ರೈಲುಗಳು ತಡವಾದರೆ ಪ್ರಯಾಣಿಕರಿಗೆ ಪರಿಹಾರ ನೀಡಬೇಕು: ಸುಪ್ರೀಂಕೋರ್ಟ್
ನವದೆಹಲಿ, ಸೆಪ್ಟೆಂಬರ್ 09: ರೈಲುಗಳು ತಡವಾದರೆ ಪ್ರಯಾಣಿಕರಿಗೆ ಪರಿಹಾರ ನೀಡಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.
ಪ್ರತಿಯೊಬ್ಬ ಪ್ರಯಾಣಿಕನ ಸಮಯವು ಕೂಡ ತುಂಬಾ ಅಮೂಲ್ಯವಾದದ್ದು, ತನ್ನ ನಿಯಂತ್ರಣ ಮೀರಿ ರೈಲು ವಿಳಂಬವಾಗಿದೆ ಎಂದು ಸಾಬೀತುಪಡಿಸದ ಹೊರತು ವಿಳಂಬ ಮತ್ತು ತಡವಾಗಿ ಬರುವುದಕ್ಕೆ ಪ್ರಯಾಣಿಕರಿಗೆ ಪರಿಹಾರ ನೀಡಬೇಕು ಎಂದು ಮಹತ್ವದ ಆದೇಶ ಹೊರಡಿಸಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಅನಿರುದ್ಧ ಬೋಸ್ ಅವರ ನ್ಯಾಯಪೀಠ, ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ(ಎನ್ ಸಿಡಿಆರ್ ಸಿ) ತೀರ್ಪಿನ ವಿರುದ್ಧ ಉತ್ತರ ಪಶ್ಚಿಮ ರೈಲ್ವೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದೆ.

ರೈಲು ವಿಳಂಬದಿಂದಾಗಿ ಕುಟುಂಬಸ್ಥರು ವಿಮಾನಯಾನ ತಪ್ಪಿಸಿಕೊಂಡರು. ಇದರಿಂದ ದುಬಾರಿ ಟ್ಯಾಕ್ಸಿ ಮೂಲಕ ಶ್ರೀನಗರಕ್ಕೆ ತೆರಳಬೇಕಾಗಿ ಬಂದಿತ್ತು. ವಿಮಾನಯಾನ ಮಿಸ್ ಆಗಿದ್ದು ಮಾತ್ರವಲ್ಲದೇ ದಾಲ್ ಸರೋವರದಲ್ಲಿ ದೋಣಿ ಬುಕ್ಕಿಂಗ್ ಮಾಡಿದ್ದು ಕೂಡ ವ್ಯರ್ಥವಾಗಿತ್ತು.
ಎನ್ ಸಿಡಿಆರ್ ಸಿ, ರೈಲ್ವೆ ಸೇವೆಯಲ್ಲಿ ವ್ಯತ್ಯಯ ಇದೆ ಎಂದು ಅಭಿಪ್ರಾಯಪಟ್ಟಿತ್ತು ಮತ್ತು ಪ್ರಯಾಣಿಕರಿಗೆ ಟ್ಯಾಕ್ಸಿ ವೆಚ್ಚ 15,000 ರೂ, ಬುಕ್ಕಿಂಗ್ ವೆಚ್ಚ 10000 ರೂ. ಹಾಗೂ ಮಾನಸಿಕ ಒತ್ತಡಕ್ಕೆ ಪರಿಹಾರವಾಗಿ 5 ಸಾವಿರ ರೂಪಾಯಿ ನೀಡುವಂತೆ ವಾಯುವ್ಯ ರೈಲ್ವೆ ಇಲಾಖೆಗೆ ಆದೇಶ ನೀಡಿತ್ತು.
2016ರಲ್ಲಿ ಸಂಜಯ್ ಶುಕ್ಲಾ ಹಾಗೂ ಇತರ ಮೂವರು ಕುಟುಂಬಸ್ಥರ ಜೊತೆಗೆ ಜಮ್ಮುವಿಗೆ ಪ್ರಯಾಣ ಬೆಳೆಸುವ ವೇಳೆ ರೈಲು ನಾಲ್ಕು ಗಂಟೆ ವಿಳಂಬವಾಗಿದ್ದಕ್ಕೆ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಎನ್ ಸಿಡಿಆರ್ ಸಿ ಪ್ರಯಾಣಿಕರಿಗೆ ಪರಿಹಾರ ನೀಡಬೇಕು ಎಂದು ಆದೇಶ ನೀಡಿತ್ತು. ಈಗ ಎನ್ ಸಿಡಿಆರ್ ಸಿ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
ರೈಲ್ವೆ ಯೋಜನೆಗಳ ಅನುಷ್ಠಾನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಮನವಿ
ಕರ್ನಾಟಕದಲ್ಲಿ ಈಗಾಗಲೇ ಪ್ರಗತಿಯಲ್ಲಿರುವ ರೈಲ್ವೆ ಅಭಿವೃದ್ಧಿ ಯೋಜನೆಗಳ ಕಾಮಗಾರಿಗಳನ್ನು ತೀವ್ರಗತಿಯಲ್ಲಿ ಕಾರ್ಯಗತಗೊಳಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿದ ನಂತರ ಮಾಹಿತಿ ನೀಡಿದ್ದಾರೆ. "ಕಲಬುರ್ಗಿಯಲ್ಲಿ ರೈಲ್ವೆ ಡಿವಿಜನ್ ಸ್ಥಾಪಿಸುವ ಬೇಡಿಕೆ ಇದೆ. ಇದರಿಂದ ಆ ಭಾಗದಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಅನುಕೂಲವಾಗಲಿದೆ. ಹುಬ್ಬಳ್ಳಿ- ಅಂಕೋಲಾ ರೈಲ್ವೇ ಮಾರ್ಗ ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದೆ.
