ಬಿಜೆಪಿ ಕಾರ್ಯಕಾರಿಣಿ: ಏನು ಆಗಬಾರದಿತ್ತೋ ಅದೇ ಆಯ್ತು?
ಬಿಜೆಪಿಯ ಹಿರಿಯ ಜೀವ ಎಲ್ ಕೆ ಅಡ್ವಾಣಿಯವರನ್ನು ವ್ಯವಸ್ಥಿತವಾಗಿ ಪಕ್ಷದಲ್ಲಿ ಮೂಲೆಗುಂಪು ಮಾಡಲಾಗುತ್ತಿದೆ ಎನ್ನುವ ಸುದ್ದಿಯ ಬೆಂಕಿಗೆ ಬೆಂಗಳೂರಿನ ಕಾರ್ಯಕಾರಿಣಿ ಮತ್ತಷ್ಟು ತುಪ್ಪ ಸುರಿದು ಮುಕ್ತಾಯಗೊಂಡಿದೆ.
ಈಗಿನ ಬಿಜೆಪಿ ಪೀಳಿಗೆಯ ನಾಯಕರುಗಳು ಪಕ್ಷಕ್ಕೆ ಹೊಸ ಆಯಾಮವನ್ನು ತಂದ ಅಟಲ್ ಮತ್ತು ಅಡ್ವಾಣಿ ಎನ್ನುವ ಎರಡು ಹೆಸರನ್ನು ಮರೆಯಬಾರದು. ಎರಡು ಸ್ಥಾನದಿಂದ 85 ಸ್ಥಾನಕ್ಕೆ ಪಕ್ಷವನ್ನು ಮೇಲೆಕ್ಕೆ ತಂದಿದ್ದು, ಹಲವು ವಿರೋಧದ ನಡುವೆ ಅಡ್ವಾಣಿ ಅಂದು ದೇಶಾದ್ಯಂತ ನಡೆಸಿದ 'ರಥಯಾತ್ರೆ'.
ಮೋದಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುವ ವಿಚಾರದಿಂದ ಹಿಡಿದು, ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ, ಪ್ರಚಾರ, ರಾಷ್ಟ್ರಾಧ್ಯಕ್ಷ ಆಯ್ಕೆ ವಿಚಾರದಲ್ಲಿ ಎಲ್ ಕೆ ಅಡ್ವಾಣಿ ತನ್ನ ಹಿಡಿತ ಕಳೆದುಕೊಳ್ಳುತ್ತಲೇ ಬಂದರು. (ಬೆಂಗಳೂರು ಕಾರ್ಯಕಾರಿಣಿಗೆ ತೆರೆ, ಮುಖ್ಯಾಂಶಗಳು)
ಅಪ್ರತಿಮ ಸಂಘಟನಕಾರನಾಗಿ, ಪಕ್ಷವನ್ನು ಬೇರು ಮಟ್ಟದಿಂದ ಕಟ್ಟಿ ಬೆಳೆಸಿದ ಅಡ್ವಾಣಿ ಈಗ ನೆಪಮಾತ್ರಕ್ಕೆ ಮಾತ್ರ ಮಾರ್ಗದರ್ಶಕರಾಗಿದ್ದಾರಾ ಎನ್ನುವ ಪ್ರಶ್ನೆಗೆ ಮತ್ತಷ್ಟು ಇಂಬು ನೀಡಿದ್ದು ಶನಿವಾರ (ಏ 4) ಬೆಂಗಳೂರಿನಲ್ಲಿ ಮುಕ್ತಾಯಗೊಂಡ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ.
ಪಕ್ಷದ ಯಾವುದೇ ವೇದಿಕೆಯಲ್ಲಿ ಹಿರಿಯ ನಾಯಕ ಅಡ್ವಾಣಿ ಇದ್ದಾರೆಂದರೆ ಅದಕ್ಕೊಂದು ತೂಕವೇ ಬೇರೆ. ಈಗ ಮೋದಿಯ ಭಾಷಣ ಹೇಗೋ ಅಡ್ವಾಣಿ ಭಾಷಣ ಕೇಳಲೆಂದೇ ಜನಸಾಗರ ಹರಿದು ಬರುತ್ತಿತ್ತು. ಮುಂದೆ ಓದಿ..

