ಭೋಪಾಲ್ ಬಂಗಲೆಯ ತಗಾದೆಯಲ್ಲಿ ನಟಿ ಶರ್ಮಿಳಾ ಠಾಗೋರ್
ಭೋಪಾಲ್, ಆಗಸ್ಟ್ 10: ಇಲ್ಲಿಗೆ ಸಮೀಪದ ಕೋಹ್-ಎ-ಫಿಝಾ ಎಂಬ ಪ್ರಾಂತ್ಯದಲ್ಲಿರುವ ತಮಗೆ ಸೇರಿದ ಜಮೀನಿನಲ್ಲಿ ಸರ್ಕಾರಿ ಬಂಗಲೆಯೊಂದು ವರ್ಷಗಳ ಹಿಂದೆ ನಿರ್ಮಾಣಗೊಂಡಿರುವುದನ್ನು ವಿರೋಧಿಸಿರುವ ಬಾಲಿವುಡ್ ನ ಹಿರಿಯ ನಟಿ ಶರ್ಮಿಳಾ ಠಾಗೋರ್, ಈ ಜಮೀನಿನನ್ನು ಪುನಃ ತಮ್ಮ ವಶಕ್ಕೆ ಪಡೆದುಕೊಳ್ಳಲು ಈಗ ಕಾನೂನಿನ ಮೊರೆ ಹೋಗಿದ್ದಾರೆ.
ಶರ್ಮಿಳಾ ಅವರು ಹೇಳೋದೇನು?
ಎಲ್ಲರಿಗೂ ತಿಳಿದಿರುವಂತೆ, ದೇಶ ಕಂಡ ಅಪ್ರತಿಮ ಕ್ರಿಕೆಟಿಗರಲ್ಲೊಬ್ಬರಾದ ಮನ್ಸೂರ್ ಅಲಿ ಖಾನ್ ಪಟೌಡಿ, ಅವರು ಭೋಪಾಲ್ ನ ರಾಜಮನೆತನದವರು. ಈ ಹಿಂದೆ ಭೋಪಾಲ್ ನ ನವಾಬರಾಗಿದ್ದ ಹಮೀದುಲ್ಲಾ ಖಾನ್ ಅವರ ಮೊಮ್ಮಗ.

ಕೋಹ್-ಎ-ಫಿಝಾ ಪ್ರಾಂತ್ಯದ ಒಂದಿಷ್ಟು ಜಾಗ ಇದೇ ಹಮೀದುಲ್ಲಾ ಖಾನ್ ಅವರಿಗೆ ಸೇರಿದ್ದಾಗಿದ್ದು, ಇಲ್ಲಿ ಸರ್ಕಾರವು ಮಧ್ಯಪ್ರದೇಶದ ಮಾಜಿ ಮುಖ್ಯ ನ್ಯಾಯಾಧೀಶರಿಗಾಗಿ ಸರ್ಕಾರಿ ಬಂಗಲೆಯನ್ನು ಕಟ್ಟಿದೆ. ಇದಕ್ಕೆ ದಾರ್-ಉಸ್-ಸಲಾಂ. ಈ ಬಂಗಲೆಯನ್ನು ಕೆಲ ವರ್ಷಗಳ ಹಿಂದೆ, ಮಧ್ಯಪ್ರದೇಶದಲ್ಲಿ ಮುಖ್ಯ ನ್ಯಾಯಾಧೀಶರಾಗಿದ್ದ ಸಲಾಮುದ್ದೀನ್ ಖಾನ್ ಅವರಿಗೆ ನೀಡಲಾಗಿತ್ತು.
ಈಗ ಆ ಬಂಗಲೆಯಲ್ಲಿ ಸಲಾಮುದ್ದೀನ್ ಮೊಮ್ಮಗಳಾದ ಮಹೀರಾ ಹಾಗೂ ಅವರ ಪತಿ ಆಜಂ ಖಾನ್ ಇದ್ದಾರೆ. ಈ ಸ್ಥಳವು ತನ್ನ ಗಂಡನ ಮನೆತನಕ್ಕೆ ಸೇರಿರುವುದರಿಂದ ಈ ಜಾಗವನ್ನು ತಮಗೆ ಬಿಟ್ಟುಕೊಡಬೇಕು. ಈ ಕೂಡಲೇ, ಆ ಮನೆಯಿಂದ ಆಜಂ ಖಾನ್ ಹೊರನಡೆಯಬೇಕು ಎಂದು ಅವರು ತಹಶೀಲ್ದಾರ್ ಬಳಿ ದೂರು ನೀಡಿದ್ದಾರೆ.
ಪಟೌಡಿ ಕುಟುಂಬಕ್ಕೆ ಯಾವುದೇ ಮಾಹಿತಿ ನೀಡದೇ ಅವರ ಮನೆತನಕ್ಕೆ ಸೇರಿದ ದಾಖಲಾತಿಗಳನ್ನು ತಿದ್ದಿ ಅಲ್ಲಿ ಸರ್ಕಾರಿ ಬಂಗಲೆ ನಿರ್ಮಿಸಲಾಗಿದೆ. ಅಲ್ಲದೆ, ನಿವೃತ್ತ ಮುಖ್ಯ ನ್ಯಾಯಾಧೀಶರಿಗಾಗಿ ನಿರ್ಮಿಸಿರುವ ಬಂಗಲೆಯಲ್ಲಿ ಆಜಂ ಖಾನ್ ಅನಧಿಕೃತವಾಗಿ ನೆಲೆಸಿದ್ದಾರೆ. ಆ ಬಂಗಲೆಯಲ್ಲಿನ ಬೆಲೆಬಾಳುವ ಪುರಾತನ ವಸ್ತುಗಳನ್ನೂ ಸಾಗಣೆ ಮಾಡಿದ್ದಾರೆಂಬುದು ಅವರ ದೂರಿನಲ್ಲಿ ದಾಖಲಾಗಿವೆ.
ಈ ಕುರಿತಂತೆ, ಆಜಂ ಖಾನ್ ಅವರಿಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಕೋಹ್-ಎ-ಫಿಝಾ ಪ್ರಾಂತ್ಯದ ತಹಶೀಲ್ದಾರ್ ತಿಳಿಸಿದ್ದಾರೆ.












Click it and Unblock the Notifications