ಜಿಡಿಪಿ ಬೆಳವಣಿಗೆ ದರ ಕುಸಿತ ಚಿಂತೆಗೆ ಕಾರಣ: ಅರುಣ್ ಜೇಟ್ಲಿ
ನವದೆಹಲಿ, ಆಗಸ್ಟ್ 31: ಏಪ್ರಿಲ್ ನಿಂದ ಜೂನ್ ವರೆಗಿನ ತ್ರೈಮಾಸಿಕದ ಜಿಡಿಪಿ (ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್) ಬೆಳವಣಿಗೆ ದರವು ಶೇ 5.7ಕ್ಕೆ ಕುಸಿದಿದ್ದು, ಆತಂಕಕ್ಕೆ ಕಾರಣವಾಗಿದೆ. ಜನವರಿಯಿಂದ ಮಾರ್ಚ್ ವರೆಗಿನ ತ್ರೈಮಾಸಿಕದಲ್ಲಿದಲ್ಲಿ ಜಿಡಿಪಿ ಶೇ 6.1ರಷ್ಟಿತ್ತು. ಅದೀಗ ಮತ್ತೂ ಕುಸಿತ ಕಂಡು, ಅಂದರೆ ಶೇ 0.4ರಷ್ಟು ಇಳಿಕೆಯಾಗಿ 5.7 ತಲುಪಿದೆ.
ಅಪನಗದೀಕರಣಕ್ಕೆ 'ಶಿಫಾರಸು' ಮಾಡಿದ ಆರ್ ಬಿಐಗೆ ನಾಚಿಕೆ ಆಗಬೇಕು: ಚಿದಂಬರಂ
ಇನ್ನು ಕಳೆದ ವರ್ಷದ ಇದೇ ಅವಧಿಗೆ ಅಂದರೆ ಏಪ್ರಿಲ್ ನಿಂದ ಜೂನ್ ಅವಧಿಗೆ ಜಿಡಿಪಿ ದರ 7.9ರಷ್ಟಿತ್ತು. ಕಳೆದ ಬಾರಿಗೆ ಹೋಲಿಸಿದರೆ ಶೇ 2.2ರಷ್ಟು ಕುಸಿತ ಕಂಡಿದೆ. ಅಪನಗದೀಕರಣ, ಜಿಎಸ್ ಟಿ ಜಾರಿ ಮಾಡಿದ ಪರಿಣಾಮವಾಗಿ ಜಿಡಿಪಿ ದರದ ಬೆಳವಣಿಗೆಯಲ್ಲಿ ಕುಸಿತ ಕಾಣುವಂತಾಗಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.
ಜಿಡಿಪಿ ಬೆಳವಣಿಗೆ ದರ ಇಳಿಕೆಯಾಗಿರುವುದು ಚಿಂತಿಸಬೇಕಾದ ಸಂಗತಿ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಮಾಧ್ಯಮಗಳ ಜತೆಗೆ ಮಾತನಾಡಿದ ಅವರು, ಖಂಡಿತವಾಗಿಯೂ ಇದು ಚಿಂತಿಸಬೇಕಾದ ವಿಷಯ. ಆರ್ಥಿಕತೆಗೆ ಸವಾಲಾಗುವಂಥ ಸಂಗತಿ ಇದು. ಮುಂದಿನ ತ್ರೈಮಾಸಿಕಗಳಲ್ಲಿ ನೀತಿ ನಿರೂಪಣೆ ಹಾಗೂ ಬಂಡವಾಳ ಹೂಡಿಕೆ ಬಗ್ಗೆ ಗಮನಹರಿಸಬೇಕು ಎಂದಿದ್ದಾರೆ.
ಅಪನಗದೀಕರಣ ನಂತರ ಶೇ 99ರಷ್ಟು ಹಣ ಬ್ಯಾಂಕ್ ಗೆ ಜಮೆ: ಆರ್ ಬಿಐ
ದೇಶದಲ್ಲಿ ಉತ್ತಮ ಮುಂಗಾರು ನಿರೀಕ್ಷೆ ಮಾಡಲಾಗಿದ್ದು, ಅದರ ಸಕಾರಾತ್ಮಕ ಪರಿಣಾಮ ಆಗಲಿದೆ. ಉತ್ಪಾದನೆ ಕಡಿಮೆಯಾಗಿ, ಸೇವಾ ವಲಯ ವೃದ್ಧಿಸುತ್ತಿರುವುದು ಜಿಎಸ್ ಟಿಯ ಪರಿಣಾಮ ಎಂದು ಅವರು ಹೇಳಿದ್ದಾರೆ.