ದೇಶಾದ್ಯಂತ ವೋಟ್ ಚೋರಿ, ಶಾಸಕರನ್ನು ಖರೀದಿಸುವುದು ಬಿಜೆಪಿ ಕೆಲಸ: ಸಿದ್ದರಾಮಯ್ಯ ವಾಗ್ದಾಳಿ
ಪಾಟ್ನಾ, ಸೆಪ್ಟೆಂಬರ್ 24: ಚುನಾವಣೆಗಳನ್ನು ಕದಿಯುವ ಮೂಲಕ ಬಿಜೆಪಿಯು, ದೇಶಾದ್ಯಂತ 'ವೋಟ್ ಚೋರಿ'ಯಲ್ಲಿ ತೊಡಗಿಕೊಂಡಿದೆ. ಶಾಸಕರನ್ನು ಖರೀದಿಸುವುದು ಮತ್ತು ಜನರ ಧ್ವನಿಯನ್ನು ಹತ್ತಿಕ್ಕುವುದು ಇವರ ಕೆಲಸ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಗ್ದಾಳಿ ನಡೆಸಿದರು.
ಅನ್ಯಾಯದ ವಿರುದ್ಧ ಸದಾ ಎದ್ದುನಿಂತ ಪಾಟ್ನಾ ಭೂಮಿಯಲ್ಲಿ ಇಂದು ನಿಮ್ಮ ಮುಂದೆ ನಿಂತಿದ್ದೇನೆ. ನಮ್ಮ ಪ್ರಜಾಪ್ರಭುತ್ವವೇ ಅಪಾಯದಲ್ಲಿರುವ ಸಂದರ್ಭದಲ್ಲಿ ಇಂದಿನ ಕಾಂಗ್ರೆಸ್ ಕಾರ್ಯಕಾರಣಿ ಸಭೆ ಬಹಳ ಮಹತ್ವ ಪಡೆದಿದೆ. ಸಂವಿಧಾನದ ಮೂಲ ತತ್ವಗಳಾದ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಮತ್ತು ನ್ಯಾಯವನ್ನು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ, ಮತ್ತು ಅವರ ಸಿದ್ಧಾಂತದ ಗುರುಗಳಾದ ಆರ್ಎಸ್ಎಸ್ (RSS) ಹತ್ತಿಕ್ಕುತ್ತಿವೆ.

ಭಾರತವು ಇಂದು ಆತ್ಮವಂಚನೆಯ ನೆರಳಿನಲ್ಲಿ ಬದುಕುತ್ತಿದೆ. ಸಂಸ್ಥೆಗಳನ್ನು ವಶಪಡಿಸಿಕೊಂಡು,ಸ್ವಾತಂತ್ರ್ಯವನ್ನು ಕಡಿತಗೊಳಿಸಲಾಗುತ್ತಿದ್ದು,ಜನರ ಜನಾದೇಶವನ್ನು ಕದಿಯಲಾಗುತ್ತಿದೆ. ಇಲ್ಲಿನ "ಡಬಲ್ ಇಂಜಿನ್ ಸರ್ಕಾರ" ಎಂಬುದು ನಮ್ಮ ಪ್ರಜಾರಾಜ್ಯದ ಆತ್ಮವನ್ನೇ ಘಾಸಿಗೊಳಿಸುವಂತಹ ಎರಡು ಅಲುಗುಗಳ ಕತ್ತಿಯಾಗಿದೆ. ಕರ್ನಾಟಕದ ಮಹದೇವಪುರ ಇರಲಿ ಅಥವಾ ಆಳಂದ ಇರಲಿ, 'ವೋಟ್ ಚೋರಿ'ಯನ್ನು ರಾಹುಲ್ ಗಾಂಧಿಯವರು ಬಹಿರಂಗಪಡಿಸಿದರು.
