ಕಪ್ಪುಹಣ ಇರುವವರಿಗೆ ಮಾತ್ರವಲ್ಲ, ತೆರಿಗೆ ಅಧಿಕಾರಿಗಳಿಗೂ ನಿದ್ದೆಯಿಲ್ಲ!
ತೆರಿಗೆ ಇಲಾಖೆಯ ಅಧಿಕಾರಿಗಳು ನಿದ್ದೆ ಇಲ್ಲದೆ ಕೆಲಸ ಮಾಡುವಂತಾಗಿದೆ. ಏಕೆಂದರೆ ದೇಶದಾದ್ಯಂತ ಬ್ಯಾಂಕ್ ಹಾಗೂ ಆಭರಣ ಮಳಿಗೆಗಳ ವ್ಯವಹಾರಗಳ ಮೇಲೆ ನಿಗಾ ಇಡಬೇಕಾದ ಮಹತ್ವದ ಜವಾಬ್ದಾರಿ ನಿರ್ವಹಿಸಬೇಕಿದೆ.
ಬೆಂಗಳೂರು, ನವೆಂಬರ್ 28: ನೋಟು ರದ್ದು ಘೋಷಣೆ ನಂತರ ತೆರಿಗೆ ಇಲಾಖೆ ಅಧಿಕಾರಿಗಳ ಕೆಲಸ ವಿಪರೀತ ಹೆಚ್ಚಾಗಿದೆ. ಸಿಬ್ಬಂದಿ ಕೊರತೆ ತೀವ್ರವಾಗಿದ್ದು, ಇಲಾಖೆಯು ತನಿಖಾಧಿಕಾರಿಗಳಿಗೆ ಅದಾಗಲೇ ನೀಡಿದ್ದ ರಜಾವನ್ನು ರದ್ದು ಮಾಡಿದೆ. ಇದರ ಜತೆಗೆ ಬೇರೆ ವಿಭಾಗದಿಂದ ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಳ್ಳುತ್ತಿದೆ.
ಕಪ್ಪುಹಣ ಇರುವವರ ಬ್ಯಾಂಕ್ ಹಾಗೂ ಆಭರಣದ ಅಂಗಡಿಗಳ ವ್ಯವಹಾರಗಳ ಮೇಲೆ ಕಣ್ಣಿಡುವುದರಲ್ಲಿ ತೆರಿಗೆ ಇಲಾಖೆ ಅಧಿಕಾರಿಗಳು ನಿರತರಾಗಿದ್ದಾರೆ. ಲೆಕ್ಕ ನೀಡದ ಹಣದ ಮಾಹಿತಿ ಆಧರಿಸಿ ದೇಶದ ವಿವಿಧೆಡೆ ದಾಳಿಗಳನ್ನು ನಡೆಸಲಾಗುತ್ತಿದೆ. ಸಮಸ್ಯೆಗಳು ಸಾಕ್ಷ್ಟಿವೆ ಎಂದು ಕಳೆದ ಹತ್ತು ದಿನಗಳಲ್ಲಿ ಇಪ್ಪತ್ತು ಕಡೆ ದಾಳಿಯಲ್ಲಿ ಭಾಗಿಯಾಗಿದ್ದ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.[ನಗದು ರಹಿತ ವ್ಯವಹಾರಕ್ಕೆ ಹೆಚ್ಚು ಒತ್ತು ನೀಡಿ: ಮೋದಿ ಮನವಿ]
ಬರೀ ವ್ಯವಹಾರಗಳನ್ನು ಮಾತ್ರವಲ್ಲ, ರೌಡಿಗಳು-ಗೂಂಡಾಗಳ ಮೇಲೆ ಕೂಡ ಹದ್ದಿನ ಕಣ್ಣಿಡಲಾಗಿದೆ. ಕಪ್ಪುಹಣ ಇರುವ ಹಲವರು ಹಾಗೂ ಹವಾಲಾ ದಂಧೆ ನಡೆಸುವವರು ತಮ್ಮ ರಕ್ಷಣೆಗೆ ಸಿಬ್ಬಂದಿಯನ್ನು ಇಟ್ಟುಕೊಂಡಿದ್ದಾರೆ. ಅಂಥವರ ಮೇಲೆ ದಾಳಿ ನಡೆಸುವ ಸಂದರ್ಭದಲ್ಲಿ ಸ್ಥಳೀಯ ಪೊಲೀಸರ ನೆರವು ಪಡೆಯುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.[ಚೆನ್ನೈ: ಆಭರಣ ಮಳಿಗೆಗಳ ಮೇಲೆ ಆದಾಯ ತೆರಿಗೆ ದಾಳಿ]
ಅಂಥ ವ್ಯಕ್ತಿಗಳ ವಿಚಾರಣೆ ನಡೆಸುವುದು ಸುಲಭದ ವಿಚಾರವಲ್ಲ. ಹೊಡೆದು-ಬಡಿದು ಮಾಡುವಂತಿಲ್ಲ. ಕೆಲವು ಮುಖ್ಯಪ್ರಶ್ನೆಗಳನ್ನು ಕೇಳಬೇಕಾಗುತ್ತದೆ. ಅದರೆ ಅದಕ್ಕೆ ಉತ್ತರಿಸಲು ನಿರಾಕರಿಸುತ್ತಾರೆ. ಮಾಹಿತಿ ಹಂಚಿಕೊಳ್ಳುವುದಕ್ಕೆ ಹಟ ಮಾಡುತ್ತಾರೆ. ನಿಮಗೇನು ಮಾಡಬೇಕೋ ಅದನ್ನು ಮಾಡಿಕೊಳ್ಳಿ ಎಂಬುದು ಬಹುತೇಕರ ಉತ್ತರವಾಗಿರುತ್ತದೆ ಎನ್ನುತ್ತಾರೆ ಅಧಿಕಾರಿಗಳು.