ಹಿಮಪಾತದಲ್ಲಿ ಸಿಲುಕಿದ್ದ ಭಾರತೀಯ ಸೇನೆ ಯೋಧರ ಮೃತದೇಹ ಪತ್ತೆ
ಇಟಾನಗರ, ಫೆಬ್ರವರಿ 08: ಅರುಣಾಚಲ ಪ್ರದೇಶದ ಕಮೆಂಗ್ ಸೆಕ್ಟರ್ನ ಎತ್ತರದ ಪ್ರದೇಶದಲ್ಲಿ ಸುರಿದ ಭಾರಿ ಹಿಮಪಾತದಿಂದ ದುರಂತ ಸಂಭವಿಸಿದೆ. ಈ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಏಳು ಭಾರತೀಯ ಸೇನೆಯ ಸಿಬ್ಬಂದಿಗಳು ಹಿಮಪಾತದಲ್ಲಿ ಸಿಕ್ಕಿಬಿದ್ದಿದ್ದರು. ಯೋಧರ ರಕ್ಷಣೆಗಾಗಿ ವಿಶೇಷ ತಂಡ ರಚಿಸಿ, ಸತತವಾಗಿ ಯತ್ನಿಸಲಾಯಿತು, ಆದರೆ, ಕಾರ್ಯಾಚರಣೆ ಫಲಕಾರಿಯಾಗದೆ, ಯೋಧರೆಲ್ಲರೂ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಭಾರತೀಯ ಸೇನೆ ಸೋಮವಾರ ಹಿಮಪಾತದಲ್ಲಿ ಯೋಧರು ಸಿಲುಕಿರುವ ಬಗ್ಗೆ ಮಾಹಿತಿ ಹಂಚಿಕೊಂಡಿತ್ತು. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ನೆರವಾಗಲು ವಿಶೇಷ ತಂಡಗಳನ್ನು ಏರ್ ಲಿಫ್ಟ್ ಮಾಡಿ ಕಳಿಸಲಾಗಿದೆ ಎಂದು ತಿಳಿಸಿತ್ತು.
ಫೆಬ್ರವರಿ 6 ರಿಂದ ಸಿಬ್ಬಂದಿಗಳು ಹಿಮಪಾತದಲ್ಲಿ ಸಿಲುಕಿಕೊಂಡಿದ್ದರು. ಸತತವಾಗಿ ಕಾರ್ಯಾಚರಣೆ ನಡೆಸಿದರೂ ಯೋಧರನ್ನು ಜೀವಂತವಾಗಿ ಉಳಿಸಲು ಸಾಧ್ಯವಾಗಲಿಲ್ಲ. ಕಳೆದ ಕೆಲವು ದಿನಗಳಿಂದ ಭಾರೀ ಹಿಮಪಾತದೊಂದಿಗೆ ಈ ಪ್ರದೇಶವು ಪ್ರತಿಕೂಲ ಹವಾಮಾನವನ್ನು ಹೊಂದಿದೆ ಎಂದು ಪಡೆ ತಿಳಿಸಿದೆ.
ಅರುಣಾಚಲ ಪ್ರದೇಶವನ್ನು ಸಾಮಾನ್ಯವಾಗಿ ಪಶ್ಚಿಮದಲ್ಲಿ ಕಮೆಂಗ್ ಪ್ರದೇಶ ಮತ್ತು ಅರುಣಾಚಲ ಪ್ರದೇಶದ ಉಳಿದ ಭಾಗಗಳಾಗಿ ವಿಂಗಡಿಸಲಾಗಿದೆ. ಇಂಡಿಯನ್ ಆರ್ಮಿ ಈಸ್ಟರ್ನ್ ಕಮಾಂಡ್ ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ ಸೇರಿದಂತೆ 1,346 ಕಿಲೋಮೀಟರ್ ಉದ್ದದ ನೈಜ ನಿಯಂತ್ರಣ ರೇಖೆಯನ್ನು (ಎಲ್ಎಸಿ) ನಿರ್ವಹಿಸುತ್ತದೆ.
Recommended Video
ಈ ಕಮಾಂಡ್ ಮೂರು ಕಾರ್ಪ್ಸ್ ಅನ್ನು ಹೊಂದಿದೆ -- 33 ಕಾರ್ಪ್ಸ್ (ಸಿಕ್ಕಿಂ), ನಾಲ್ಕು ಕಾರ್ಪ್ಸ್ (ಕಾಮೆಂಗ್ ಸೆಕ್ಟರ್) ಮತ್ತು ಮೂರು ಕಾರ್ಪ್ಸ್ (ಅರುಣಾಚಲ ಪ್ರದೇಶದ ಉಳಿದ ಭಾಗ) LAC ಅನ್ನು ನಿರ್ವಹಿಸಲು. ಈ ಪ್ರದೇಶದಲ್ಲಿ, ಸರ್ಕಾರದ ಒತ್ತಡದ ನಂತರ ಭಾರತದ ಗಡಿ ರಸ್ತೆಗಳ ಸಂಸ್ಥೆಯು ರಸ್ತೆ ನಿರ್ಮಾಣಕ್ಕಾಗಿ ಪ್ರದೇಶದ ಮೇಲೆ ಕೇಂದ್ರೀಕರಿಸಿದೆ.