ಅಜಿತ್ ದೋವಲ್ ಮೇಲೆ ದಾಳಿಗೆ ಸಂಚು: ಆಘಾತಕಾರಿ ಸಂಗತಿ ಬಹಿರಂಗಪಡಿಸಿದ ಉಗ್ರ
ನವದೆಹಲಿ, ಫೆಬ್ರವರಿ 13: ಒಂದು ವಾರದ ಹಿಂದೆ ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ನಲ್ಲಿ ಬಂಧಿತನಾದ ಲಷ್ಕರ್ ಎ ಮುಸ್ತಫಾ ಉಗ್ರ ಸಂಘಟನೆಯ ಮುಖ್ಯಸ್ಥ ಹಿದಾಯತುಲ್ಲಾ ಮಲಿಕ್ ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾನೆ.
ಪಾಕಿಸ್ತಾನ ಮೂಲದ ತನ್ನ ಜೈಶ್ ಎ ಮೊಹಮ್ಮದ್ ಸಂಘಟನೆಯ ಮುಖ್ಯಸ್ಥರ ಸೂಚನೆಯಂತೆ ದೆಹಲಿಯ ಸರ್ದಾರ್ ಪಟೇಲ್ ಭವನ ಹಾಗೂ ಇತರೆ ಉನ್ನತ ಮಟ್ಟದ ಸ್ಥಳಗಳ ಮೇಲೆ ದಾಳಿ ನಡೆಸಲು ಸ್ಥಳ ಪರಿಶೀಲನೆ ನಡೆಸಿದ್ದಾಗಿ ಮಲಿಕ್ ಬಾಯ್ಬಿಟ್ಟಿದ್ದಾನೆ. ಹೀಗಾಗಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಕಚೇರಿ ಹಾಗೂ ನಿವಾಸದ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
ಮಲಿಕ್ನನ್ನು ಫೆ. 6ರಂದು ಬಂಧಿಸಲಾಗಿತ್ತು. ಆತನಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಬಂಧನದ ವೇಳೆ ವಾಹನವೊಂದನ್ನು ಸಹ ಮುಟ್ಟುಗೋಲು ಹಾಕಲಾಗಿತ್ತು. ಬಂಧನದ ಬಳಿಕ ನಡೆದ ವಿಚಾರಣೆಯಲ್ಲಿ ಮಲಿಕ್ ಅನೇಕ ಆಘಾತಕಾರಿ ಸಂಗತಿಗಳನ್ನು ಹೊರಹಾಕಿದ್ದಾನೆ. ತನ್ನ ಪಾಕಿಸ್ತಾನಿ ಮುಖ್ಯಸ್ಥ 'ಡಾಕ್ಟರ್' ಸೂಚನೆಯಂತೆ 2019ರ ಮೇ 25ರಂದು ದೋವಲ್ ಕಚೇರಿ ಸೇರಿದಂತೆ ನವದೆಹಲಿಯ ಅನೇಕ ಪ್ರಮುಖ ಸ್ಥಳಗಳ ವಿಡಿಯೋ ದಾಖಲಿಸಿದ್ದಾಗಿ ಮಾಹಿತಿ ನೀಡಿದ್ದಾನೆ.

ಸ್ಯಾಂಟ್ರೋ ಕಾರು ಒದಗಿಸಿದ್ದ
ಬಾನ್ ಟೋಲ್ ಪ್ಲಾಜಾ ದಾಳಿ ವೇಳೆ ಬಂಧಿತನಾದ ಮತ್ತೊಬ್ಬ ಉಗ್ರನೊಂದಿಗೆ ಸೇರಿ ಸಾಂಬಾ ಗಡಿ ಪ್ರದೇಶದಲ್ಲಿ ಪರಿಶೀಲನೆ ನಡೆಸಿದ್ದ. 2020ರ ಮೇ ತಿಂಗಳಲ್ಲಿ ದಾಳಿಯೊಂದಕ್ಕೆ ಒಬ್ಬ ಉಗ್ರನಿಗೆ ಸ್ಯಾಂಟ್ರೋ ಕಾರ್ ಒಂದನ್ನು ಕೂಡ ಮಲಿಕ್ ಒದಗಿಸಿದ್ದ ಎನ್ನುವುದು ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ಗೊತ್ತಾಗಿದೆ.

ಶೋಪಿಯಾನ್ನಲ್ಲಿ ಬ್ಯಾಂಕ್ ದರೋಡೆ
ಕಳೆದ ವರ್ಷದ ನವೆಂಬರ್ನಲ್ಲಿ ಶೋಪಿಯಾನ್ನಲ್ಲಿ ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ ನಗದು ಪೂರೈಕೆ ವಾಹನವನ್ನು ಅಡ್ಡಗಟ್ಟಿ 60 ಲಕ್ಷ ರೂ ದರೋಡೆ ಮಾಡಿದ್ದ ಪ್ರಕರಣದಲ್ಲಿ ಜೈಶ್ ಎ ಮೊಹಮ್ಮದ್ನ ಮೂವರು ಉಗ್ರರು ಭಾಗಿಯಾಗಿದ್ದರೆಂದು ಆತ ತಿಳಿಸಿದ್ದಾನೆ.

ಸಹಚರನ ಬಂಧನ
ತನ್ನ ಜತೆ ಸಂಪರ್ಕದಲ್ಲಿದ್ದ ಕನಿಷ್ಠ ಎಂಟು ಉಗ್ರ ಮಾಹಿತಿಯನ್ನು ಹೊರಗೆಡವಿದ್ದಾನೆ. ಬಿಹಾರದ ಚಾಪ್ರಾದಿಂದ ತನ್ನ ಸಹಚರನೊಬ್ಬನಿಗೆ ಏಳು ಪಿಸ್ತೂಲುಗಳನ್ನು ಆತ ಪೂರೈಸಿದ್ದ. ಆತನ ಈ ಸಹಚರ, ಶೋಪಿಯಾನ್ ನಿವಾಸಿ ಜಾನ್ ಮೊಹಮ್ಮದ್ನನ್ನು ಚಂಡೀಗಡದ ಮನೆಯಿಂದ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ.

ಅಜಿತ್ ದೋವಲ್ ಮುಖ್ಯ ಗುರಿ
ಅಜಿತ್ ದೋವಲ್ ಅವರು ಪಾಕಿಸ್ತಾನದಲ್ಲಿನ ಉಗ್ರರ ಹಿಟ್ ಲಿಸ್ಟ್ನಲ್ಲಿದ್ದಾರೆ. 2016ರ ಸರ್ಜಿಕಲ್ ಸ್ಟ್ರೈಕ್ ಮತ್ತು 2019ರ ಬಾಲಕೋಟ್ ವಾಯುದಾಳಿಯ ಬಳಿಕ ದೋವಲ್ ಮೇಲೆ ಕಣ್ಣಿರಿಸಿರುವ ಉಗ್ರರು, ಅವರನ್ನುಗುರಿಯಾಗಿರಿಸಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ. ಹೀಗಾಗಿ ಅವರ ನಿವಾಸಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.












Click it and Unblock the Notifications