ಮಣಿಪುರ: ಉಗ್ರರ ದಾಳಿಯಲ್ಲಿ ಐವರು ಯೋಧರು ಸೇರಿ ಏಳು ಜನರ ಸಾವು
ಮಣಿಪುರ, ನವೆಂಬರ್ 13: ಉಗ್ರರು ಹೊಂಚು ಹಾಕಿ ನಡೆಸಿದ ದಾಳಿಯಲ್ಲಿ ಭಾರತೀಯ ಸೇನೆಯ ನಾಲ್ವರು ಯೋಧರು, ಅಸ್ಸಾಂ 46 ರೈಫಲ್ನ ಕಮಾಂಡಿಂಗ್ ಅಧಿಕಾರಿ, ಅವರ ಮಗ, ಪತ್ನಿ ಸೇರಿ ಒಟ್ಟು ಏಳು ಮಂದಿ ಸಾವನ್ನಪ್ಪಿದ್ದಾರೆ.
ಮಣಿಪುರದ ಸಿಂಘಾತ್ನಲ್ಲಿ ಶನಿವಾರ ಈ ಘಟನೆ ನಡೆದಿದ್ದು, ಮೂವರು ಯೋಧರು ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಯೋಧರನ್ನೆಲ್ಲ ಬೆಹಿರಂಗ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಮಣಿಪುರ ಮೂಲದ ಬಂಡುಕೋರರ ಗುಂಪು ಪೀಪಲ್ಸ್ ಲಿಬರೇಶನ್ ಆರ್ಮಿ ಈ ದಾಳಿ ನಡೆಸಿದ್ದಾಗಿ ಮಾಹಿತಿ ಸಿಕ್ಕಿದೆ. ಹುತಾತ್ಮರಾದ ಕಮಾಂಡಿಂಗ್ ಆಫೀಸರ್ನ್ನು ಕರ್ನಲ್ ವಿಪ್ಲವ್ ತ್ರಿಪಾಠಿ ಎಂದು ಗುರುತಿಸಲಾಗಿದೆ. ಇವರು ಮಯನ್ಮಾರ್ ಗಡಿಯಲ್ಲಿ ಇದ್ದರು, ದಾಳಿ ನಡೆಯುವ ಸಂದರ್ಭದಲ್ಲಿ ಅಲ್ಲಿಂದ ತಮ್ಮ ಕುಟುಂಬದೊಂದಿಗೆ ಹಿಂತಿರುಗುತ್ತಿದ್ದರು.

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಯೋಧರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಉಗ್ರರ ಈ ಹೇಡಿತನದ ದಾಳಿ ನಿಜಕ್ಕೂ ನೋವು ತಂದಿದೆ ಮತ್ತು ಖಂಡನೀಯವಾಗಿದೆ. ಐವರು ವೀರ ಯೋಧರನ್ನು ಈ ದೇಶ ಇಂದು ಕಳೆದುಕೊಂಡಿದೆ. ಅದರಲ್ಲೂ ಕಮಾಂಡಿಂಗ್ ಅಧಿಕಾರಿಯ ಕುಟುಂಬವನ್ನು ಟಾರ್ಗೆಟ್ ಮಾಡಿದ್ದು ನಿಜಕ್ಕೂ ದುರಂತ. ಈ ಸಾವಿಗೆ ನ್ಯಾಯ ಒದಗಿಸದೆ ಸುಮ್ಮನಾಗುವುದಿಲ್ಲ ಎಂದಿದ್ದಾರೆ.
ಮಣಿಪುರ ಮುಖ್ಯಮಂತ್ರಿ ಖಂಡನೆ
ಈ ಉಗ್ರ ದಾಳಿಯನ್ನು ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ತೀವ್ರವಾಗಿ ಖಂಡಿಸಿದ್ದಾರೆ. ಟ್ವೀಟ್ ಮಾಡಿರುವ ಅವರು, 46 ಅಸ್ಸಾಂ ರೈಫಲ್ಸ್ ಮೇಲೆ ಉಗ್ರರು ಹೇಡಿತನದಿಂದ, ಹೊಂಚು ಹಾಕಿ ದಾಳಿ ಮಾಡಿದ್ದು ಖಂಡನೀಯ. ಸಿಸಿಪುರ ಎಂಬಲ್ಲಿ ನಡೆದ ಈ ದಾಳಿಯಲ್ಲಿ ಕಮಾಂಡಿಂಗ್ ಅಧಿಕಾರಿ ಕರ್ನಲ್ ವಿಪ್ಲವ್ ತ್ರಿಪಾಠಿ ಮತ್ತವರ ಕುಟುಂಬವೂ ಹತ್ಯೆಗೀಡಾಗಿದೆ. ಯೋಧರು ಹುತಾತ್ಮರಾಗಿದ್ದಾರೆ.

ಉಗ್ರರನ್ನು ಸೆರೆ ಹಿಡಿಯಲು ರಾಜ್ಯದ ಭದ್ರತಾ ಪಡೆಗಳು ಮತ್ತು ಪ್ಯಾರಾಮಿಲಿಟರಿ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ಖಂಡಿತ ಆಗುತ್ತದೆ ಎಂದು ಹೇಳಿದ್ದಾರೆ.












Click it and Unblock the Notifications