ಈ ಪ್ರಕರಣ ಹೈಕೋರ್ಟಿನಲ್ಲಿದೆ. ಹೊಸ ಡಿ.ಪಿ.ಆರ್ ಮಾಡಲಾಗಿದ್ದರೂ ಅದನ್ನು ಪ್ರಶ್ನಿಸಲಾಗಿದೆ. ಆದಷ್ಟು ಬೇಗ ಆ ತಡೆಯಾಜ್ಞೆಯನ್ನು ತೆರವುಗೊಳಿಸಲು ಪ್ರಯತ್ನಿಸಿ ಕಾಮಗಾರಿ ಪ್ರಾರಂಭಿಸುವಂತೆ ಮನವಿ ಮಾಡಿದ್ದೇನೆ" ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
"ಬೆಂಗಳೂರು ಸಬ್ಅರ್ಬನ್ ರೈಲ್ವೆ ಯೋಜನೆಯನ್ನು ಆದಷ್ಟು ಬೇಗನೆ ಜಾರಿಗೆ ತರಬೇಕು. ಇದಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ.
ಕೆ-ರೈಡ್ ಮತ್ತು ಕರ್ನಾಟಕದ ನಡುವೆ ರಿಯಾಯಿತಿ ಒಪ್ಪಂದ ಆಗಬೇಕು. ಈ ಕುರಿತು ಹಿರಿಯ ಅಧಿಕಾರಿಗಳ ಜತೆ ಚರ್ಚೆ ಮಾಡಿ ತ್ವರಿತಗತಿಯಲ್ಲಿ ಮುಗಿಸುವಂತೆ ಮನವಿ ಮಾಡಿದ್ದೇನೆ" ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ.
ಕಲಬುರಗಿಯಲ್ಲಿ ರೈಲ್ವೆ ಡಿವಿಜನ್ ಸ್ಥಾಪನೆಗೆ ಮನವಿ ಮಾಡಲಾಗಿದೆ. ಇದೇ ವೇಳೆ ಹುಬ್ಬಳ್ಳಿ ಅಂಕೋಲಾ ರೈಲ್ವೆ ಯೋಜನೆ ಹಾಗೂ ಬೆಂಗಳೂರು ಸರ್ಬನ್ ಯೋಜನೆಗೆ ವೇಗನೀಡಲು ಮನವಿ ಮಾಡಲಾಗಿದೆ. ಭಾರತ್ ನೆಟ್ ಮೂಲಕ ನೆಟ್ ವರ್ಕಿಂಗ್ ಆರಂಭಿಸಲು ಮನವಿ ಮಾಡಿದೆ. ಇದಕ್ಕೆ ಕೇಂದ್ರ ಸಚಿವರು ಸಹಮತ ವ್ಯಕ್ತಪಡಿಸಿದ್ದಾರೆ.
ಮಧ್ಯ ಮತ್ತು ಉತ್ತರ ಕರ್ನಾಟಕವನ್ನು ಪಶ್ಚಿಮ ಕರಾವಳಿಗೆ ಸಂಪರ್ಕಿಸಲು ಈ ಮಾರ್ಗವು ನಿರ್ಣಾಯಕವಾಗಿದೆ. ಪ್ರಸ್ತಾವಿತ ಮಾರ್ಗವು ಅಂಕೋಲಾದ ಬಳಿ ಕೊಂಕಣ ರೈಲ್ವೆಯನ್ನು ಸಂಪರ್ಕಿಸುತ್ತದೆ ಮತ್ತು ಕರಾವಳಿ, ಮಧ್ಯ ಮತ್ತು ಉತ್ತರ ಕರ್ನಾಟಕದ ನಡುವೆ ಅತ್ಯಂತ ಅಗತ್ಯವಾದ ಸಂಪರ್ಕವನ್ನು ಒದಗಿಸುತ್ತದೆ ಎಂದು ಅವರು ಹೇಳಿದರು.












Click it and Unblock the Notifications