ಜಾಧವ್ ನ ಹಿಡಿದು ತಂದಿದ್ದು ಇರಾನ್ ನಿಂದಲೇ ಎಂದ ಐಎಸ್ ಐ ಮಾಜಿ ಅಧಿಕಾರಿ
ನವದೆಹಲಿ, ಮೇ 24: ಕುಲಭೂಷಣ್ ಜಾಧವ್ ಬಂಧನದ ವಿಚಾರವಾಗಿ ಪಾಕಿಸ್ತಾನ ಬೊಗಳುತ್ತಿದ್ದ ಸುಳ್ಳು ಬಯಲಾಗಿದೆ. ಕುಲಭೂಷಣ್ ಜಾಧವ್ ನನ್ನು ಇರಾನ್ ನಲ್ಲಿ ಹಿಡಿಯಲಾಯಿತು ಎಂದು ಐಎಸ್ ಐನ ಮಾಜಿ ಅಧಿಕಾರಿ ಅಮ್ಜದ್ ಶೋಯೆಬ್ ಸ್ವತಃ ಹೇಳಿದ್ದಾನೆ. ಇಷ್ಟು ಕಾಲ ಪಾಕಿಸ್ತಾನವು ತನ್ನದೇ ದೇಶದಲ್ಲಿ ಜಾಧವ್ ನನ್ನು ಬಂಧಿಸಿದ್ದಾಗಿ ಹೇಳುತ್ತಿದೆ.
ಕುಲಭೂಷಣ್ ಜಾಧವ್ ತನ್ನ ವ್ಯವಹಾರ ಮಾಡಿಕೊಂಡಿದ್ದವರು. ಪಾಕಿಸ್ತಾನವು ಅವರನ್ನು ಅಪಹರಿಸಿ ತಂದು, ಸುಳ್ಳು ಆರೋಪ ಮಾಡುತ್ತಿದೆ ಎಂದು ಭಾರತವು ಪದೇ ಪದೇ ಹೇಳುತ್ತಿದೆ. ಇದೀಗ ಐಎಸ್ ಐನ ಮಾಜಿ ಅಧಿಕಾರಿಯೇ ಹೇಳಿಕೆ ನೀಡಿರುವುದರಿಂದ ಭಾರತವು ಅಂತರರಾಷ್ಟ್ರೀಯ ಕೋರ್ಟ್ ನಲ್ಲಿ ಮಂಡಿಸುವ ವಾದಕ್ಕೆ ಇನ್ನಷ್ಟು ಪುಷ್ಟಿ ಸಿಕ್ಕಂತಾಗಿದೆ.
ಪಾಕಿಸ್ತಾನದ ಐಎಸ್ ಐ ಅಧಿಕಾರಿಯ ಹೇಳಿಕೆಯನ್ನು ವಾದದಲ್ಲಿ ಸೇರಿಸಬೇಕೆ-ಬೇಡವೆ ಎಂಬ ಬಗ್ಗೆ ಭಾರತ ಇನ್ನೂ ತೀರ್ಮಾನಿಸಿಲ್ಲ. ಯಾವುದೇ ನಿರ್ಧಾರ ಮಾಡುವ ಮುನ್ನ ಕಾನೂನು ಸಲಹೆಗಾರರ ತಂಡದ ಜತೆ ಚರ್ಚಿಸಬೇಕು ಎಂದು ಉನ್ನತ ಮೂಲಗಳು ತಿಳಿಸಿವೆ.
ಈಚೆಗಷ್ಟೇ ಅಂತರರಾಷ್ಟ್ರೀಯ ಕೋರ್ಟ್ ಜಾಧವ್ ಗಲ್ಲು ಶಿಕ್ಷೆಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿತ್ತು. ಅಂತಿಮ ಹಂತದ ವಿಚಾರಣೆ ಇನ್ನೂ ಬಾಕಿಯಿದೆ. ಆಗಸ್ಟ್ ನಲ್ಲಿ ಪ್ರಕರಣದ ಅಂತಿಅ ತೀರ್ಪು ಹೊರಬರುವ ಸಾಧ್ಯತೆಯಿದೆ. ಪಾಕ್ ಸೇನಾ ಕೋರ್ಟ್ ನ ತೀರ್ಪು ರದ್ದುಪಡಿಸುವಂತೆ ಸೂಚಿಸಲು ಭಾರತ ಮನವಿ ಮಾಡಿದೆ.
ಜಾಧವ್ ಗೆ ರಾಜತಾಂತ್ರಿಕ ನೆರವು ನೀಡಲು ಭಾರತ ಮಾಡಿದ ಹದಿನಾರು ಮನವಿಗಳನ್ನು ಪಾಕಿಸ್ತಾನ ತಿರಸ್ಕರಿಸಿದೆ ಎಂದು ಕೂಡ ತಿಳಿಸಲಾಗಿತ್ತು.