ಜಲ್ಲಿಕಟ್ಟು ನಿಷೇಧ ಮುಂದುವರೆಯಲಿದೆ, ತ್ವರಿತ ಆದೇಶ ಸಾಧ್ಯವಿಲ್ಲ
ಮಕರ ಸಂಕ್ರಾಂತಿಗೂ ಮುನ್ನ ಜಲ್ಲಿ ಕಟ್ಟು ಕುರಿತ ಪ್ರಕರಣದ ಆದೇಶ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಈ ಮೂಲಕ ಜಲ್ಲಿಕಟ್ಟು ವಿರುದ್ಧದ ನಿಷೇಧ ಮುಂದುವರೆಯಲಿದೆ ಎಂದು ಸುಪ್ರೀಂಕೋರ್ಟ್ ಗುರುವಾರ ಸ್ಪಷ್ಟಪಡಿಸಿದೆ.
ನವದೆಹಲಿ, ಜನವರಿ 12: ಮಕರ ಸಂಕ್ರಾಂತಿಗೂ ಮುನ್ನ ಜಲ್ಲಿ ಕಟ್ಟು ಕುರಿತ ಪ್ರಕರಣದ ಆದೇಶ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಈ ಮೂಲಕ ಜಲ್ಲಿಕಟ್ಟು ವಿರುದ್ಧದ ನಿಷೇಧ ಮುಂದುವರೆಯಲಿದೆ ಎಂದು ಸುಪ್ರೀಂಕೋರ್ಟ್ ಗುರುವಾರ ಸ್ಪಷ್ಟಪಡಿಸಿದೆ.
ಜಲ್ಲಿಕಟ್ಟು ಕ್ರೀಡೆ ಪರ ವಾದಿಸಿದ್ದ ತಮಿಳುನಾಡು ಸರ್ಕಾರಕ್ಕೆ ಸುಪ್ರೀಂಕೋರ್ಟಿನ ಆದೇಶದಿಂದ ಹಿನ್ನಡೆಯಾಗಿದೆ.

ಭಾನುವಾರದಂದು ಪೊಂಗಲ್(ಮಕರ ಸಂಕ್ರಾಂತಿ) ಹಾಗೂ ಜಲ್ಲಿಕಟ್ಟು ಆಚರಣೆಗೆ ತಮಿಳುನಾಡಿನಲ್ಲಿ ಸಿದ್ಧತೆ ನಡೆಸಲಾಗಿದೆ. ಆದರೆ, ಶನಿವಾರದೊಳಗೆ ಈ ಬಗ್ಗೆ ಆದೇಶ ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.[ಜಲ್ಲಿಕಟ್ಟು,ಅಪಾಯಕಾರಿ ರೋಮಾಂಚನಕಾರಿ : ಟ್ವೀಟ್ಸ್ ]
ತಮಿಳುನಾಡಿನ ಜನಪ್ರಿಯ ಗೂಳಿಯ ಕಾಳಗವಾದ ಜಲ್ಲಿಕಟ್ಟು ಸಾಹಸ ಕ್ರೀಡೆಗೆ ಇರುವ ಕಾನೂನು ತೊಡಕುಗಳನ್ನು ತೆಗೆದುಹಾಕುವಂತೆ ಕೇಂದ್ರ ಸರ್ಕಾರವು ಸುಗ್ರೀವಾಜ್ಞೆ ಹೊರಡಿಸಬೇಕೆಂದು ಎಐಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ವಿಕೆ ಶಶಿಕಲಾ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರದ ಮುಖೇನ ಆಗ್ರಹಪೂರ್ವಕ ಮನವಿ ಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಪೊಂಗಲ್(ಸಂಕ್ರಾಂತಿ) ಹಬ್ಬದ ಮುಖ್ಯ ಭಾಗವಾದ "ಜಲ್ಲಿಕಟ್ಟು" ಅಥವಾ "ಮಂಜು ವೀರಟ್ಟು" ಸಾಹಸ ಪ್ರಧಾನ ರೋಮಾಂಚನಕಾರಿ ಆಟವಾಗಿದೆ. ಆದರೆ, ತಮಿಳುನಾಡು ಅಸೆಂಬ್ಲಿ ಚುನಾವಣೆಯನ್ನು ಮುಂದಿಟ್ಟುಕೊಂಡು ಬಿಜೆಪಿ ಘಟಕ ಒತ್ತಡ ಹೇರಿ ಕೇಂದ್ರ ಸರ್ಕಾರದ ಸಮ್ಮತಿ ಪಡೆದಿದೆ ಎಂಬ ಕೂಗು ಕೇಳಿ ಬಂದಿದೆ. ಪ್ರಾಣಿಗಳಿಗೆ ಹಿಂಸೆ ನೀಡುವ ಆಚರಣೆ ಬೇಡ ಎಂದು ಪರಿಸರ ಹಾಗೂ ಪ್ರಾಣಿ ಪ್ರಿಯ ಸಂಘಟನೆಗಳು ಕಾನೂನು ಸಮರ ನಡೆಸುತ್ತಿವೆ.
ಜಲ್ಲಿಕಟ್ಟು ನಿಷೇಧಕ್ಕೆ ಕುರಿತಂತೆ 2014ರಲ್ಲಿ ಸುಪ್ರೀಂಕೋರ್ಟ್ ನೀಡಿದ ಆದೇಶದಂತೆ ಕಳೆದ ವರ್ಷ ಕೂಡಾ ಸುಪ್ರೀಂಕೋರ್ಟಿನ ವಿಭಾಗೀಯ ಪೀಠ ಜಲ್ಲಿಕಟ್ಟು ಆಚರಣೆ ಮಾಡದಂತೆ ತಡೆ ನೀಡಿತ್ತು.












Click it and Unblock the Notifications