ಸುವರ್ಣ ಸಂಭ್ರಮದಲ್ಲಿ ಶಿವಸೇನೆ: ಮಿತ್ರಪಕ್ಷ ಬಿಜೆಪಿಗಿಲ್ಲ ಆಹ್ವಾನ!
ಮುಂಬೈ, ಜೂ 18 (ಪಿಟಿಐ): ಕೇಂದ್ರದಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ತನ್ನದೇ ಮಿತ್ರಪಕ್ಷ ಅಧಿಕಾರದಲ್ಲಿದ್ದರೂ, ಬಿಜೆಪಿಯನ್ನು ಟೀಕಿಸುವುದರಲ್ಲಿ ವಿರೋಧ ಪಕ್ಷಕ್ಕಿಂತಲೂ ಒಂದು ಕೈಮೇಲಾಗಿರುವ ಶಿವಸೇನೆ, ಪಕ್ಷದ ಪ್ರಮುಖ ಕಾರ್ಯಕ್ರಮಮೊಂದಕ್ಕೆ ಬಿಜೆಪಿಯನ್ನು ದೂರವಿಟ್ಟಿದೆ.
ಭಾನುವಾರ ಜೂನ್ 19ರಂದು ನಡೆಯಲಿರುವ ಪಕ್ಷದ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಶಿವಸೇನೆ ಪ್ರಧಾನಿಯನ್ನಾಗಲಿ ಅಥವಾ ಬಿಜೆಪಿಯ ಯಾವ ಮುಖಂಡರಿಗೂ ಆಹ್ವಾನ ನೀಡದೇ, ಬಿಜೆಪಿ ಜೊತೆಗಿನ ಅಂತರವನ್ನು ಮುಂದುವರಿಸಿಕೊಂಡು ಹೋಗಿದೆ.
ಜೂನ್ 19, 1966ರಂದು ಬಾಳಾ ಠಾಕ್ರೆ ಶಿವಸೇನೆಯನ್ನು ಹುಟ್ಟುಹಾಕಿದ್ದರು. 80% ಸಾಮಾಜಿಕ ಕೆಲಸ ಮತ್ತು 20% ರಾಜಕೀಯ ಎನ್ನುವ ರಾಜಕೀಯ ಘೋಷಣೆಯೊಂದಿಗೆ ರಾಜ್ಯ ರಾಜಕೀಯ ರಂಗಕ್ಕೆ ಪ್ರವೇಶಿಸಿದ್ದ ಶಿವಸೇನೆ ಹೆಚ್ಚುಕಮ್ಮಿ ಕುಟುಂಬ ರಾಜಕಾರಣಕ್ಕೇ ಹೆಸರುವಾಸಿ.

ಭಾನುವಾರ (ಜೂ 19) ಮುಂಬೈನಲ್ಲಿ ನಡೆಯಲಿರುವ ಪಕ್ಷದ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಬಿಜೆಪಿಗೆ ನಾವು ಆಹ್ವಾನ ನೀಡಲಿಲ್ಲ.
ಇದು ಪಕ್ಷದ ಕಾರ್ಯಕ್ರಮ, ಹಾಗಾಗಿ ಬಿಜೆಪಿಗೆ ಆಹ್ವಾನ ನೀಡಲಿಲ್ಲ ಎಂದು ಶಿವಸೇನೆ ಮುಖಂಡರು ಹೇಳಿಕೆ ನೀಡಿದ್ದರೂ, ಮುಂದಿನ ವರ್ಷ ನಡೆಯಲಿರುವ ಮುಂಬೈ ಮಹಾನಗರಪಾಲಿಕೆ ಚುನಾವಣೆಗೆ ಏಕಾಂಗಿ ಸ್ಪರ್ಧಿಸುವ ಮುನ್ಸೂಚನೆ ಇದು ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಇತ್ತೀಚೆಗೆ ಅಲಹಾಬಾದ್ ನಲ್ಲಿ ಬಿಜೆಪಿ ತನ್ನ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ನಡೆಸಿತ್ತು. ಶಿವಸೇನೆ ಅಥವಾ ಎನ್ಡಿಎ ಮೈತ್ರಿಕೂಟದ ಯಾವುದೇ ಪಕ್ಷಗಳಿಗೆ ಬಿಜೆಪಿ ಆಹ್ವಾನ ನೀಡಲಿಲ್ಲ. ಹಾಗೆಯೇ, ಇದು ನಮ್ಮ ಪಕ್ಷದ ಕಾರ್ಯಕ್ರಮ ಎಂದು ಶಿವಸೇನೆ ಮುಖಂಡರು ಪಕ್ಷದ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.
ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಬಿಜೆಪಿಯನ್ನು ಆಹ್ವಾನಿಸದೇ ಇರುವುದರ ಬಗ್ಗೆ ಪ್ರತಿಕ್ರಿಯಿಸಿರುವ ಎನ್ಸಿಪಿ, ಎರಡೂ ಪಕ್ಷಗಳಿಗೂ ಮುಂದಿನ ಮುಂಬೈ ಪಾಲಿಕೆ ಚುನಾವಣೆಯಲ್ಲಿ ಸೋಲುವ ಭೀತಿಯಿದೆ. ಇವರ ರಾಜಕೀಯ ನಾಟಕಕ್ಕೆ ಮತದಾರ ಉತ್ತರಿಸಲಿದ್ದಾನೆಂದು ಕಿರಣ್ ಪಾವಸ್ಕರ್ ಹೇಳಿದ್ದಾರೆ. (ಶಿವಸೇನೆಯಿಂದ ಕುಲಕರ್ಣಿ ಮುಖಕ್ಕೆ ಮಸಿ)
ಬಿಜೆಪಿ ಮತ್ತು ಶಿವಸೇನೆ ಹೊಂದಾಣಿಕೆಗೆ ಬೆಂಬಲ ಸೂಚಿಸಿ ಕಳೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮತದಾರ ತೀರ್ಪು ನೀಡಿದ್ದ.
ಆದರೆ, ಎರಡೂ ಪಕ್ಷಗಳು ಕಿತ್ತಾಡಿಕೊಂಡು ಅಭಿವೃದ್ದಿಯತ್ತ ಗಮನ ಹರಿಸುತ್ತಿಲ್ಲ. ಶಿವಸೇನೆಗೆ ವಿರೋಧ ಪಕ್ಷದಲ್ಲಿ ಕೂರಬೇಕೆಂದಿದ್ದರೆ, ಅದನ್ನು ಸ್ವಾಗತಿಸುತ್ತೇವೆಂದು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ.












Click it and Unblock the Notifications