ಚುನಾವಣಾ ಅಕ್ರಮಗಳ ವಿರುದ್ಧದ ಅವರ ಅವಿರತ ಹೋರಾಟವು ನ್ಯಾಯಯುತ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಟ್ಟಿರುವ ಪ್ರತಿಯೊಬ್ಬ ಭಾರತೀಯರಿಗೂ ಸ್ಫೂರ್ತಿ ನೀಡಿದೆ. ಇತ್ತೀಚೆಗೆ ಬಿಹಾರದಲ್ಲಿ ಕಾಣಲಾಗುತ್ತಿರುವ 'ಸಿಐಆರ್' (SIR) ದುರಂತವು,ಅಧಿಕಾರಕ್ಕಾಗಿ ಬಿಜೆಪಿ ಯಾವ ಮಟ್ಟಕ್ಕೆ ಇಳಿಯುತ್ತದೆ ಎಂಬುದನ್ನು ಸಾಬೀತುಪಡಿಸುತ್ತದೆ. ಪ್ರಜಾಪ್ರಭುತ್ವ ದೇಶೀಯವಾಗಿ ಕುಂಠಿತವಾಗುತ್ತಿರುವ ಸಂದರ್ಭದಲ್ಲಿ, ಮೋದಿ ಸರ್ಕಾರವು ವಿದೇಶಾಂಗ ನೀತಿಯಲ್ಲಿ ವಿಫಲವಾಗಿದೆ.
ಒಮ್ಮೆ ಜಾಗತಿಕವಾಗಿ ಗೌರವಿಸಲ್ಪಟ್ಟ ಭಾರತದ ವಿದೇಶಾಂಗ ನೀತಿ, ಇಂದು ಮೌನ ಮತ್ತು ಅಧೀನ ಸ್ಥಿತಿಗೆ ಕುಸಿದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ನಾನು ಮಾಡಿದ್ದಾಗಿ ನಾಚಿಕೆಯಿಲ್ಲದೆ ಹೇಳಿಕೊಂಡಾಗ, ಮೋದಿ ಒಂದೂ ಮಾತೂ ಆಡಲಿಲ್ಲ. ಇದು ರಾಜತಾಂತ್ರಿಕತೆ ಅಲ್ಲ.ಇದು ನಮ್ಮ ಸಾರ್ವಭೌಮತ್ವದೊಂದಿಗೆ ಮಾಡಿಕೊಂಡ ರಾಜಿ. ಇಂತಹ ವಿಫಲ ಅಂತಾರಾಷ್ಟ್ರೀಯ ಸಂಬಂಧಗಳು ನಮ್ಮ ಮಿತ್ರರನ್ನು ಶತ್ರುಗಳನ್ನಾಗಿ ಮಾಡುತ್ತಿವೆ ಮತ್ತು ನಮ್ಮ ದೇಶವನ್ನು ಅಸ್ಥಿರಗೊಳಿಸಲು ಶತ್ರುಗಳನ್ನು ಒಗ್ಗೂಡಿಸುತ್ತಿವೆ. ಉದ್ಯೋಗಾವಕಾಶಗಳು ಮತ್ತು ವ್ಯಾಪಾರದ ನಷ್ಟ ಮತ್ತು ಮಿತ್ರರನ್ನು ಕಳೆದುಕೊಂಡಿರುವುದಕ್ಕೆ ಮೋದಿಯವರೇ ನೇರ ಹೊಣೆಗಾರರು.
ಬಿಜೆಪಿಯ ಆಡಳಿತದಲ್ಲಿ ಸಾಮಾನ್ಯ ಭಾರತೀಯರು ನಲುಗಿ ಹೋಗಿದ್ದಾರೆ. ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ, ನಿರುದ್ಯೋಗ ನಮ್ಮ ಯುವಕರ ಬೆನ್ನೆಲುಬನ್ನು ಮುರಿದಿದೆ, ಅಸಮಾನತೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಮೋದಿಯವರ ಸರ್ಕಾರದಿಂದ,ಭಾರತದಲ್ಲಿ ಬಿಲಿಯನೇರ್ಗಳು ಪ್ರಗತಿ ಹೊಂದುತ್ತಿದ್ದು, ಬಡವರು ಎರಡು ಹೊತ್ತಿನ ಊಟಕ್ಕಾಗಿ ಡುತ್ತಿರುಪರದಾಡುತ್ತಿರುವವ ದೇಶವನ್ನಾಗಿ ಮಾಡಿದೆ. ಆದರೆ ಈ ಕತ್ತಲಿನಲ್ಲಿ ಕಾಂಗ್ರೆಸ್ ಆಶಾಕಿರಣವಾಗಿದೆ.
ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯವರ ನಿರ್ಭೀತ ಧ್ವನಿಯು ದೋಷಪೂರಿತ ಜಿಎಸ್ಟಿ (GST) ವ್ಯವಸ್ಥೆಯನ್ನು ಸತತವಾಗಿ ಬಯಲಿಗೆಳೆದಿದೆ. ಕಾಂಗ್ರೆಸ್ ಆಡಳಿತದ ರಾಜ್ಯಗಳು ಕೂಡ ದೋಷಪೂರಿತ ಜಿಎಸ್ಟಿ ವ್ಯವಸ್ಥೆಯನ್ನು ಸುಧಾರಿಸಲು ನಿರಂತರವಾಗಿ ಒತ್ತಾಯಿಸಿದ್ದವು. ಅಂತಹ ತಿದ್ದುಪಡಿಯಿಂದ ಸುಮಾರು 70% ಆದಾಯ ನಷ್ಟವು ತಮ್ಮ ಹೆಗಲ ಮೇಲೆ ಬೀಳುತ್ತದೆ ಎಂಬುದು ತಿಳಿದಿದ್ದರೂ, ನಾವು ಸ್ಥಿರವಾಗಿ ನಿಂತೆವು, ನಮ್ಮ ಜನರನ್ನು ಅನ್ಯಾಯದ ವ್ಯವಸ್ಥೆಯಿಂದ ರಕ್ಷಿಸುವ ಉದ್ದೇಶದಿಂದ ನಾವೆಲ್ಲಾ ಒಗ್ಗಟ್ಟಾಗಿ ನಿಂತೆವು.
ಮೋದಿಯವರು, ಎಂಟು ವರ್ಷಗಳ ಕಾಲ ಸಾಮಾನ್ಯ ಭಾರತೀಯರ ಪ್ರತಿಯೊಂದು ಹನಿ ಬೆವರು ಮತ್ತು ಹಣವನ್ನು ಹಿಂಡುತ್ತಲೇ ಇದ್ದರು. ಅಂತಿಮವಾಗಿ, ಅವರು ಜಿಎಸ್ಟಿಯನ್ನು ಸುಧಾರಿಸಲೇಬೇಕಾಯಿತು, ಆದರೆ ಆಗಲೂ ಅವರು ಸೆಸ್ಗಳ ಮೂಲಕ ಕೇಂದ್ರ ಸರ್ಕಾರದ ಬೊಕ್ಕಸವನ್ನು ತುಂಬಲು ಒಂದು ಮಾರ್ಗವನ್ನು ಕಂಡುಕೊಂಡರು.
ಮೋದಿಯವರು ವೈಫಲ್ಯತೆಯನ್ನು ವಿಜಯವಾಗಿ ಮೆರೆಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಅವರ ಸರ್ಕಾರ ಎಡವಿದಾಗಲೆಲ್ಲ, ಅದನ್ನು ಒಂದು ಸಾಧನೆಯಂತೆ ಬಿಂಬಿಸುತ್ತಾರೆ. ಅವರು ಕಾಂಗ್ರೆಸ್ ಸರ್ಕಾರಗಳ ಕಠಿಣ ಪರಿಶ್ರಮ ಮತ್ತು ನಮ್ಮ ರಾಜ್ಯಗಳ ಅವಿರತ ಪ್ರಯತ್ನಗಳಿಗೆ ನಿರ್ಲಜ್ಜವಾಗಿ ತಾವೇ ಶ್ರೇಯ ಪಡೆಯುತ್ತಾರೆ. ಆದರೆ ಅವರ ದಾಖಲೆಯೇ ನಿರೂಪಿಸುವಂತೆ, ಅವರ ಪೊಳ್ಳು ಭರವಸೆಗಳು ಹಾಗೂ ಖಾಲಿ ಘೋಷಣೆಗಳು ಬಯಲಾಗಿವೆ ಎಂದು ಹೇಳಿದರು.












Click it and Unblock the Notifications