ಶ್ರದ್ಧಾ ಹತ್ಯೆ ಪ್ರಕರಣ: ಮಾದಕ ವ್ಯಸನಿಯಾಗಿದ್ದ ಆರೋಪಿ ಅಫ್ತಾಬ್
ನವದೆಹಲಿ, ನವೆಂಬರ್ 18: ಶ್ರದ್ಧಾ ಹತ್ಯೆ ಪ್ರಕರಣ ದಿನಕ್ಕೊಂದು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಶ್ರದ್ಧಾಳನ್ನು ಕೊಂದ ಆರೋಪ ಹೊತ್ತಿರುವ ಪ್ರೇಮಿ ಆಫ್ತಾಬ್ ಅಮೀನ್ ಪೂನಾವಾಲಾ ತಾನು ಮಾದಕ ವ್ಯಸನಿಯಾಗಿರುವುದಾಗಿ ಹೇಳಿಕೊಂಡಿದ್ದಾನೆ. ಶ್ರದ್ಧಾ ಕೊಲೆಯಾದ ದಿನ ತಾನು ಮಾದಕ ಸೇವಿಸಿರುವುದಾಗಿ ವಿಚಾರಣೆ ವೇಳೆ ಆಫ್ತಾಬ್ ತಿಳಿಸಿದ್ದಾನೆ ಎಂದು ಇಂಡಿಯಾಟುಡೆ ವರದಿ ಮಾಡಿದೆ.
ಮೇ 18 ರಂದು ಮಾದಕದ ಪ್ರಭಾವದಿಂದ ಶ್ರದ್ಧಾಳನ್ನು ಕತ್ತು ಹಿಸುಕಿ ಕೊಂದಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ. ಇಬ್ಬರೂ ನಗದು ಕೊರತೆಯನ್ನು ಎದುರಿಸುತ್ತಿರುವ ಕಾರಣ ಆಗಾಗ ಜಗಳವಾಡುತ್ತಿದ್ದರು. ಶ್ರದ್ಧಾ ಆಫ್ತಾಬ್ ಗಾಂಜಾ ಸೇದಿದ್ದಕ್ಕಾಗಿ ಆಗಾಗ್ಗೆ ಗದರಿಸುತ್ತಿದ್ದಳು. ಕೊಲೆಯ ದಿನದಂದು ಇಬ್ಬರೂ ಖರ್ಚಿನ ಬಗ್ಗೆ ದಿನವಿಡೀ ಜಗಳವಾಡುತ್ತಿದ್ದರು ಎಂದು ವಿಚಾರಣೆಯ ಸಮಯದಲ್ಲಿ ಆಫ್ತಾಬ್ ಹೇಳಿಕೋಂಡಿದ್ದಾರೆ.
ತೀವ್ರ ಮಾತಿನ ಚಕಮಕಿಯ ನಂತರ ಅಫ್ತಾಬ್ ಹೊರಗೆ ಹೋದನು. ಗಾಂಜಾವನ್ನು ಸೇವಿಸಿ ಹಿಂತಿರುಗಿದನು. ತನಗೆ ಶ್ರದ್ಧಾಳನ್ನು ಕೊಲ್ಲಲು ಇಷ್ಟವಿರಲಿಲ್ಲ. ಆದರೆ ಗಾಂಜಾ ಕುಡಿದು ಆಕೆಯ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಅಫ್ತಾಬ್ ಪೊಲೀಸರಿಗೆ ತಿಳಿಸಿದ್ದಾರೆ. ಮೇ 18 ರಂದು ರಾತ್ರಿ 9 ರಿಂದ 10 ಗಂಟೆಯ ನಡುವೆ ಶ್ರದ್ಧಾ ಅವರನ್ನು ಕತ್ತು ಹಿಸುಕಿ ಸಾಯಿಸಲಾಯಿತು ಮತ್ತು ಅಫ್ತಾಬ್ ರಾತ್ರಿಯಿಡೀ ಗಾಂಜಾ ತುಂಬಿದ ಸಿಗರೇಟ್ ಸೇದುತ್ತಾ ದೇಹದ ಬಳಿಯೇ ಇದ್ದರು ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ.
