ಪ್ರಸಾದ್ ಯಾದವ್ ಅವರು ಸ್ಪಷ್ಟಪಡಿಸಿದ್ದಾರೆ.
ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೀಗೆ ಹೇಳಿಕೊಂಡಿರುವ ಅವರು, ಬಿಹಾರದ ಅಭಿವೃದ್ಧಿಯ ದೃಷ್ಟಿಯಿಂದ ತಮ್ಮ ಪುತ್ರ ರಾಜಿನಾಮೆ ಸಲ್ಲಿಸುವುದು ಅನಿವಾರ್ಯ ಎಂದಾದರೆ ಮಾತ್ರ ತೇಜಸ್ವಿ ರಾಜಿನಾಮೆ ನೀಡುತ್ತಾರೆಂದು ಅವರು ತಿಳಿಸಿದ್ದಾರೆ.

ಅಕ್ರಮ ಆಸ್ತಿ ಹಾಗೂ ಭ್ರಷ್ಟಾಚಾರ ಆರೋಪಗಳು ಲಾಲು ಪ್ರಸಾದ್ ಯಾದವ್ ಹಾಗೂ ಅವರ ಕುಟುಂಬದವರ ಮೇಲೆ ಆವರಿಸಿಕೊಂಡಿವೆ.
ಈ ಹಿನ್ನೆಲೆಯಲ್ಲಿ, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ಬಿಹಾರದ ಸಮ್ಮಿಶ್ರ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿರುವ ಲಾಲೂ ಅವರ ಪುತ್ರ ತೇಜಸ್ವಿಯವರ ರಾಜಿನಾಮೆ ಬಗ್ಗೆ ನಿರ್ಧಾರ ಕೈಗೊಳ್ಳಬೇಕೆಂದು ಲಾಲೂ ಪಾಳಯಕ್ಕೆ ಎರಡು ದಿನಗಳ ಹಿಂದೆ 72 ಗಂಟೆಗಳ ಗಡುವು ನೀಡಿದ್ದರು. ಇದರಿಂದ, ಆರ್ ಜೆಡಿಯು ಇಕ್ಕಟ್ಟಿಗೆ ಸಿಲುಕಿತ್ತು.
ಬಿಹಾರದಲ್ಲಿ, ಲಾಲು ಪ್ರಸಾದ್ ಅವರ ಪಕ್ಷವಾದ ರಾಷ್ಟ್ರೀಯ ಜನತಾ ದಳದ (ಆರ್ ಜೆಡಿ) ಜತೆಗೆ ಮೈತ್ರಿ ಮಾಡಿಕೊಂಡಿರುವ ಜನತಾ ದಳ ಯುನೈಟೆಡ್ (ಜೆಡಿಯು) ನಾಯಕ ನಿತೀಶ್ ಕುಮಾರ್ ಅಲ್ಲಿ ಮುಖ್ಯಮಂತ್ರಿಯಾಗಿದ್ದಾರೆ.












Click it and Unblock the Notifications