ಕಾರ್ಯಕಾರಿಣಿ ಅಂತ್ಯ
ಆದರೆ ಬಿಜೆಪಿಯ ಇತ್ತೀಚಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಡ್ವಾಣಿ ಭಾಷಣವಿಲ್ಲದೇ ಬೆಂಗಳೂರು ಕಾರ್ಯಕಾರಿಣಿ ಅಂತ್ಯಗೊಂಡಿದೆ. ಅಲ್ಲದೇ, ಬೆಂಗಳೂರಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲೂ ಅಡ್ವಾಣಿ ಮಾತನಾಡದೇ ಮೋದಿ ಭಾಷಣದೊಂದಿಗೆ ಮುಕ್ತಾಯಗೊಂಡಿದೆ.

ನ್ಯಾಷನಲ್ ಕಾಲೇಜು ಮೈದಾನ
ಬಸವನಗುಡಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡುವವರ ಪಟ್ಟಿಯಲ್ಲಿ ಅಡ್ವಾಣಿ ಹೆಸರಿರಲಿಲ್ಲ. ಅದಕ್ಕಿಂತ ಬೇಸರದ ಸಂಗತಿಯೆಂದರೆ, ಪ್ರಲ್ಹಾದ್ ಜೋಷಿ ಅಡ್ವಾಣಿಯವರನ್ನು ಉಲ್ಲೇಖಿಸಿ, ನಮ್ಮನ್ನೆಲ್ಲಾ ಕೈಹಿಡಿದು ಬೆಳೆಸಿದ ಅಡ್ವಾಣಿವರಿಗೆ ಸ್ವಾಗತ ಎಂದರು. ಆದರೆ, ಮೋದಿ ಮತ್ತು ಶಾ ಅವರನ್ನು ಸನ್ಮಾನಿಸಿದ ರಾಜ್ಯ ಬಿಜೆಪಿ ಘಟಕ ಹಿರಿಯ ಜೀವ ಅಡ್ವಾಣಿಯವರನ್ನು ಸನ್ಮಾನಿಸಲೇ ಇಲ್ಲ.

ಮುಖಂಡರ ಒತ್ತಾಯಕ್ಕೆ ಬೆಂಗಳೂರಿಗೆ ಬಂದ ಅಡ್ವಾಣಿ?
ತನಗೆ ಮತ್ತಷ್ಟು ಮುಜುಗರ ಆಗುವುದನ್ನು ತಪ್ಪಿಸಲು ಅಡ್ವಾಣಿ ಕಾರ್ಯಕಾರಿಣಿಯಲ್ಲಿ ಭಾಗವಹಿಸದೇ ಇರುವ ನಿರ್ಧಾರಕ್ಕೆ ಬಂದಿದ್ದರು. ರಾಷ್ಟ್ರೀಯ ಮಾಧ್ಯಮಗಳು ಅಡ್ವಾಣಿ ಕಾರ್ಯಕಾರಿಣಿಯಲ್ಲಿ ಭಾಗವಹಿಸದಿದ್ದರೆ ಅದನ್ನೇ ಹೈಲೈಟ್ ಮಾಡುವ ಸಾಧ್ಯತೆ ಇರುವುದರಿಂದ, ಮುಖಂಡರ ಒತ್ತಾಯದ ಮೇರೆಗೆ ಅಡ್ವಾಣಿ ಬೆಂಗಳೂರಿಗೆ ಬಂದರು ಎನ್ನುವ ಬಲವಾದ ಸುದ್ದಿ ಬಿಜೆಪಿ ವಲಯದಿಂದ ಕೇಳಿ ಬರುತ್ತಿದೆ.

