ಅಪನಗದೀಕರಣದಂಥ ಯಡವಟ್ಟು ಮತ್ತೆ ಮಾಡಬೇಡಿ ಎಂದರು ಮನ್ ಮೋಹನ್ ಸಿಂಗ್
ಆರ್ಥಿಕ ನೀತಿಗಳ ವಿಚಾರವಾಗಿ ಕೇಂದ್ರ ಸರಕಾರವು ಖಚಿತತೆ ಹಾಗೂ ಪಾರದರ್ಶಕತೆ ಪುನರ್ ಸ್ಥಾಪಿಸಬೇಕು ಎಂದು ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ಗುರುವಾರ ಅಭಿಪ್ರಾಯಪಟ್ಟಿದ್ದಾರೆ.
ಆರ್ಥಿಕತೆ ಹಾಗೂ ಹಣಕಾಸು ಮಾರುಕಟ್ಟೆಯನ್ನು ಅನಿಶ್ಚಿತತೆಗೆ ದೂಡುವಂಥ ಇನ್ನಷ್ಟು ಅಸಾಂಪ್ರದಾಯಿಕ ಹಾಗೂ ಅಲ್ಪಕಾಲೀನ ಕ್ರಮಗಳಿಗೆ ಕೇಂದ್ರ ಸರಕಾರ ಮುಂದಾಗಬಾರದು ಎಂದು ಕೂಡ ಅವರು ಹೇಳಿದ್ದಾರೆ.
ನೋಟ್ ಬ್ಯಾನ್ಗೆ 2 ವರ್ಷ: ಅರುಣ್ ಜೇಟ್ಲಿ ನೀಡಿದರು ಅಂಕಿ-ಅಂಶ
ಅಪನಗದೀಕರಣವು 'ದುರದೃಷ್ಟ' ಮತ್ತು 'ದುರಾಲೋಚನೆ'ಯಿಂದ ಕೂಡಿದ್ದ ಪ್ರಯತ್ನ ಎಂದಿರುವ ಅವರು, ಆ ದುರದೃಷ್ಟ ಹಾಗೂ ದುರಾಲೋಚನೆಯ ಕ್ರಮದ ಅಪನಗದೀಕರಣಕ್ಕೆ ಇಂದಿಗೆ ಎರಡನೇ ವಾರ್ಷಿಕೋತ್ಸವ. ಭಾರತದ ಆರ್ಥಿಕತೆ ಹಾಗೂ ಸಮಾಜದ ಮೇಲೆ ಅದು ಬೀರಿದ ದುಷ್ಪರಿಣಾಮವನ್ನು ಪ್ರತಿಯೊಬ್ಬರು ಅನುಭವಿಸುವಂತಾಗಿದೆ ಎಂದಿದ್ದಾರೆ.
ವಯಸ್ಸು, ಲಿಂಗ, ಧರ್ಮ, ವೃತ್ತಿ ಅಂತ ಯಾವುದೇ ಭೇದವಿಲ್ಲದೆ ಅಪನಗದೀಕರಣವು ಭಾರತದಲ್ಲಿ ಪ್ರತಿಯೊಬ್ಬರ ಮೇಲೂ ಪರಿಣಾಮ ಬೀರಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಪನಗದೀಕರಣಕ್ಕೆ 2 ವರ್ಷ: ಕಪ್ಪುಹಣದ ಬಗ್ಗೆ ಜನಾಭಿಪ್ರಾಯ ಬಹಿರಂಗ
"ಆರ್ಥಿಕ ನೀತಿಗಳಲ್ಲಿ ಖಾಚಿತ್ಯ ಹಾಗೂ ಪಾರದರ್ಶಕತೆಯನ್ನು ಪುನರ್ ಸ್ಥಾಪಿಸಬೇಕು ಎಂದು ಕೇಂದ್ರ ಸರಕಾರವನ್ನು ನಾನು ಒತ್ತಾಯಿಸುತ್ತೇನೆ. ಆರ್ಥಿಕ ದುಸ್ಸಾಹಸಗಳು ದೇಶದ ಮೇಲೆ ದೀರ್ಘಾವಧಿಗೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ನೆನಪಿಸಿಕೊಳ್ಳುವ ದಿನ ಇಂದು. ಆದ್ದರಿಂದ ಆರ್ಥಿಕ ನೀತಿ ನಿರೂಪಣೆಯನ್ನು ತುಂಬ ಆಲೋಚಿಸಿ, ಹುಷಾರಾಗಿ ನಿಭಾಯಿಸಬೇಕು" ಎಂದು ಹೇಳಿದ್ದಾರೆ.