ಮಾದಕ ವ್ಯಸನಿಯಾಗಿದ್ದ ಅಫ್ತಾಬ್
ಕೊಲೆಯ ನಂತರ ಅಫ್ತಾಬ್ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ, ಅವುಗಳನ್ನು 300 ಲೀಟರ್ ಫ್ರಿಡ್ಜ್ನಲ್ಲಿ ಸಂಗ್ರಹಿಸಿ ಮೆಹ್ರೌಲಿ ಅರಣ್ಯದಲ್ಲಿ ಹಲವಾರು ಸ್ಥಳಗಳಲ್ಲಿ ಎಸೆದಿದ್ದಾನೆ. ಅನುಮಾನ ಬಾರದಂತೆ ರಕ್ತದ ಕಲೆಗಳು ಆತ ಡೆಟಾಲ್ನಿಂದ ವರೆಸಿದ್ದನು. ನೀರಿನ ಬಿಲ್ನಿಂದ ಹಿಡಿದು ಫ್ಲಾಟ್ನಲ್ಲಿ ರಕ್ತದ ಕುರುಹುಗಳನ್ನು ಆತ ಸ್ವಚ್ಚಗೊಳಿಸಿದ್ದನು. ಆಫ್ತಾಬ್ ಸಾಕ್ಷಿಗಳನ್ನು ನಾಶಪಡಿಸಿರುವ ಹೊರತಾಗಿಯೂ ತನಿಖಾ ತಂಡ ಗುರುವಾರ ಹಲವು ಸುಳಿವುಗಳನ್ನು ಕಂಡುಹಿಡಿದಿದೆ. ತಂಡವು ಮೆಹ್ರೌಲಿ ಚರಂಡಿಯಲ್ಲಿ ಶ್ರದ್ಧಾ ಅವರ ದೇಹದ ತುಂಡುಗಳನ್ನು ಪತ್ತೆ ಮಾಡಿದ್ದಾರೆ.
ಅಫ್ತಾಬ್ 5 ದಿನಗಳ ಕಸ್ಟಡಿಗೆ
ದೆಹಲಿ ನ್ಯಾಯಾಲಯ ಗುರುವಾರ ದೆಹಲಿ ಪೊಲೀಸರಿಗೆ ಆಫ್ತಾಬ್ ಪೂನಾವಾಲಾ ಅವರನ್ನು 5 ದಿನಗಳ ಕಸ್ಟಡಿಗೆ ನೀಡಿದೆ. ಅಫ್ತಾಬ್ಗೆ ನಾರ್ಕೋ-ಅನಾಲಿಸಿಸ್ ಪರೀಕ್ಷೆಯನ್ನು ನಡೆಸಲು ನ್ಯಾಯಾಲಯವು ಅನುಮತಿ ನೀಡಿದೆ. ಆರೋಪಿಯು ಸಹ ಅದಕ್ಕೆ ಒಪ್ಪಿಗೆಯನ್ನು ನೀಡಿದ್ದಾನೆ.
ಮುಗಿಯದ ಶ್ರದ್ಧಾ ದೇಹದ ತುಂಡುಗಳ ಸಂಗ್ರಹ ಕಾರ್ಯ
ಮೂಲಗಳ ಪ್ರಕಾರ, ಆರೋಪಿಯು ಶ್ರದ್ಧಾ ಜೊತೆ ಹೋಗಿದ್ದ ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಂತಹ ಇತರ ಸ್ಥಳಗಳಿಗೆ ಪೊಲೀಸರು ಆಫ್ತಾಬ್ನನ್ನು ಕರೆದೊಯ್ಯುವ ಸಾಧ್ಯತೆಯಿದೆ. ವಿಚಾರಣೆಯ ಸಮಯದಲ್ಲಿ, ಡೆಹ್ರಾಡೂನ್ನಲ್ಲೂ ದೇಹದ ಕೆಲವು ಭಾಗಗಳನ್ನು ಎಸೆದಿದ್ದೇನೆ ಎಂದು ಅಫ್ತಾಬ್ ಅಧಿಕಾರಿಗಳಿಗೆ ತಿಳಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಇನ್ನೂ ಪತ್ತೆಯಾಗದ ಶ್ರದ್ಧಾ ಫೋನ್
ಮೆಹ್ರೌಲಿ ಅರಣ್ಯ ಪ್ರದೇಶದಲ್ಲಿ ಶ್ರದ್ಧಾ ಅವರ ದೇಹದ ಭಾಗಗಳಿಗಾಗಿ ಎರಡು ದಿನಗಳ ಹುಡುಕಾಟ ನಡೆಸಲಾಗಿದೆ. ಜೊತೆಗೆ ಅಫ್ತಾಬ್ ಬಳಸಿದ ಚಾಕು, ಬಲಿಪಶುವಿನ ಕತ್ತರಿಸಿದ ತಲೆ ಅಥವಾ ಇತರ ದೇಹದ ಭಾಗ, ಆ ದಿನ ಅವಳು ಧರಿಸಿದ್ದ ಬಟ್ಟೆ ಅಥವಾ ಅವಳ ಫೋನ್ನಂತಹ ಪ್ರಮುಖ ಸಾಕ್ಷ್ಯಗಳನ್ನು ಸಂಗ್ರಹಿಸಬೇಕಾಗಿದೆ. ಇವುಗಳನ್ನು ಆಫ್ತಾಬ್ ಮಹಾರಾಷ್ಟ್ರ ಅಥವಾ ದೆಹಲಿಯಲ್ಲಿ ಬಿಸಾಡಿರುವುದಾಗಿ ಹೇಳಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.