ಮುಖಂಡರೂ ವಿರೋಧ ವ್ಯಕ್ತಪಡಿಸಿದ್ದರೇ?
ಮೋದಿ ಒಬ್ಬ ಮಾಸ್ ಲೀಡರ್, ದೂರದೃಷ್ಟಿ ಇರುವ ಪ್ರಭಾವಿ ನಾಯಕ ಎನ್ನುವುದನ್ನು ಒಪ್ಪಿಕೊಳ್ಳುವ ವಿಚಾರವಾದರೂ, ಹಿರಿಯ ನಾಯಕನನ್ನು ಸರಿಯಾಗಿ ನಡೆಸಿಕೊಳ್ಳದೇ ಸೈಡ್ ಲೈನ್ ಮಾಡಿದ್ದು ತಪ್ಪು ಎಂದು ಬಿಜೆಪಿಯ ಕೆಲವು ಹಿರಿಯ ಮುಖಂಡರು ಕಾರ್ಯಕಾರಿಣಿಯ ವೇಳೆಯೇ ಆಕ್ಷೇಪ ವ್ಯಕ್ತ ಪಡಿಸಿದ್ದರು ಎನ್ನುವ ಮಾತೂ ಚಾಲ್ತಿಯಲ್ಲಿದೆ.

ಅಟಲ್, ಅಡ್ವಾಣಿ ಭಾಷಣ
ಯಾವುದೇ ಕಾರ್ಯಕಾರಿಣಿಯಲ್ಲಿ ಅಟಲ್, ಅಡ್ವಾಣಿ ಭಾಷಣವಿಲ್ಲದೇ ಅಂತ್ಯಗೊಳ್ಳುತ್ತಿರಲಿಲ್ಲ. ಈ ಹಿಂದೆಯೆಲ್ಲಾ ಅಡ್ವಾಣಿ ಆಶಯ ಭಾಷಣ ಮಾಡಿದರೆ, ಅಟಲ್ ಸಮಾರೋಪ ಭಾಷಣ ಮಾಡುವುದು ಪಕ್ಷದ ಅಲಿಖಿತ ಸಂಪ್ರದಾಯದಂತೆ ನಡೆಯುತ್ತಾ ಬಂದಿತ್ತು.

ಅಡ್ವಾಣಿ ಭಾಷಣ ಮಾಡಲೇ ಇಲ್ಲ
ಬೆಂಗಳೂರಿನಲ್ಲಿ ಮುಕ್ತಾಯಗೊಂಡ ಕಾರ್ಯಕಾರಿಣಿಯಲ್ಲಿ ಅಡ್ವಾಣಿ ಮಾರ್ಗದರ್ಶಿ ಭಾಷಣ ಮಾಡುತ್ತಾರೆ ಎನ್ನಲಾಗುತ್ತಿತ್ತು. ಆದರೆ ಕೊನೆಗೂ ಅಡ್ವಾಣಿ ಭಾಷಣ ಮಾಡಲೇ ಇಲ್ಲ. ಅಮಿತ್ ಶಾ ಬರೆದುಕೊಟ್ಟ ಭಾಷಣವನ್ನು ಅಡ್ವಾಣಿ ಓದಲು ನಿರಾಕರಿಸಿದರು ಎನ್ನುವುದು ಒಂದು ಸುದ್ದಿಯಾದರೆ, ಅಡ್ವಾಣಿಗೆ ಭಾಷಣಕ್ಕೆ ಮೂರು ದಿನವೂ ಪಕ್ಷ ಅವಕಾಶ ನೀಡಲಿಲ್ಲ ಎನ್ನುವ ಅಸ್ಪಷ್ಟ ಸುದ್ದಿಗಳು ಹರಿದಾಡುತ್ತಿವೆ.