ಸಮಯ ಕಳೆದಂತೆ ಗಾಯದ ಕಲೆ ಇನ್ನಷ್ಟು ಸ್ಪಷ್ಟವಾಗಿದೆ
ಎರಡು ವರ್ಷಗಳ ನಂತರವೂ ಅಪನಗದೀಕರಣದ ಆಘಾತದಿಂದ ಆರ್ಥಿಕತೆಯು ಚೇತರಿಸಿಕೊಳ್ಳಬೇಕಿದೆ. ಸಮಯವೇ ಎಲ್ಲ ಸಮಸ್ಯೆಗೆ ಪರಿಷ್ಕಾರ ಎಂಬುದು ಆಗಾಗ ಕೇಳಿಬರುವ ಮಾತು. ಆದರೆ ದುರದೃಷ್ಟದ ವಿಚಾರ ಏನೆಂದರೆ, ಅಪನಗದೀಕರಣದ ವಿಚಾರದಲ್ಲಿ ಸಮಯ ಕಳೆದಂತೆ ಆದ ಗಾಯ ಹಾಗೂ ಕಲೆ ಇನ್ನಷ್ಟು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಯುವ ಜನತೆಗೆ ಉದ್ಯೋಗ ಸೃಷ್ಟಿ ಆಗುತ್ತಿಲ್ಲ
ಭಾರತದ ಆರ್ಥಿಕತೆಯ ಆಧಾರ ಸ್ತಂಭಗಳು ಎನಿಸಿಕೊಂಡ ಸಣ್ಣ ಹಾಗೂ ಮಧ್ಯಮ ಪ್ರಮಾಣದ ಉದ್ಯಮಗಳು ಅಪನಗದೀಕರಣದ ಆಘಾತದಿಂದ ಚೇತರಿಸಿಕೊಂಡೇ ಇಲ್ಲ. ಆರ್ಥಿಕತೆ ಹೀಗೆ ಡೋಲಾಯಮಾನ ಸ್ಥಿತಿಯಲ್ಲಿ ಇರುವುದರಿಂದಲೇ ನಮ್ಮ ಯುವ ಜನತೆಗೆ ಅಗತ್ಯ ಪ್ರಮಾಣದ ಉದ್ಯೋಗ ಸೃಷ್ಟಿ ಕೂಡ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಅಪನಗದೀಕರಣಕ್ಕೆ ಎರಡು ವರ್ಷ ಮೋದಿ ವಿರುದ್ಧ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ
ಅಪನಗದೀಕರಣ ಸೃಷ್ಟಿಸಿದ ಭೂತ ನಗದು ಸಮಸ್ಯೆ
ಅಪನಗದೀಕರಣ ಸೃಷ್ಟಿಸಿದ ಭೂತವೇ ನಗದು ಸಮಸ್ಯೆ. ಇದರಿಂದ ಹಣಕಾಸು ಮಾರುಕಟ್ಟೆ ಮೇಲೂ ದುಷ್ಪರಿಣಾಮ ಆಗಿದೆ. ಮೂಲಸೌಕರ್ಯ ಹಾಗೂ ಬ್ಯಾಂಕಿಂಗೇತರ ಹಣಕಾಸು ಕಂಪನಿಗಳ ಇಂದಿನ ದುಃಸ್ಥಿತಿಗೆ ಕಾರಣವಾಗಿದೆ. ಇನ್ನೂ ನಮಗೆ ಅಪನಗದೀಕರಣದ ದುಷ್ಪರಿಣಾಮ ಪೂರ್ಣ ರೂಪದಲ್ಲಿ ಅನುಭವಕ್ಕೆ ಬಂದಿಲ್ಲ. ಡಾಲರ್ ವಿರುದ್ಧ ರುಪಾಯಿ ಮೌಲ್ಯ ಕುಸಿತ, ಏರುತ್ತಿರುವ ಕಚ್ಚಾ ತೈಲ ಬೆಲೆ ಕೂಡ ಏರಿ, ಸ್ಥೂಲ ಆರ್ಥಿಕತೆ ಅಲುಗಾಡುವಂತಾಗಿದೆ ಎಂದು ಹೇಳಿದ್ದಾರೆ.
2016ನೇ ಇಸವಿಯ ನವೆಂಬರ್ 8ನೇ ತಾರೀಕು ನೋಟು ನಿಷೇಧ
ಆ ಕಾರಣಕ್ಕೆ ಇನ್ನು ಮುಂದೆ ಆರ್ಥಿಕತೆ ಹಾಗೂ ಹಣಕಾಸು ಮಾರುಕಟ್ಟೆ ಮೇಲೆ ದುಷ್ಪರಿಣಾಮ ಬೀರುವ ಇಂಥ ಅಸಾಂಪ್ರದಾಯಿಕ ಹಾಗೂ ಅಲ್ಪಕಾಲೀನ ತೀರ್ಮಾನಗಳನ್ನು ತೆಗೆದುಕೊಳ್ಳಬಾರದು ಎಂದು ಮನ್ ಮೋಹನ್ ಸಿಂಗ್ ಅವರು ಸಲಹೆ ಮಾಡಿದ್ದಾರೆ. 2016ನೇ ಇಸವಿಯ ನವೆಂಬರ್ 8ನೇ ತಾರೀಕು ಪ್ರಧಾನಿ ನರೇಂದ್ರ ಮೋದಿ 500 ಹಾಗೂ 1000 ರುಪಾಯಿ ನೋಟುಗಳ ನಿಷೇಧ ಮಾಡಿದ್ದರು. ಅದಾಗಿ ಇಂದಿಗೆ ಎರಡು ವರ್ಷ. ಈ ಬಗ್ಗೆ ಸಾಕಷ್ಟು ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಲೇ ಇವೆ.
ಕಪ್ಪು ಹಣ ನಿಯಂತ್ರಣವು ಸರಕಾರ ಉದ್ದೇಶವಾಗಿತ್ತು
ಕಪ್ಪು ಹಣ ನಿಯಂತ್ರಣ ಆಯಿತು ಹಾಗೂ ಉಗ್ರರಿಗೆ ದೊರೆಯುತ್ತಿದ್ದ ಹಣಕಾಸು ನೆರವು ನಿಂತುಹೋಯಿತು ಎಂಬುದು ಸರಕಾರದ ವಾದ. ಆದರೆ ಅದು ವ್ಯರ್ಥ ಪ್ರಯತ್ನ ಎಂಬುದು ವಿರೋಧ ಪಕ್ಷಗಳ ಆಕ್ಷೇಪ. ಇನ್ನು ಆಗ ಚಲಾವಣೆಯಲ್ಲಿದ್ದ ಹಣ ಪೂರ್ಣ ಪ್ರಮಾಣದಲ್ಲಿ ಬ್ಯಾಂಕ್ ಗೆ ಹಿಂತಿರುಗಿತು ಎಂದು ಆರ್ ಬಿಐ ಮುಂದಿಟ್ಟಿರುವ ಅಂಕಿ-ಅಂಶಗಳು ಬಯಲು ಮಾಡಿವೆ.