ಮೋದಿ, ಅಡ್ವಾಣಿ ನಡುವೆ ಏನೇನೋ ಸುದ್ದಿ
ರಾಷ್ಟ್ರೀಯ ಕಾರ್ಯಕಾರಿಣಿಯ ವೇದಿಕೆಯಲ್ಲಿ ನಾಲ್ಕು ಕುರ್ಚಿಗಳನ್ನು ಮಾತ್ರ ಹಾಕಿತ್ತು. ಮೋದಿ ಪಕ್ಕದಲ್ಲಿ ಅಡ್ವಾಣಿ ಉಪಸ್ಥಿತರಾಗಲು ಬಂದಾಗ ಕೊನೆಯ ಕುರ್ಚಿಯಲ್ಲಿ ಕೂತುಕೊಳ್ಳುವಂತೆ ಮೋದಿ ಸೂಚಿಸಿದರು ಎನ್ನುವ ಸುದ್ದಿಯೂ ಹರಿದಾಡುತ್ತಿದೆ. ಮೋದಿ, ಅಮಿತ್, ಜೇಟ್ಲಿ ಮತ್ತು ಅಡ್ವಾಣಿ ನಾಲ್ಕು ಕುರ್ಚಿಯಲ್ಲಿ ಆಸೀನರಾಗಿದ್ದರು.

ತೇಪೆ ಹಚ್ಚಿದ ಬಿಜೆಪಿ
ಅಡ್ವಾಣಿಯವರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎನ್ನುವುದು ಮಾಧ್ಯಮಗಳ ಸೃಷ್ಟಿ. ಅವರು ನಮ್ಮ ಪಕ್ಷವನ್ನು ದಶಕಗಳ ಕಾಲ ಕಟ್ಟಿ ಬೆಳೆಸಿದವರು. ಅವರಿಂದ ನಾವೆಲ್ಲಾ ಕಲಿತವರು, ಅವರಿಗೆ ನಾವು ಮುಜುಗರ ಮಾಡುತ್ತೀವಾ? ಅವರಿಗೆ ಪಕ್ಷದಲ್ಲಿ ಸಂಪೂರ್ಣ ಗೌರವ ನೀಡಲಾಗುತ್ತಿದೆ, ಅವರೇ ನಮ್ಮ ಮಾರ್ಗದರ್ಶಕರು ಎಂದು ಅರುಣ್ ಜೇಟ್ಲಿ ತೇಪೆ ಹಚ್ಚುವ ಕೆಲಸವನ್ನು ಮಾಡಿದ್ದಾರೆ.

ಹಿರಿಯ ಜೀವಕ್ಕೆ ಬೆಲೆಕೊಡಿ
ಬಿಜೆಪಿಯ ಸಭೆಯಲ್ಲಿ ಏನು ನಡೆಯಿತು ಎನ್ನುವುದು ಒಳಗಿದ್ದವರಿಗೆ ಮಾತ್ರ ಗೊತ್ತು. ಆದರೂ ಹೊರ ಜಗತ್ತಿಗೆ ಅಡ್ವಾಣಿಯರನ್ನು ಹಿರಿಯರು ಎನ್ನುವ ಕಾರಣಕ್ಕಾದರೂ ಗೌರವ ನೀಡಿಲ್ಲ ಎನ್ನುವುದು ಸಾರ್ವಜನಿಕವಾಗಿರುವ ಸುದ್ದಿ. ಇಂದು ಪಕ್ಷ ಈ ಮಟ್ಟಕ್ಕೆ ಬೆಳೆಯಲು ಅಂದು ಅವರು ನಡೆಸಿದ ಪರಿಶ್ರಮವೂ ಕಾರಣ. ಬಹುಷಃ ಖುದ್ದು ಅಡ್ವಾಣಿಯವರು ಈ ಬಗ್ಗೆ ಸ್ಪಷ್ಟನೆ ನೀಡಿದರೆ ಒಳಿತು.












Click it and Unblock the Notifications